Friday, January 8, 2010

------------------:ತಾಳ ತಪ್ಪಿದ ಪ್ರೇಮ ರಾಗ :-------------------


ನಿಮಗಿದನ್ನು ಹೇಗೆ ಹೇಳಬೇಕೆಂಬುದೇ ತಿಳಿಯುತ್ತಿಲ್ಲ...
ಕಥೆಯಾದರೆ ಹೇಗೋ ಆದಿಯ ಎಳೆಯನ್ನು ಎಳೆದು ತಂದು ಶುರು ಮಾಡಬಹುದಾಗಿತ್ತು.. ಆದರೆ ಈ ಘಟನೆ ನಡೆದದ್ದು ಮಾತ್ರ ನನ್ನ ಕಣ್ಣ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ.. ಪ್ರತಿಯೊಬ್ಬರ ಬದುಕಿನಲ್ಲೂ ಭವಿಷ್ಯದ ಭವಿತವ್ಯಕ್ಕೆ ನಾಂದಿ ಹಾಡುವ ಪ್ರಮುಖ ಘಟ್ಟಗಳಲ್ಲಿ ಜೀವನ ಸಂಗಾತಿಯ ಆಯ್ಕೆಯೂ ಒಂದು. ನಾವೆಲ್ಲರೂ ಕೂಡ ಈ ಕಾಲಘಟ್ಟಕ್ಕೆ ಹತ್ತಿರವಾಗಿದ್ದೇವೆ ಅಥವಾ ಈಗ ತಾನೆ ಆ ಘಟ್ಟವನ್ನು ದಾಟಿ ಬಂದಿದ್ದೇವೆ, ನಿಮ್ಮೆಲ್ಲರಂತೆ ನನ್ನಲ್ಲಿಯೂ ಹುಡುಗಿಯೊಬ್ಬಳು ನನ್ನ ಮನಸ್ಸನ್ನು ಸೆಳೆದಾಗ ಮೂಡಿದ ಪುರುಷ ಸಹಜ ಕಾಮನೆಗಳು, ತಳಮಳಗಳು, ಪರಿಣಾಮಗಳು, ಕಂಪನಗಳಿವು,

ಹೌದು ... ನಮ್ಮಿಬ್ಬರ ಭೇಟಿಯೂ ಹಾಗೆ ಆಗಿದ್ದು, ನೀವಿದನ್ನು ಪ್ರೇಮಪುಸ್ತಕಗಳಲ್ಲಿ ರೂಪಿಸಿರುವ ಕಥೆಯೆನ್ನಿ,ಸಾವಿರಾರು ಚಿತ್ರಗಳಲ್ಲಿ ಬಂದಿರುವ ದೃಶ್ಯದಷ್ಟು ಸಿನಿಮೀಯವೆನ್ನಿ, ನಾಟಕೀಯವೆನ್ನಿ, ನನ್ನದೇನೂ ಅಭ್ಯಂತರವಿಲ್ಲ. ಈ ವಾಸ್ತವ ಜೀವನದಲ್ಲಿ ನಡೆದ ಪ್ರೇಮಕಥೆಯ ತಿರುಳನ್ನು ವೈಯಕ್ತಿಕ ವೆಂದೆನಿಸಿದರೂ ನನ್ನ ಬರವಣಿಗೆಯ ತೃಶೆ ತೀರಿಸಿಕೊಳ್ಳಲು ನಿಮ್ಮ ಮುಂದೆ ಇಡುತ್ತಿದ್ದೇನೆ.

ಎಂದಿನಂತೆ ಬೆಳಗಿನ ನನ್ನ ಕರ್ಮವಿಧಿಗಳನ್ನು ಅವಸರವಸರವಾಗಿ ಮುಗಿಸಿ ಸರಿಯಾಗಿ ಕ್ಯಾಬ್ ಬರುವ ಹೊತ್ತಿಗೆ ನಾನು ನನ್ನ ಸ್ಟಾಪ್ ನಲ್ಲಿ ಕಾಯುತ್ತಿದ್ದೆ. ನಾನಿರುವ ಪ್ರದೇಶವಿನ್ನೂ ಅಷ್ಟು ವಾಹನ/ಜನಸಾಂದ್ರತೆಯಿಂದ ಕೂಡಿಲ್ಲವಾದ್ದರಿಂದ ನನಗೆ ಬೆಳಗಿನ ಹಕ್ಕಿಗಳ ಚಿಲಿಪಿಲಿ ಕಿವಿಗೆ ಬೀಳುತ್ತಿರುತ್ತದೆ, ಅದೂ ಎದುರಿಗಿರುವ ಉದ್ಯಾನವನದ ಕೃಪಾಕಟಾಕ್ಷದಿಂದ, ಪಾರ್ಕ್ ಮೇಲೆ ಹಾದುಹೋಗಿರುವ ತೀವ್ರ ವಿದ್ಯುತ್ ವಾಹಕದ ತಂತಿಯ ಮೇಲೆ ಕೆಲವೊಂದು ಹಕ್ಕಿಗಳು ಕುಳಿತು ತಮ್ಮ ಕಂಠಸಿರಿಯಿಂದ ದಾರಿಹೋಕರನ್ನು ಸಂತೃಪ್ತಿ ಗೊಳಿಸುತ್ತಿರುತ್ತವೆ. ಉದ್ಯಾನವನದಲ್ಲಿ ಮಾತ್ರ ವಾಕಿಂಗ್, ಜಾಗಿಂಗ್, ನಡದೇ ಇತ್ತು, ವಯಸ್ಕರರಿಗಿಂತ ಯುವಕರ ದಂಡು ಜೋರಾಗೇ ಇರುತ್ತದೆ, ದಿನಪೂರ್ತಿ ತಿನ್ನಬಾರದ್ದನ್ನು ತಿಂದು ಹೊಟ್ಟೆಗೆ ಶಿಕ್ಷೆ ಕೊಟ್ಟು ಬೆಳಗ್ಗೆ ಅದನ್ನು ಕರಗಿಸಲು ಅವರು ಕಂಡುಕೊಂಡ ಪರಿಹಾರ ಮಾರ್ನಿಂಗ್ ವಾಕ್. ಒಟ್ಟಿನಲ್ಲಿ ಬೆಂಗಳೂರಿಗನಾಗಿ ಹೇಳಬೇಕೆಂದರೆ ಅದೊಂದು ನನಗೆ ಕಣ್-ಮನ ಸೆಳೆಯುವ ದೃಶ್ಯ.

ಅದೇ ಹಕ್ಕಿಗಳ ಗಾನವಾಣಿಯತ್ತ ಚಿತ್ತ ನೆಟ್ಟು ಒಮ್ಮುಖವಾಗಿ ಪಾರ್ಕ್ ವರೆಗೂ ಚಲಿಸಿ ಒಮ್ಮೆಲೇ ತಿರುಗಿದೆ, ಓಹ್.... ಮನಸು ಒಮ್ಮೆಲೇ ಆದ ಬದಲಾವಣೆಯನ್ನು ಗುರುತಿಸಿತು, ಮೆದುಳು ಗ್ರಹಿಸಿ ಕಣ್ಣಿಗೆ ಸಂದೇಶ ಕಳಿಸುವ ಮೊದಲೇ ನನ್ನೆರಡೂ ನಯನಗಳು ಆಗಲೇ ಅತ್ತ ದೃಷ್ಟಿನೆಟ್ಟಿದ್ದವು, ದಾರಿಯಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ತನ್ನ ಕೈಯನ್ನೊಮ್ಮೆ ಚಾಚಿ ಗಡಿಯಾರದತ್ತ ಒಮ್ಮೆ ಕಣ್ಣು ಹಾಯಿಸಿ, ದಾರಿಯಲ್ಲಿ ಬರುತ್ತಿರುವ ವಾಹನಗಳನ್ನು ನೋಡಿದಾಗ ನನಗೆ ಸ್ಪಷ್ಟವಾಯಿತು. ಇವಳೂ ಕೂಡ ನನ್ನಂತೆಯೇ ಕ್ಯಾಬ್ ಗಾಗಿ ಕಾಯುತ್ತಿದ್ದಾಳೆ ತೀವ್ರ ಕುತೂಹಲಗೊಂಡ ನನ್ನ ಮನಸ್ಸು ಅವಳ ಒಂದು ಚಲನವಲನದಿಂದ ಉತ್ತರ ಹುಡುಕಿಕೊಂಡಿತು, ಆದರೆ ಸಾವಿರ ಪ್ರಶ್ನೆಗಳು ತೆರೆದುಕೊಂಡವು. ಯಾರೀ ಮದನಾರಿ ? ಯಾವ ಕಂಪನಿ ? ಯಾವ ಊರು ?.....ಹೀಗೆ, ಇನ್ನು ನನ್ನ ಮನಸ್ಸು ಪ್ರಶ್ನೆ ಕೇಳುತ್ತಿರುವಾಗಲೇ ಅವಳ ಕ್ಯಾಬ್ ಬಂದೇ ಬಿಟ್ಟಿತು ಸಹಜ ಕುತೂಹಲದಿಂದ ಕಂಪನಿ ತಿಳಿದುಕೊಳ್ಳಲು ಕ್ಯಾಬ್-ನತ್ತ ಕಣ್ಣು ಹಾಯಿಸಿದೆ ಎದುರುಗಡೆ "ಪೂರ್ಣಸೇವಾ ಐ ಟಿ ಸೊಲೂಷನ್ಸ್" ಎಂದು ಬರೆದಿತ್ತು. ಒಹೋ... ಇವಳು ಐ.ಟಿ. ಹಕ್ಕಿ ಯೆಂದು ತಿಳಿಯಿತು. ಇನ್ನೂ ಯೋಚನೆಗೆ ಅವಕಾಶ ಕೊಡದೇ ನನ್ನ ಕ್ಯಾಬ್ ಕೂಡ ಬಂತು, ಬಂಡಿಯನೇರಿ ಹೊರಟೆ.

ಆಫೀಸಿನತ್ತ ಮುಖ ಮಾಡಿ ಚಲಿಸುತ್ತಿದ್ದ ಕ್ಯಾಬ್ ನಲ್ಲಿ ನನ್ನ ಮನಸ್ಸು ಮಾತ್ರ ಎತ್ತೆತ್ತಲೋ ಚಲಿಸಹತ್ತಿತು, ನನ್ನಲ್ಲಿ ಅವಳ ಬಗ್ಗೆ ಯಾವುದೇ ವಿಶೇಷ ಒಲವಾಗಲೀ, ಒಲುಮೆಯಾಗಲೀ ಹೊಮ್ಮಿಬರಲಿಲ್ಲ. ಒಂದೇ ನೋಟಕ್ಕೆ ಹಾಗಯಿತೆನ್ನುವುದು ಕೂಡ ತೀವ್ರ ಹಾಸ್ಯಸ್ಪದವಾದೀತು. ಆದರೆ ಅವಳೆಡೆಗಿನ ನನ್ನ ನೋಟ ಮಾತ್ರ, ನನ್ನ ಮನಸ್ಸಿನ ಚಿಂತನಾ ಲಹರಿಯನ್ನು ಸ್ಥಿತ್ಯಂತರಗೊಳಿಸಿತು. ಮನಸ್ಸು ಇತ್ತೀಚಿನ ಬೆಳವಣಿಗೆಗಳನ್ನು ತುಂಬಾ ಹಚ್ಚಿಕೊಳ್ಳುತಾದಾದ್ದರಿಂದ ನನ್ನೇಡೆಗಿನ ಅವಳ ಕುರಿತಾದ ಯೋಚನೆ ತೀರ ಸ್ವಾಭಾವಿಕವಾದದ್ದೇ ಎನ್ನಿ. ಹಾಗಾದರೆ ಅವಳೆನೂ ಅಂತಹ ಚೆಲುವೆಯೇ ? ಅದೊಂದು ಚೆಲುವು ನನ್ನನ್ನು ಹೀಗೆ ಮಾಡಿತೆ ? ಸಾಧ್ಯವೇ ಇಲ್ಲ.. ಯಾಕೆಂದರೆ ಸಾಮಾನ್ಯವಾಗಿ ಎಲ್ಲ ಹುಡುಗರಂತೆ ಚೆಲುವು, ರೂಪರಾಶಿ, ಮೈಮಾಟ ಊಹುಂ... ಇದಾವುದನ್ನೂ ನಾನು ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಹಾಗಾದರೆ ನಿನ್ನವಳ ಆಯ್ಕೆಗೆ ನಿನ್ನ ಮಾನದಂಡವೇನು ? ಎಂದು ನೀವು ಕೇಳಬಹುದು, ನನ್ನವಳ ಆನ್ವೇಷಣೆ ನಿರಂತರವಾಗಿ ನನ್ನೊಳಗೇ ಸಾಗಿದೆಯಾದರೂ ಅದಿನ್ನೂ ತೀವ್ರಸ್ವರೂಪ ಪಡೆದುಕೋಂಡಿಲ್ಲ, ಪ್ರೀತಿಸಿದ ಮದುವೆಯೆಂದರೆ ಕೇವಲ ಎರಡು ಮನಸ್ಸುಗಳು ಮಾತ್ರ ಇಷ್ಟಪಟ್ಟು, ಜಗತ್ತಿನ ಮಾತನ್ನು ಧಿಕ್ಕರಿಸಿ ತಮ್ಮಿಬ್ಬರ ಜಗತ್ತನ್ನು ಮಾತ್ರ ಸೃಷ್ಟಿಸಿಕೊಳ್ಳುವುದು. ಅದು ನನಗೆ ಇಷ್ಟವಿಲ್ಲ, ಮದುವೆಯೆಂಬುದು ಎರಡು ಕುಟುಂಬಗಳು ಸಂಪೂರ್ಣವಾಗಿ ಒಪ್ಪಿ, ಸಮಾಜಕ್ಕೆ ತಮ್ಮ ಅಧಿಕೃತತೆಯನ್ನು ತೋರಿಸುವ ಸಲುವಾಗಿ ತಮ್ಮ ಕಡೆಯ ಕುಲಬಾಂಧವರನ್ನು ಕರೆಸಿ ಎಲ್ಲರೂ ಒಂದಾಗಿ ಮಾಡುವ ಒಂದು ಪವಿತ್ರವಾದ ಕೆಲಸ. ಇನ್ನು ಮೂಲತಹ ಭಾವುಕ ಜೀವಿಯಾದ ನಾನು ಮದುವೆಯಂತಹ ಘಳಿಗೆಗಳನ್ನು ಮನೆಯರನ್ನು/ಸಮಾಜವನ್ನು ಧಿಕ್ಕರಿಸಿಯಾದರೂ ವರಿಸಿಕೊಳ್ಳುತ್ತೇನೆ ಎನ್ನುವ ನಂಬಿಕೆ ನನಗಂತೂ ಮೊದಲೇ ಇಲ್ಲ. ಅದೇ ಕಾರಣಕ್ಕೆ ಹುಡುಗಿಯರೆಡೆಗಿನ ನನ್ನ ಆಲಸ್ಯ ಸ್ವಲ್ಪ ಜೋರಾಗೆ ನನ್ನಲ್ಲಿ ಮನೆಮಾಡಿದೆ. ಮತ್ತು ಕೆಲವರು ಪ್ರೀತಿ ಹೆಸರನ್ನು "ಇನ್ನಿತರ" ಕೆಲಸಗಳಿಗಾಗಿ ಉಪಯೋಗಿಸುತ್ತಿದ್ದುದು ಕೂಡ ಸಹಜವಾಗಿ ಪ್ರೀತಿ/ಪ್ರೇಮ ದೆಡೆಗೆ ನನ್ನ ಸಾತ್ವಿಕ ಕೋಪ ಮನದ ಮೂಲೆಯಲ್ಲಿ ಆಳವಾಗಿ ಬೇರೂರಿದೆ. ಹೆತ್ತವರು/ಮನೆ/ಬಂಧು/ಬಳಗ ಗಳಿಂದ ಮುಕ್ತರಾಗಿ ಕೇವಲ ಪ್ರಿಯತಮೆಯ ಸೆರಗಿನ ಹಿಂದೆ ಅಡಗಿಕೊಳ್ಳುವುದು ನನಗೆ ಪ್ರೀತಿಸದವರೆಡೆಗೆ ಮುಜುಗರ ತರುತ್ತದೆ.

ಇಷ್ಟೆಲ್ಲ ಯೋಚನೆಗಳನ್ನು ಅದೂ ಹುಡುಗಿಯರ ಬಗ್ಗೆ ನಾನು ಕನಸಿನಲ್ಲಿಯೂ ಮಾಡಿರಲಿಲ್ಲ, ಇಂದು ಉದ್ಭವಿಸಿದ ಈ ಪ್ರತ್ಯಕ್ಷ ದೇವತೆಯ ಪ್ರಭಾವದಿಂದ ಮನಸ್ಸು ಅಕಸ್ಮಾತ್ ಆಗಿ ಈ ವಿಷಯವನ್ನು ತೆಗೆದುಕೊಂಡಿತ್ತು, ಹಾಗಾದರೆ ಇವಳೇನು ಅಷ್ಟೊಂದು ಅಪೂರ್ವ ಸುಂದರಿಯೆ? ಎಂದು ನೀವು ಕೇಳಬಹುದು? ಉಪಮಾನ ಉಪಮೇಯಗಳನ್ನಿಟ್ಟು ಹೊಗಳುವಂತವಳಾಗಲೀ, ಕವಿಗೆ ಕಾವ್ಯ ರಚಿಸುವಂತಹ ಸ್ಪೂರ್ತಿಯಾಗಲೀ, ಕಾಲವನ್ನು ಚಲಿಸದೇ ನಿಲ್ಲಿಸುವ ಸೌಂದರ್ಯವಾಗಲೀ, ಇದೆ ಎಂದು ನಾನು ಹೇಳಲಾರೆ. ರಂಭೆ/ಊರ್ವಶಿ/ಮೇನಕೆಯರ ಚೆಲುವನ್ನು ಅರೆದು, ಬಸಿದು ಕುಡಿದು ಬಂದ ಭೂಲೋಕದ ತಿಲೋತ್ತಮೆಯೆ ಎನ್ನಲಾರೆ. ಆದರೆ ಮೊದಲ ನೋಟಕ್ಕೇ ಒಂದು ಹೆಣ್ಣು ಬಹುಕಾಲ ನನ್ನ ಮನಸ್ಸನ್ನು ಸೆರೆಹಿಡಿದಿದ್ದಳು ಅಷ್ಟೆ.

ಯಾವುದೇ ನಿರ್ದಿಷ್ಟ ಬಯಕೆಗಳಿಲ್ಲದೇ ನಮ್ಮಿಬ್ಬರ ಅನಾಮಿಕ ಮಿಲನಕ್ಕೆ ವೇದಿಕೆ ಹಾಕಿದ್ದು ಆ ರಸ್ತೆ, ಒಂದು ಬದಿಯಲ್ಲಿ ನಾನು, ಇನ್ನೊಂದು ಬದಿಯಲ್ಲಿ ಅವಳು, ಮೊದಲ ನೋಟಕ್ಕೆ ಬಿಟ್ಟರೆ ನನ್ನನ್ನು ಯಾವಗಲೂ ಅಷ್ಟು ಕಾಡಿಸಿದ್ದಿಲ್ಲ. ಆಕಸ್ಮಿಕವಾಗಿ ನನ್ನತ್ತ ನೋಟ ಹರಿಸಿದರೂ, ನಾನು ನೋಡುವಷ್ಟರಲ್ಲಿ ಅವಳ ನೋಟ ಬೇರೆಡೆಗೆ ತಿರುಗುತ್ತಿತ್ತು. ಸುಮಾರು ಎರಡು ವಾರಗಳ ಕಾಲ ನಮ್ಮದು ಹೀಗೆ ಸಾಗಿತ್ತು.

ಯಾವಾಗಲೂ ಅವಳ ಕ್ಯಾಬ್ ನನಗಿಂತ ಸುಮಾರು ೨ ನಿಮಿಷ ಬೇಗ ಬರುತ್ತಿತ್ತು, ಹೀಗಾಗಿ ವೀಕೆಂಡ್ ಬಿಟ್ಟರೆ ಪ್ರತಿದಿನ ನಮ್ಮ ಭೆಟಿಯಾಗುತ್ತಿತ್ತು, ಅದೊಂದು ದಿನ ಅವಳಿಗಿಂತ ಮೊದಲೇ ಅವಳ ಕ್ಯಾಬ್ ಬಂದುಬಿಟ್ಟಿತ್ತು ಸರಿ ಡ್ರೈವರ್ ೧೦ ಸೆಕೆಂಡ್ ಕಾದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ತಿರುವಿನಿಂದ ಅವಳು ಓಡಿಬರುತ್ತಿರುವುದು ಕಂಡಿತು. ಅಷ್ಟೇ ನನ್ನೊಳಗಿರುವ ಮಹಿಳೆಯರ ಬಗೆಗಿನ ಪುರುಷ ಸಹಜ ಸಹಾಯ ಪ್ರಜ್ನೆ ಎಚ್ಚೆತ್ತುಕೊಂಡಿತು ಎಂದು ಕಾಣುತ್ತದೆ, ಕೂಡಲೇ ಜೋರಾಗಿ ಕೂಗಿ ಡ್ರೈವರ್ ಗೆ ನಿಲ್ಲಿಸುವಂತೆ ಸೂಚಿಸಿ ಅವಳೆಡೆಗೆ ಕೈ ಮಾಡಿ ತೋರಿಸಿದೆ, ಕ್ಯಾಬ್ ನಿಂತುದಕ್ಕಾಗಿ ನಿಟ್ಟುಸಿರು ಬಿಡುತ್ತಾ ಮತ್ತು ಅದಕ್ಕೆ ಸಹಾಯ ಮಾಡಿದ ನನ್ನೆಡೆಗೆ ತಿರುಗಿ ತೇಕು ತುಂಬಿದ ಮಂದಹಾಸ ಬೀರಿದಳು ... ಅಷ್ಟೆ ನನ್ನ ಮುಖ ನನಗೇ ಗೊತ್ತಿಲ್ಲದಂತೆ ಮಂದಸ್ಮಿತವಾಯಿತು..ನನ್ನೆಡಿಗಿನ ಅವಳ ಆ ಕೃತಜ್ನತೆ ತುಂಬಿದ ನೋಟದಿಂದ ನನ್ನೊಳಗಿರುವ "ಪರಜನಹಿತ ಕಲ್ಯಾಣಾಧಿಕಾರಿ" ಸಂತೃಪ್ತಗೊಂಡಿದ್ದ.

ಸರಿಯಾಗಿ ನಾಳೆಗಳ ಬಗ್ಗೆ ಯೋಚನೆ ಮಾಡದ ನಾನು. ನಾಳೆಗಳನ್ನು ಕಾತುರದಿಂದ ಕಾಯುವಂತಾಯ್ತು. ನನ್ನ ಕ್ಯಾಬ್ ಬರುವ ಸ್ಥಳಕ್ಕೆ ಹೋಗಿ ನಿಂತ ಮೇಲೆ ಕಣ್ಣು ಕ್ಷಣಕ್ಕೊಮ್ಮೆಯಾದರೂ ಮೆದುಳಿನ ಸಂದೇಶವನ್ನು ಧಿಕ್ಕರಿಸಿಯಾದರೂ ಆ ಕಡೆಗೊಮ್ಮೆ ಕಣ್ಣು ಹಾಯಿಸುತ್ತಿತ್ತು. ನನ್ನ ವ್ಯಕ್ತಿತ್ವದಲ್ಲಿ ದಿಢೀರೆಂದು ಉದ್ಭವಿಸಿದ ಈ ಬದಲಾವಣೆ ನನಗೇ ನಂಬಲಸಾಧ್ಯವಾಗಿತ್ತು, ನನ್ನ ಅಂತರಂಗ ಮತ್ತು ಬಹಿರಂಗ ಗಳೆರಡೂ ಮೊದಲ ಸಾರಿ ಬಹಿರಂಗವಾಗಿಯೇ ಭಿನ್ನ ರಾಗ ಹಾಡಿದ್ದವು, ಏಕಾಂತದಲ್ಲಿದ್ದಾಗ ನನ್ನ ಸುಪ್ತಮನಸ್ಸು "ಎಲಾ ಕಪಟಿಯೇ.. ತೋರಿಸಿಬಿಟ್ಟೆಯಲ್ಲವೋ ಎಲ್ಲಾ ಗಂಡಸು ಸಹಜವಾದ ಎಂಜಲು ಬುದ್ಧಿಯನ್ನಾ... ಅವಳೇನೋ ಸಿಕ್ಕಳಂತೆ ನೋಡಿ ನಕ್ಕಳಂತೆ .. ಇವನಿಗೆ ಅದೇನೋ ಆಯಿತಂತೆ. ಚೆನ್ನಾಗಿದೆ ಎಷ್ಟೇ ಆದರೂ ವಾರಕ್ಕೆರೆಡು ಚಲನಚಿತ್ರ ನೋಡುತ್ತಿಯಲ್ಲಾ ಎಲ್ಲಿ ಹೋದೀತು ಆ ಸಿನಿಮೀಯ ಶೈಲಿ ಅದಕ್ಕೆ ಹಾಗೆ ಹೇಳಿದ್ದೀಯ ಮಗನೇ. ಸಿಕ್ಕ ಸಿಕ್ಕವರ ಹತ್ತಿರ ಪ್ರೀತಿಯೆಡೆ ತೋರಿಸುವ ಅನಾದರವೇನು.. ಪ್ರೇಮ ಪಾಶದಲ್ಲಿ ಬಿದ್ದ ಗೆಳೆಯರಿಗೆ ನಿನ್ನಿಂದ ಉಪದೇಶವೇನು ? ಪ್ರೀತಿಯ ಪರಿಣಾಮಗಳನ್ನು ಅವರಿಗೆ ವಿವರಿಸುವ ಪರಿಯೇನು ? ಆಹಾ ... ಹೇಳೋದ್ ಆಚಾರ ತಿನ್ನೊದ್ ಮಾತ್ರ ಬದನೇಕಾಯಿ. ಊಸರಿವಳ್ಳಿಯ ಕುಲದ ಕುಲಜ ಕಣೋ ನೀನು. ನಿನ್ನ ಪ್ರತಿ ಕಾರ್ಯಕ್ಕೂ ವೈಚಾರಿಕ ಬೆಂಬಲ ಕೊಡುತ್ತ ಬಂದೆ ನೋಡು ನಾನು ಹೊಡ್ಕೋಬೇಕು ಮೊದ್ಲು.. ಆಳದ ಅರಿವೇ ಇಲ್ಲದೇ ತೋಡಿ ಇಟ್ಟಿರುವ ಗುಂಡಿಯಲ್ಲಿ ಬೀಳಬೇಡ..ಕಾಡಿನೊಳು ಠೇಂಕರಿಸುವ ಗಜರಾಜನಂತಿರುವ ನೀನು ಹೆಣ್ಣೆಂಬ ಮಾಯೆಯ ಬಿಲದಲ್ಲಿ ಬಿದ್ದರೆ ನಾಡಿನಲ್ಲಿ ಮಾವುತನ ಆಣತಿಯಂತೆ ನಡೆಯುವ ಆನೆಯಾಗುತ್ತೀ.. ನೀರಿನಲ್ಲಿ ಮೀನಿನ ಜಾಡು ಹಿಡಿಯುವ ಕೆಲಸ ಮಾಡಬೇಡಲೋ.. ಆರಂಭ ಮಾತ್ರ ನಿನ್ನ ಕೈಲಿರುತ್ತೆ ಕಣೋ ಆದರೆ ಪರಿಣಾಮ ಮಾತ್ರ ನಿನ್ನ ಕೈಲಿಲ್ಲ .. ಲೋ..ಲೋ ಹೆಣ್ಣು ಕಣೋ ಅದು ಹೆಣ್ಣೂ. ಮೂಲ ಹುಡುಕಲು ಹೋಗಿ ಋಷಿಮುನಿಗಳು ಸೋತರು, ತಪಸ್ವಿಗಳು ತಪಭೋಗ ತೊರೆದರು, ಸಾಮ್ರಾಜ್ಯಗಳು ಅಳಿದವು, ಪಟ್ಟದರಸರೆಲ್ಲ ಪುಟಗೋಸಿ ಹೆಣ್ಣಿನ ಹಿಂದೆ ಹೋಗಿ ಪಟ್ಟ ತೊರೆದರು, ತಲೆಗಳೆಲ್ಲ ತರಗೆಲೆಗಳಂತೆ ಉರುಳಿದವು ಅದರಲ್ಲಿ ನೀನ್ಯಾವ ದೊಣ್ಣೆನಾಯಕನಯ್ಯಾ ?..ಬಿಟ್ಟು ಬಿಡು, ಹೊಸಕಿ ಹಾಕಿಬಿಡು ತಲೆಯಲ್ಲೆದ್ದಿರುವ ಆ ಗುಂಗಿ ಹುಳವನ್ನ " ನನ್ನೊಳಗೆ ಉಂಟಾಗಿರುವ ಈ ಕಂಪನಕ್ಕೆ ನಿರ್ದಿಷ್ಟ ಹೆಸರನ್ನಿಡಲು ಹೊಯ್ದಾಡುತ್ತಿದ್ದಾಗ ನನ್ನ ಒಳಮನಸ್ಸು ಹೇಳಿದ್ದನ್ನು ಕೇಳಿ ಹಾಗಾದರೆ ಇದು ಪ್ರೀತಿಯೇ ಎಂದು ನಿರ್ಧಾರಕ್ಕೆ ಬಂದೆ. ನಿರ್ಧಾರದಲ್ಲಿ ಸ್ವಲ್ಪವೂ ಅಳುಕಿರಲಿಲ್ಲ ಬದಲಾಗಿ ನಿಶ್ಚಯವಿತ್ತು.


ಹೌದು ದೃಢ ನಿಶ್ಚಯವಿತ್ತು.. ಯಾರೋ ದಾರಿಯಲ್ಲಿ ಎಡವಿ ಬಿದ್ದರೆ ದಾರಿಯನ್ನು ಶಪಿಸಲಾದೀತೆ ? ಯಾರೋ ಪ್ರೇಮವನ್ನು ಸ್ವಾರ್ಥಕ್ಕಾಗಿ ಬಳಸಿದರೆ ಪ್ರೀತಿಯನ್ನೇ ಹೀಗೆಳೆಯುವುದೇ ? ಸಂಕುಚಿತ ಮನಸ್ಸುಗಳು. ಮೋಹಗೊಂಡ ಮನಸ್ಸು ಒಲಿದ ಜೀವವನ್ನು ಬಯಸುವುದು ತಪ್ಪೇ ? ಇದೇ ಪ್ರೀತಿಯಲ್ಲವೇ ? ಅರಿಷಡ್ವರ್ಗಗಳಲ್ಲಿ ಕಾಮ, ಕ್ರೋಧ, ಲೋಭ, ಮದ, ಮತ್ಸರಗಳನ್ನು ಜೀವನದ ಭಾಗವೆಂದು ಒಪ್ಪಿಕೊಳ್ಳುವ ನಾವು "ಮೋಹ"ದ ವಿಚಾರದಲ್ಲೇಕೆ ಅಸ್ಪೃಷ್ಯರಂತೆ ವರ್ತಿಸುತ್ತೇವೆ ? ಜಗದ ಜೀವಸಂಕುಲದಲ್ಲಿ ಉಚ್ರಾಃಯ ಸ್ಥಿತಿಯಲ್ಲಿರಬೇಕಾದ ಪ್ರೀತಿಯನ್ನು ನಿಕೃಷ್ಟವಾಗಿ ನೋಡುತ್ತಿರುವ ಮಾನವಸಂಕುಲದ ಆಶಾಢಭೂತಿತನದ ಬಗ್ಗೆ ಜಿಗೂಪ್ಸೆ ಬಂದಿತು ನನಗೆ.

ಜಗತ್ತಿನ ಯಾವ ವಸ್ತುವಿಗೆ ಪ್ರೀತಿಗೆ ಇರಬೇಕಾದ ಶಕ್ತಿ ಇದೆ ? ಪ್ರೀತಿಯೆಂಬ ಜೀವ ಜಲವನ್ನು ಜಗತ್ತು ಕುಡಿದಿದ್ದೇ ಆದಲ್ಲಿ ಅಸೂಯೆ, ಮೇಲು, ಕೀಳು, ಬಡವ, ಬಲ್ಲಿದ, ಕೋಮು ದಳ್ಳುರಿ ಎಲ್ಲವೂ ನಿರ್ನಾಮ ವಾಗುತ್ತವೆ. ಮಾನವ ನಿರ್ಮಿತ ಡಂಭಾಚಾರದ ಸಂಪ್ರದಾಯಗಳನ್ನು ಕಿತ್ತೊಗೆಯಲು ಮತ್ತು ಜಾತಿಯೆಂಬ ಪೆಡಂಭೂತವನ್ನು ಬೇರುಸಹಿತ ನಾಮಾವಶೇಷ ಗೊಳಿಸುವ ಪಳಯುಳಿಕೆಯೇನಾದರೂ ಇದ್ದರೆ ಅದು ನಿಸ್ಸಂಶಯವಾಗಿಯೂ ಪ್ರೀತಿ ಮಾತ್ರ. ದ್ವೇಷದಿಂದ ದ್ವೇಷ ಹೆಚ್ಚಾಗುತ್ತದೆ ಆದರೆ ಪ್ರೀತಿಯಿಂದ ದ್ವೇಷ ಕರಗುತ್ತದೆ, ಮನಸ್ಸುಗಳು ಮುದವಾಗುತ್ತವೆ. ಒಂದು ಜೀವವನ್ನು ಇನ್ನೊಂದು ಜೀವ ಅರಿಯುವುದರಲ್ಲೇ ಜೀವನದ ಸಾರ್ಥಕತೆ ಇರುವುದು. ಆ ಸಾರ್ಥಕತೆಯ ಸಾಧನೆಗೆ ಪ್ರೀತಿಯೇ ಸೇತುವೆ. ದ್ವೇಷ ದಿಂದ ಮನಸ್ಸು ಕೆರಳಿದರೆ ಪ್ರೀತಿಯಿಂದ ಮನಸ್ಸು ಅರಳುತ್ತದೆ, ಈ ಅರಳುವ ಮನಸ್ಸುಗಳೇ ಜಗತ್ತಿಗೇ ಬೇಕಾಗಿರುವುದು. ಪ್ರೀತಿಯಿಂದ ಜಾತಿಯನ್ನೂ ಜಗತ್ತನ್ನೂ ಗೆಲ್ಲಬೇಕೇ ವಿನಹ ಜಾತಿಗಾಗಿ ಪ್ರೀತಿಯನ್ನು ಬಲಿಕೊಡಬಾರದು... ಹೀಗೆ ಸಾಗಿತ್ತು ನನ್ನ ಮಾತು.. ನಾನೇನೋ ಜಗತ್ ಕಲ್ಯಾಣಕ್ಕಾಗಿಯೇ ಪ್ರೀತಿಸುತ್ತಿದ್ದೇನೆ ಎನ್ನುವವನ ತರ..

ಹಾಗಾದರೆ ನನಗೆ ಇವಳು ಸರಿಹೊಂದಬಹುದೇ ? ನನ್ನ ಕಲ್ಪನೆಯ ಕಾಡ ಬೆಳದಿಂಗಳ ಮಲ್ಲಿಗೆ, ಕಾನನದ ಕೆಂಡ ಸಂಪಿಗೆ ಎಲ್ಲಾ ಇವಳೇನಾ ??? ಮನಸು ಸರಿಯಾಗಿ ಇನ್ನೂ ಪ್ರೇಮವೇದನೆಯಿಂದ ಹೊರಬಂದಿರಲಿಲ್ಲ ಆಗಲೇ ಬಲವಂತವಾಗಿ ವಾಸ್ತವವೆಂಬ ನಿಜಜೀವನದ ಸೇನಾಧಿಪತಿ ಎಚ್ಚರಗೊಳಿಸಿದ. ಸಾಕು ಭ್ರಮಾಲೋಕದ ನಷೆ.. ಸ್ವಲ್ಪ ವಾಸ್ತವದ ಚೌಕಟ್ಟಿನಲ್ಲಿ ಯೋಚಿಸಿ ನೋಡು.

ನನ್ನ ಪ್ರೇಮವಿವಾಹದ ದೊಡ್ಡ ತಡೆಗೋಡೆ ಊರು ಮತ್ತು ನನ್ನ ಮನೆ, ಬಡತನ ನಮ್ಮ ಮನೆಯಲ್ಲಿ ಸ್ವಲ್ಪ ಶ್ರೀಮಂತವಾಗಿಯೇ ಇದೆ, ಅದು ಬಿಟ್ಟರೆ ಇನ್ನೂ ಶ್ರೀಮಂತವಾಗಿರುವುದು ಸಂಪ್ರದಾಯ, ಅಪ್ಪಿತಪ್ಪಿ ಅವಳೇನಾದರೂ ನನ್ನ ಜಾತಿಯವಳಲ್ಲದಿದ್ದರೆ ಮುಗಿದೇ ಹೋಯಿತು ನಾನು ನಮ್ಮ ಮನೆಯವರ ಪಾಲಿಗೆ ಸತ್ತಂತೆಯೇ? ನಾನಿಲ್ಲಿರುವಾಗಲೇ ನನ್ನ ತಿಥಿ ಮಾಡಿ ಮುಗಿಸುತ್ತಾರೆ ನನ್ನ ಮನೆಯಲ್ಲಿ. ಹೊಸದೊಂದು ಸಂಬಂಧಕ್ಕೆ ಹಾತೊರೆಯುತ್ತಿದ್ದ ಮನಸ್ಸು, ಹೀಗೆ ಇರುವ ಬೆಸುಗೆಯೊಂದು ಕಡಿಯುವ ಯೋಚನೆ ಬಂದಾಗ ಮನಸ್ಸು ವಿಹ್ವಲಗೊಂಡು, ಮುಖವೆಲ್ಲ ಬಿಳುಚಿಕೊಂಡಿತು. ಮೈ ಮನವೆಲ್ಲ ಕಂಪಿಸಿದಂತಾಯ್ತು ಆದರೂ ಆ ಕ್ಷಣದಲ್ಲಿ ನನ್ನ ಮನಸ್ಸಿನ ಗಟ್ಟಿ ನಿರ್ಧಾರ, ಮನೆಯವರನ್ನು ಧಿಕ್ಕರಿಸಿಯದರೂ ಅವಳನ್ನು ವರಿಸಿಕೊಳ್ಳಲೇಬೇಕು, ವಿಪರ್ಯಾಸ ನೋಡಿ ಒಂದು ಕಾಲದ ಪ್ರೇಮವಿರೋಧಿ ಇಂದು ಪ್ರೇಮರೋಗಿ.

ತಲ ತಲಾಂತರಗಳಿಂದ ಬಂದ ಭದ್ರ ಬುನಾದಿಯನ್ನೇ ಮುರಿಯಬೇಕಾದರೆ, ಪ್ರೇಮವೆಂಬ ಕಬ್ಬಿಣದ ಸೆಳೆಗಳು ಎಷ್ಟು ಗಟ್ಟಿಯಿರಬಹುದು ? ಇತಿಹಾಸವನ್ನೆ ತೆಗೆದುಕೊಂಡರೆ ಗೊತ್ತಗುವುದಿಲ್ಲವೇ ? ಕತ್ತಿ ಹಿಡಿದು ರಣಾಂಗಣದಲ್ಲಿ ಹೋರಾಡಿ ವೈರಿಗಳಿಗೆ ಸಿಂಹಸ್ವಪ್ನ ವಾಗಿದ್ದ ವೀರ ಸೇನಾನಿಯೂ ಕೂಡ ಹೆಣ್ಣೆಂಬ ಮಾಯೆಯ ಪ್ರೇಮಮಪಾಶಕ್ಕೆ ಬಿದ್ದಾಗ ಅಸಹಾಯಕನಾಗಿ ಮಂಡಿಯೂರಿ ಕೂತು ಭಿಕ್ಷುಕನಾಗಿ ಬಿಡುತ್ತಾನೆ, ಪ್ರೀತಿಯೆಂಬ ಬಲೆಗೆ ಸಿಕ್ಕಿಬಿದ್ದನೆಂದರೆ ನೀರಿನೊಳಗಿಂದ ತೆಗೆದ ಮೀನಿನಂತೆ ಚಡಪಡಿಸತೊಡಗುತ್ತಾನೆ. ಪ್ರೀತಿ ಕೈಗೆಟುಕುವ ಯೋಚನೆಯೊಂದೇ ಆ ಕ್ಷಣದ ತುರ್ತು, ಉಳಿದಿದ್ದರ ಪರಿಣಾಮ ಮಾತ್ರ ಲೆಕ್ಕಕ್ಕಿಲ್ಲ.

ಪ್ರೀತಿಯೆಂಬ ವಿಶಾಲ ಸಾಗರದ ಆಳ ನನಗೆ ಈಗಲೇ ತಿಳಿಯತೊಡಗಿದ್ದು. ಅದರ ಬಗ್ಗೆ ಯೋಚಿಸಿದಷ್ಟೂ ನನಗೆ ಅದರೆಡೆಗೆ ಸೆಳೆತ ಇಮ್ಮಡಿಯಾಗತೊಡಗಿತು. ಅದಕ್ಕೆ ಎಲ್ಲರೂ ಪ್ರೀತಿಯನ್ನು ದಶದಿಕ್ಕುಗಳಲ್ಲಿ ಪಸರಿಸಿದೆಯೆಂದೂ, ದಿಗ್-ದಿಗಂತಗಳನ್ನಾವರಿಸಿದೆಯೆಂದೂ, ಮೇರು-ಪರ್ವತದಾಚೆ ಚಾಚಿದೆಯೊಂದೂ ಹೇಳುವುದು. ಪ್ರೀತಿಸಿದವರೆಲ್ಲ ನನಗೆ ದಾರ್ಶನಿಕರಂತೆಯೂ, ಪ್ರೆಮಕವಿಗಳೆಲ್ಲ ಗುರುಗಳೆಂತೆಯೂ ಗೋಚರಿಸತೊಡಗಿದರು.. ಜಿ ಎಸ್ ಶಿವರುದ್ರಪ್ಪನವರ ಸಾಲೊಂದು ಮನದ ಮೂಲೆಯಲ್ಲಿ ಗುನುಗಹತ್ತಿತು:
ಪ್ರೀತಿಯಿಲ್ಲದ ಮೇಲೆ ಹೂವು ಅರಳಿತು ಹೇಗೆ ?
ಮೋಡ ಕರಗಿ ಮಳೆಯಾಗಿ ಭುವಿಯೆಲ್ಲ ಹಸಿರಾಯಿತು ಹೇಗೆ ?

ಅವಳ ಬಿಂಬ ದರ್ಶನವಾದ ಮರುಘಳಿಗೆಯೇ ನನ್ನ ಕಣ್ಣುಗಳಲ್ಲಿ ಸಂಚರಿಸುತ್ತಿದ್ದ ಕೋಟಿ ನಕ್ಷತ್ರಗಳಿಗೂ ಮಿಗಿಲಾದ ಹೊಳಪೇ ನನಗೇ ಉತ್ತರಿಸುತ್ತಿತ್ತು, ಸಾಗರಕ್ಕೂ ಆಳವಾಗಿರುವ ಆವಳೆಡೆಗಿನ ನನ್ನ ಬಯಕೆಯನ್ನು /ಪ್ರೀತಿಯನ್ನು. ಅವಳು ಕಾಣದಾಗ ಮನಸ್ಸು ದುಗುಡಗೊಂಡು ಮಗುವನ್ನು ಕಳಕೊಂಡ ಅಮ್ಮನಂತೆ ಚಡಪಡಿಸಿ ಬಿಡುತ್ತಿತ್ತು. ಕ್ಷಣಮಾತ್ರದಲ್ಲಿ ನೂರಾರು ಪ್ರಶ್ನೆಗಳು ಮನದೊಳಗೆ ತೂರಿಕೊಂಡು ಮನಸೆಲ್ಲ ಕೊನೆಯುಸಿರಿಗಿಳಿದು ಬಿಡುತ್ತಿತ್ತು, ನನ್ನ ನೊಟ ಅವಳಿಗೆ ಪ್ರಾಪ್ತಿಯಾದಾಗ ಮಂದಸ್ಮಿತವಾಗಿ ನಗುವ ಆ ನಗು ನನಗೆ ಅಂಬರವೆಲ್ಲ ಮಲ್ಲಿಗೆ ಎರಚಿದಂತೆ ಗೋಚರಿಸುತ್ತಿತ್ತು. ಮೈಮನವೆಲ್ಲ ತೇಜಸ್ಸು ತುಂಬಿ ಮೈ ಮರೆಯುವ ಆ ಕ್ಷಣವನ್ನು ನಾನೆಷ್ಟೇ ವರ್ಣಿಸಿದರೂ ಅದು ಬರವಣಿಗೆಗೆ ನಿಲುಕದ್ದು. ಪ್ರತಿದಿನ ಅವಳನ್ನು ಕಂಡ ಕ್ಷಣವೆಲ್ಲ ನನಗೆ ಮೈನವಿರೇಳಿಸುವ ವರ್ಣನಾತೀತ ರೋಮಾಂಚನ ಅನುಭವ.

ಅಷ್ಟಕ್ಕೂ ಪ್ರೀತಿ ಎಂದರೇನು ? ಮನಸ್ಸು ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಹಾತೊರೆಯಹತ್ತಿತು.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ, ಹದಿಹರೆಯದ ಅಪ್ರಬುದ್ಧ ಮನಸುಗಳಿಗೆ ಆಕರ್ಷಣೆಯೇ ಪ್ರೀತಿ, ಸಾವಿನ ಸಾಂಗತ್ಯದಲ್ಲಿರುವ ಮುದಿಜೀವವೊಂದಕ್ಕೆ ಜೀವನದ ಸಂಧ್ಯಾಕಾಲದಲ್ಲಾಗುವ ಆಸರೆಯೇ ಪ್ರೀತಿ, ನಾನು ಸಾವಿರ ಸಾರಿ ನನ್ನೊಳಗೇ ಇದು ಸೆಳೆತವಲ್ಲ, ಆಕರ್ಷಣೆಯಲ್ಲ, ಇದು ಜೀವನದ ಆರಂಭಕ್ಕೆ ಜೊತೆ ಹುಡುಕುವ ಕಾರ್ಯ ನೀನದನ್ನು ಹುಡುಕಿದ್ದೀಯಾ ಅಷ್ಟೇ, ನಿನ್ನ ನಿರ್ಧಾರವನ್ನು ಗೌರವಿಸು, ನಿನ್ನ ಕಣ್ಣುಗಳು ಸರಿಯಾದ್ದನ್ನೇ ನೊಡಿವೆ ಮತ್ತು ನಿನ್ನ ಮನಸ್ಸು ಸರಿಯಾದ್ದನ್ನೇ ಆಯ್ಕೆ ಮಾಡಿದೆ. ಇದೇ ಪ್ರೀತಿಯ ಪರ್ವಕಾಲಕ್ಕೆ ಸರಿಯಾದ ಸಮಯ ನಿನ್ನದು ನಿಜವಾದ ನಿಷ್ಕಲ್ಮಷವಾದ ಪ್ರೀತಿ. ಅವರವರ ಬುದ್ಧಿಮತ್ತೆಗೆ/ ವಯಸ್ಸಿಗೆ ತಕ್ಕಂತೆ ಪ್ರೀತಿಯ ಅರ್ಥ ರೂಪಾಂತರಗೊಂಡಿದೆ ಆದರೆ ಪ್ರೀತಿ ಮಾತ್ರ ಬದಲಾಗಿಲ್ಲ.

ಅವಳೊಂದಿಗೆ ಒಂದೇ ಒಂದು ಮಾತನ್ನೂ ಆಡದ, ಅವಳ ಮನಸ್ಸಿನ ಅಭಿಪ್ರಾಯವನ್ನು ತಿಳಿಯದ ನಾನು, ಅವಳನ್ನು ಕೇಳುವ ಮೊದಲೇ ನನ್ನವಳನ್ನಾಗಿ ಮಾಡಿಕೊಂಡಿದ್ದೆ. ಅವಳ ಮುದ್ದಾದ ಮುಖವನ್ನು ಎರಡು ಕ್ಷಣ ದಿಟ್ಟಿಸಿ ನೋಡಲು ಅಂಜುತ್ತಿದ್ದ ನಾನು, ಅದ್ಯಾವ ಮಾಯೆಯಲ್ಲಿ ನನ್ನಂತರಂಗದ ಅಭಿಲಾಷೆಯನ್ನು ಅವಳಿಗೆ ತಿಳಿಸಬೇಕು.? ಎದುರಿಗೆ ನಿಂತು "ನನ್ನನ್ನು ನಿನ್ನ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತೀಯಾ" ಎಂದು ಕೇಳೋಣವೆಂದುಕೊಂಡೆ ಅಕಸ್ಮಾತ್ ಅವಳು "ಇಲ್ಲ" ಎಂದು ತಿರಸ್ಕರಿಸಿಬಿಟ್ಟರೆ ?. ಕಣ್ಣು ಕತ್ತಲುಗುಡಿಸಿದಂತಾಯ್ತು, ಇಲ್ಲ ಯಾವ ಘಳಿಗೆಯಲ್ಲಿ ನಾನು ಇವಳನ್ನು ನೋಡಿದ್ದೇನೆಯೋ ನನಗದು ತಿಳಿಯದು ನಾನು ಸಂಗಾತಿ ಎಂದು ವರಿಸುವುದಾದರೆ ಇವಳನ್ನೇ.. ಅವಳು "ಇಲ್ಲ"ವೆಂದಾಗ ನನಗಾಗುವ ಮಾನಸಿಕ ಆಘಾತದ ಬಗ್ಗೆ ಯೋಚಿಸಲೂ ಮನಸ್ಸು ಬಯಸಿರಲಿಲ್ಲ, ಕೇಳುವುದಾದರೆ ಎದುರಿಗೆ ನಿಂತು "ದಯವಿಟ್ಟು ನನ್ನನ್ನು ನಿನ್ನ ಬಾಳ ಸಂಗಾತಿಯಾಗಿ ಸ್ವೀಕರಿಸು" ಎಂದು ಕಾಲಿಗೆ ಬಿದ್ದಾದರೂ ಕೇಳೋಣ ಎಂದು ನಿಶ್ಚಯಿಸಿಕೊಂಡೆ.ಆದರೆ ನನ್ನನ್ನು ನೋಡಿದಾಗಲೆಲ್ಲ ಅವಳ ಮನಸ್ಸು ಉಲ್ಲಸಿತವಾಗುವುದನ್ನು ನೆನೆದು "ಮುಖ ಮನಸ್ಸಿನ ಕನ್ನಡಿಯಿದ್ದಂತೆ, ನನ್ನ ನೋಡಿದ ತಕ್ಷಣವೇ ಅವಳ ಬದಲಾಗುವ ಮುಖಚರ್ಚೆಯೇ ಹೇಳುತ್ತದೆ ನನ್ನ ಮೇಲಿನ ಅವಳ ಪ್ರೀತಿಯನ್ನು" ಎಂದುಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿದ್ದೆ.

ಅವಳೇನಾದರೂ ನನ್ನು ಎಷ್ಟು ಪ್ರೀತಿಸುತ್ತೀಯಾ? ಎಂದು ಕೇಳಿದರೇ ಏನು ಹೇಳುವುದು ?

ಕಾವ್ಯಶೈಲಿಯಲ್ಲಾಗಲೀ, ಕಲ್ಪನಾಶೈಲಿಯಲ್ಲಾಗಲೀ, ಅವಳಿಗೆ ಯಾವುದೇ ಉತ್ತರ ಕೊಡುವುದು ಬೇಡವೇ ಬೇಡ, ವಾಸ್ತವದಲ್ಲೇ ನನ್ನ ಪ್ರೀತಿಯನ್ನು ಅವಳಿಗೆ ಅನಾವರಣ ಗೊಳಿಸಬೇಕು. ಮತ್ತು ಮಾತಿನಲ್ಲಾಗಲೀ, ಹೇಳುವ ಶೈಲಿಯಲ್ಲಾಗಲೀ ಯಾವುದೇ ಆಡಂಬರ ತೋರದೇ ಹೃದಯದ ಪಿಸುಮಾತನ್ನು ಅವಳಿಗೆ ಕೇಳಿಸುವಂತೆ ಗಟ್ಟಿಯಾಗಿ ಉಸುರಬೇಕೆಂದು ದೃಢ ನಿಶ್ಚಯ ಮಾಡಿಕೊಂಡೆ.

ನೋಡು "ನಾನು ನಿನ್ನನ್ನು ಬಡತನದ ನೆರಳೂ ಸುಳಿಯದಂತೆ ಸಾಕುತ್ತೇನೆ ಎನ್ನಲ್ಲಾರೆ, ಆದರೆ ನೀನು ಸುಖವಾಗಿರಲು ಏನು ಬೇಕೋ ಅದನ್ನು ಮಾಡಲು ಮಾತ್ರ ಹಿಂಜರಿಯಲಾರೆ
ನಿನಗೆ ಕಷ್ಟಗಳೇ ಬರದಂತೆ ನೊಡಿಕೊಳ್ಳುತ್ತೇನೆ ಎನ್ನಲಾರೆ, ಆದರೆ ಕಷ್ಟಕಾಲದಲ್ಲಿ ನಿನ್ನ ಕಮಲದಂತ ಕಣ್ಣುಗಳಲ್ಲಿ ಒಂದು ಹನಿ ಕಂಬನಿಯೂ ಹೊರಬರುವುದನ್ನು ನಾನು ಸಹಿಸಲಾರೆ
ನನ್ನ ಜೀವಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಸುತ್ತೇನೆ ಎನ್ನಲಾರೆ, ಆದರೆ ಜೀವನದಲ್ಲಿ ಒಂದು ಘಳಿಗೆಯೂ ನಿನ್ನ ಜೀವವನ್ನು ನಾನು ಹಿಂಡಲಾರೆ"
ಇಷ್ಟು ಹೇಳಿ, ಸಾಧ್ಯವಾದರೆ ಅವಳಿಗಾಗಿ ಕೆಳಗಿನ ಕವನದ ಸಾಲುಗಳನ್ನು ಒಂದು ಕಾಗದದಲ್ಲಿ ಬರೆದು ಅವಳ ಕೈಗಿಟ್ಟು ಬರಬೇಕೆಂದು ನಿಶ್ಚಯಿಸಿಕೊಂಡೆ. ನನ್ನ ಕವನದ ದೆಸೆಯಿಂದಾದರೂ ಪ್ರೇಮಪರ್ವದ ಯುಗ ಆರಂಭವಾದೀತೆಂಬ ದೂರಾಲೋಚನೆಯಿಂದ.

ಕೇಳು ಹವಳದ ಮೊಗದ ಸುಂದರಿಯೇ....
ನಿನ್ನ ಬಾಳ ಕತ್ತಲೆಗೆ ನಾನು ಕಣ್ಣಾಗುವೆ
ನಿನ್ನ ಮೂಕ ರಾಗಕೆ ಧ್ವನಿಯಾಗುವೆ
ನಿನ್ನ ಆಡದ ಮಾತಿಗೆ ಕಿವಿಯಾಗುವೆ

ಜೀವಕೂ-ಜೀವನಕೂ ಜೊತೆಯಾಗುವೆ
ನೊವಿಗೂ ನಲಿವಿಗೂ ಹೆಗಲಾಗುವೆ
ಕೋಪಕೂ.. ತಾಪಕೂ..ತಂಪೆರೆಯುವೆ
ಸೋಲಲ್ಲೂ ಜಯದಲ್ಲೂ ಜೊತೆನಿಲ್ಲುವೆ

ಉಳಿದ ಬದುಕಿನ ಯುಗಳ ಗೀತೆಯನ್ನು ಹಾಡಲು ನಿಮ್ಮ ಆಸರೆಯನ್ನು ಬಯಸಿ ಬಂದಿರುವ ಈ ಜೀವದ ಆತ್ಮವಾಣಿಯನ್ನು ತುಂಬು ಮನಸ್ಸಿನಿಂದ ಸ್ವೀಕರುಸುತ್ತೀರೆಂಬ ನಿರೀಕ್ಷೆಯಲ್ಲಿದ್ದೇನೆ ..
ನಿಮ್ಮವನಾಗಬೇಕೆಂದು ಬಯಸುವ -ಚಂದ್ರು

ನಾನೇನು ಕಟ್ಟಾ ನಾಸ್ತಿಕನಲ್ಲದಿದ್ದರೂ ಅರ್ಥವಿಲ್ಲದ ಆಚರಣೆಗಳನ್ನು, ಪೌರೋಹಿತಶಾಹಿಯನ್ನು, ಆಡಂಬರದ ಪೂಜೆಗಳನ್ನು, ಡಂಭಾಚಾರದ ಭಕ್ತಿಯನ್ನು, ಅವೈಜ್ನಾನಿಕವಾಗಿರುವ ಯಾವುದೇ ತಲೆ ಬುಡಗಳಿಲ್ಲದೇ ಜನರನ್ನು ಹಾದಿತಪ್ಪಿಸುವ ಮಾಟ ಮಂತ್ರ ಗಳನ್ನು ನಾನು ಬಹುವಾಗಿ ವಿರೋಧಿಸುತ್ತೇನೆ, ದೇವರ ವಿಷಯ ಬಂದಾಗ ನನಗೆ ಜಿ ಎಸ್ ಎಸ್ ರವರ

"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣು ಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ"

ಸಾಲು ನೆನಪಾಗುತ್ತದೆ, ಇಂತಹ ವೈಚಾರಿಕ ಹಿನ್ನೇಲೆಯುಳ್ಳ ನಾನು ಪ್ರೀತಿಯ ವಿಷಯದಲ್ಲಿ ನನಗೆ ಜಯವಾಗಲಿ ಎಂದು ಇಲ್ಲೇ ಹತ್ತಿರದ ದೇವರಿಗೆ "ವಿಶೇಷ" ಪೂಜೆಯನ್ನೂ ಮಾಡಿಸಿದೆ. ಬರುಬರುತ್ತ ನಾನು ಆ ದೇವಿಯ ದಾಸನಾಗಿರುವಂತೆಯೂ, ಹಗಲೂ ರಾತ್ರಿ ಆ ದೇವಿಯ ಉಪಾಸನೆಗೈವ ಭಕ್ತನಂತೆಯೂ ಗೋಚರಿಸಹತ್ತಿತು, ಮನಸ್ಸು ತನ್ನ ಸ್ಥಿಮಿತ ಕಳೆದುಕೊಂಡಿತು, ನನ್ನ ದೇಹದ ನಿರ್ವಹಣಾಶಕ್ತಿಯೇ ಕಳೆಗುಂದಿದ ಅನುಭವವಾಗತೊಡಗಿತು. ಎನೀ.. ವೇದನೆ ....ಅನುಭವಿಸುವ ಹಾಗೂ ಇಲ್ಲ ಬಿಡುವ ಹಾಗೂ ಇಲ್ಲ. "ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು" ಎಂಬ ಸಾಲನ್ನು ಬಿಟ್ಟರೆ ನನ್ನ ಯಾವ ಆಸೆ, ಆಕಾಂಕ್ಷೆ, ಅಭಿರುಚಿ, ಆಸಕ್ತಿಯಲ್ಲೂ ನಾನು ಪ್ರೀತಿಯ ಬಗ್ಗೆ ಯೋಚಿಸಿದವನಲ್ಲ, ನನ್ನ ಎಡಗಾಲಿನ ಕೊನೆಯ ಧೂಳಿನ ಕಣದಷ್ಟಿದ್ದ ಪ್ರೀತಿಯೊಂದು ಹೆಮ್ಮರವಾಗಿ ಅಣು ಅಣುವು ಬಿಡದೇ ಆವರಿಸಿ ಹೋಗಿತ್ತು. ಅದಾವ ಮಾಯಾಜಿಂಕೆಯ ವೇಷದಲ್ಲಿ ಬಂದು ಅವಳು ಅದೇನು ಮೋಡಿ ಮಾಡಿದಳೋ ತಿಳಿಯದಾಗಿತ್ತು. ಪಾದರಸದಷ್ಟು ಚಲನಶೀಲನಾಗಿದ್ದ ನಾನು ನನ್ನ ಮನದನ್ನೆಯ ಪ್ರೇಮ ಸೆಲೆಗೆ ಸಿಲುಕಿ ಜರ್ಜರಿತವಾಗಿ ನಿರ್ಜೀವ ವಸ್ತುವಿಗೆ ಪ್ರಾಣ ತುಂಬಿದಂತಾಗಿದ್ದೆ.

ಅಷ್ಟರೊಳಗೆ ಆಕಸ್ಮಿಕವಾಗಿ ಅನಿರೀಕ್ಷಿತ ಘಟನೆಯೊಂದು ನಡೆದು ಹೋಯಿತು, ನನ್ನ ಬಾಲ್ಯದ ಗೆಳೆಯನೊಬ್ಬನನ್ನು ಭೇಟಿಯಾಗಲು ಸಮಯ ನಿಗದಿ ಮಾಡಿಕೊಂಡು ಹೋಗಿದ್ದೆ ಅಲ್ಲಿ ಅವನು ಪಕ್ಕದಲ್ಲಿರುವವನನ್ನು ಕುರಿತು ಇವರು ನನ್ನ ಗೆಳೆಯನೆಂದೂ ... "ಪೂರ್ಣಸೇವಾ ಐ ಟಿ ಸೊಲೂಷನ್ಸ್" ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದೂ ಹೇಳಿದ... ಅಷ್ಟೇ ಕಿವಿಗಳಲ್ಲಿ ಸಣ್ಣದಾದ ಕಂಪನ ಉಂಟಾಯಿತು.. ಇನ್ನೊಮ್ಮೆ ಯಾವ ಕಂಪನಿಯೆಂದು ಕೇಳಿದೆ, ಅವನು ಮುಖದಲಿ ಯಾವುದೇ ಸ್ಪಷ್ಟ ಭಾವನೆಗಳನ್ನು ಹೊರಹಾಕದೇ ಏಕ ಮನಸ್ಕನಾಗಿ ನನ್ನನ್ನೇ ದಿಟ್ಟಿಸಿನೋಡುತ್ತ "ಪೂರ್ಣಸೇವಾ ಐ ಟಿ ಸೊಲೂಷನ್ಸ್" ಕಂಪನಿ ಎಂದ ..

ಹೌದು ನಿಮ್ಮ ಊಹೆ ನಿಜ.. ಅದೇ ಮಾಯಾಂಗನೆಯ ಕಂಪನಿಯದೇ ಹೆಸರದು, ಕೂಳು ನೀರಿನ ಪರಿವೆಯಿರದೇ ಆಗುಂತಕನೊಬ್ಬ "ನಿಧಿ"ಯ ಜಾಡನ್ನು ಹಿಡಿದು ಅಲೆಮಾರಿ ಕಾಡಿನಲ್ಲಿ ಅಲೆದು ಅಲೆದು ಸಾಕಾಗಿ ನಿಷಣ್ಣನಾಗಿದ್ದವನಿಗೆ ಒಮ್ಮೆಲೇ "ನಿಧಿ"ಕಂಡ ತಕ್ಷಣ ಪುಳಕಗೊಂಡಂತಾಗಿತ್ತು ನನ್ನ ಪರೀಸ್ಥಿತಿ. ಮುಖವೆಲ್ಲ ಬಾನಗಲ ಅರಳಿ, ಮೈ ಮೇಲೆ ಉತ್ಸಾಹದ ಚಿಲುಮೆ ಉಕ್ಕಿ ಬಂದು, ಜಡವಾಗಿದ್ದ ಧಮನಿಗಳಿಗೆಲ್ಲ ಹೊಸ ರಕ್ತ ಹರಿದು ಬಂದು, ನರ ನಾಡಿಗಳಿಗೆಲ್ಲ ಚೈತನ್ಯ ಶಕ್ತಿ ಬಂದಂತಾಗಿ ಎದುರಿಗಿರುವವನು ನನಗೆ ದೇವಧೂತನಂತೆಯೂ ದೇವರು ನನ್ನ ಕಾರ್ಯಸಿದ್ಧಿಗಾಗಿ ಅವನನ್ನು ದೇವಲೋಕದಿಂದ ಕಳಿಸಿದಂತೆಯೂ ಅನ್ನಿಸತೊಡಗಿತು. ಕೂಡಲೇ ಅವನ ಪೂರ್ವಾಪರಗಳನ್ನೂ ಯೋಚಿಸದೇ ನನ್ನ ವೃತ್ತಾಂತವನ್ನೆಲ್ಲ ಅವನಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಹಸಿವಿನ ತೀವ್ರತೆಯಲ್ಲಿರುವ ಭಿಕ್ಷುಕನೊಬ್ಬ ಊಟಕ್ಕೆ ಬೇಗ ತರುವಂತೆ ಮನೆಯ ಮುಂದೆ ಗೀಳಿಡುವ ಹಾಗೆ ಅವನೆದುರು ಗೋಗರೆದು ಕೊಳ್ಳಲಾರಂಭಿಸಿದೆ

ಅವನು ನನಗೆ ರಚ್ಚೆ ಹಿಡಿದ ಮಗುವಿಗೆ ಸಾಂತ್ವನ ಹೇಳುವಂತೆ ನನ್ನನ್ನು ಸಮಾಧಾನಪಡಿಸಿ, ಅವರ ಕಂಪನಿಯಲ್ಲಿ ಕೇವಲ ೧೦೦ ಜನ ಮಾತ್ರ ಇರುವುದಾಗಿಯೂ, ಕಂಡುಹಿಡಿಯುವುದು ಬಹಳ ಸುಲಭವೆಂದೂ, "ಚಂದ್ರಾ ಲೇ ಔಟ್" ಕ್ಯಾಬ್ ಲಿಸ್ಟ್ ತೆಗೆದರೆ ಎಲ್ಲಾ ಗೊತಾಗುತ್ತದೆಯೆಂದೂ, ಏನೂ ಯೋಚಿಸದಿರುವಂತೆಯೂ ಹೇಳಿದ. ನಾಳೆ ಅವಳ ಬಗ್ಗೆ ಪೂರ್ತಿ ತಿಳಿದುಕೊಂಡ ಮೇಲೆ ನನಗೆ ತಿಳಿಸುವುದಾಗಿ ಹೇಳಿ ನನ್ನ ಫೊನ್ ನಂಬರ್ ತೆಗೆದುಕೊಂಡು ಹೋದ.

ನಾಳೆಗಾಗಿ ಕಾತುರತೆಯ ಜಾತಕ ಪಕ್ಷಿ ಕಾಯತೊಡಗಿತು ಪ್ರತಿ ಕ್ಷಣವನ್ನು .. ಪ್ರತಿ ಕ್ಷಣವೂ ಯುಗವಾಗಿ ಗೋಚರಿಸಹತ್ತಿತು. ಆಕಸ್ಮಿಕವಾಗಿ ಸಂಧಿಸಿದ ಆ ಗೆಳೆಯನ ದೆಸೆಯಿಂದಾದರೂ ನನ್ನ ರೋದನೆಗೆ ಕೊನೆ ಹಾಡಬೇಕು, ನನ್ನ ಮನಸ್ಸಿನ ನಿವೇದನೆಗೆ ಇವನನ್ನೇ ಸೇತುವೆಯನ್ನಾಗಿ ಬಳಸಿಕೊಳ್ಳಬೇಕು ಇತ್ಯಾದಿ..ಇತ್ಯಾದಿ.. ಮನಸ್ಸು ಗರಿಬಿಚ್ಚಿ ಬಾನಗಲ ಹಾರಾಡತೊಡಗಿತ್ತು, ಅಂದು ನನ್ನ ಮನಸ್ಸಿನ ಹಕ್ಕಿಗೆ ಬಾನು ಕೂಡ ಚಿಕ್ಕದಾಗಿ ಗೋಚರಿಸತೊಡಗಿತು.

ಕೊನೆಗೂ ನನ್ನ ಜೀವನದಲ್ಲಿ ತುಂಬ ನಿರೀಕ್ಷೆ ಇಟ್ಟುಕೊಂಡ ದಿನ ಬಂದೇ ಬಿಟ್ಟಿತು, ಬೆಳಗ್ಗೆಯೆ ಅವನಿಗೆ ಫೋನ್ ಮಾಡಿ "ನಿನ್ನ ನಿತ್ಯದ ಕೆಲಸಕ್ಕಿಂತ ಇದು ತುಂಬಾ ಮಹತ್ವವಾದುದು" ಎಂದು ನೆನಪು ಮಾಡಿಕೊಟ್ಟೆ, ದಿನಪೂರ್ತಿ ಹೇಗೋ ನಿಭಾಯಿಸಿಕೊಂಡು ಸಾಯಂಕಾಲ ಮನೆಯ ಎದುರು ನಿಂತು ಅವನ ಕಾಲ್ ಗಾಗಿ ಕಾಯುತ್ತಿದ್ದೆ, ಅಷ್ಟರಲ್ಲೇ ಫೋನ್ ರಿಂಗಿಣಿಸಿದ ಶಬ್ದವಾಯಿತು, ಒಳ ಒಳಗೇ ಪುಳಕಗೊಂಡು ಕುತೂಹಲ ಮತ್ತು ಗಾಬರಿ ಮಿಶ್ರಿತ ಮನಸ್ಸಿನಿಂದ ಫೋನ್ ಎತ್ತಿಕೊಂಡೆ

"ಮಗಾ ದಯವಿಟ್ಟು ಅವಳನ್ನು ಮರೆತುಬಿಡು, ನಿನ್ನ ನಿಷ್ಕಲ್ಮಷ ಪ್ರೀತಿ ಪಡೆಯುವ ಭಾಗ್ಯ ಅವಳಿಗಿಲ್ಲ ಅವಳೀಗ ಪರರ ಸ್ವತ್ತು ಇದೇ ತಿಂಗಳು ೧೩ ರಂದು ಅವಳ ಮದುವೆ "

ಒಂದೇ ಕ್ಷಣ, ಅದೊಂದೇ ಮಾತು ನನ್ನ ಕಿವಿಗೆ ಬರಸಿಡಿಲಿನಂತೆ ಬಂದೆರಗಿತ್ತು, ಮುಳ್ಳಿನ ಕಂತೆಯೊಂದನ್ನು ಹಿಡಿದು ಮೊಬೈಲ್ ನಿಂದ ಕಿವಿಗೆ ಚುಚ್ಚಿದಂತಾಗಿತ್ತು, ಮನೆಯಂಗಳದಿಂದ ಒಳಗೆ ಹೋಗಲು ಕೂಡ ಆಗದೇ ಕಣ್ಣುಗಳು ಮಂಜು ಮುಸುಕಿದಂತೆ ಗೋಚರಿಸತೊಡವು, ಅದೇ ಮಂಜು ಮುಸಿಕಿದ ದಾರಿಯಲ್ಲಿ ಒಳ ಬಂದು ಗೋಡೆಯೊಂದಕ್ಕೆ ಆತುಕೊಂಡು ಹಾಗೆ ಶೂನ್ಯಮನಸ್ಕನಾಗಿ ಕೂತು ಬಿಟ್ಟೆ. ಎಷ್ಟೋ ಹೊತ್ತಿನ ನಂತರ ಮೈಮೇಲೆ ಎಚ್ಚರವಾದಂತೆನಿಸಿ ಸುತ್ತಲೂ ನೋಡಿದೆ, ನಾಲ್ಕೂ ಗೋಡೆಗಳು ನನ್ನನ್ನು ನೋಡಿ ಗಹ ಗಹಿಸಿ ನಗುತ್ತಿರುವಂತೆ ಭಾಸವಾಗತೊಡಗಿತು. ಕೂಡಲೇ ಮನೆಯಿಂದ ಎದ್ದು ಹೊರಟೆ, ಯಾವುದೇ ಶಬ್ಧಗಳಿಗೆ ಅವಕಾಶವಿರದ, ನಿರುಮ್ಮಳವಾಗಿರುವ, ನಮ್ಮಿಬ್ಬರ ಅನಾಮಿಕ ಮಿಲನಕ್ಕೆ ವೇದಿಕೆ ಹಾಕಿದ್ದ ಅದೇ ಹಸಿರು ಉದ್ಯಾನವನಕ್ಕೆ ಹೋಗಿ ಕೂತೆ. "ಹಸಿರು.." ಮನಸ್ಸೆಂಬ ಮನಸ್ಸೇ ಪ್ರೀತಿಯೆಂಬ ಕಾಡ್ಗಿಚ್ಚಿನ ಪ್ರಕೋಪಕ್ಕೆ ಸಿಲುಕಿ ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗುತ್ತಿರುವಾಗ ಈ ಉದ್ಯಾನವನದ ಹಸಿರೆಲ್ಲ ನನ್ನನ್ನು ನೋಡಿ ಗೇಲಿ ಮಾಡಿದಂತೆನಿಸ ತೊಡಗಿತು, ಅವಮಾನವಾದಂತೆನಿಸಿ ಹಾಗೆಯೇ ಕಣ್ಮುಚ್ಚಿಕೊಂಡು ಕುಳಿತುಬಿಟ್ಟೆ ಸುಮಾರು ಹೊತ್ತಿನ ನಂತರ ಕಣ್ತೆರೆದಾಗ ನಿಧಾನವಾಗಿ ಕತ್ತಲು ಆವರಿಸತೊಡಗಿತು. "ಕತ್ತಲು" ಎಷ್ಟೊಂದು ಹಿತವಾಗಿದೆ, ಹೀಗೇ ಇರಬಾರದಿತ್ತೆ ಅಂದು ಆ ಮಾಯಾಜಿಂಕೆಯ ಮುಖವನ್ನು ನಾನು ನೋಡಿದಾಗ ? ಯಾವ ಮಾಯಾಜಾಲಕ್ಕೆ ಬಿದ್ದು ನಾನು ನನ್ನ ಮನಸ್ಸನ್ನು ವಿಷಣ್ಣಗೊಳಿಸಿದೆ ? ನನ್ನದೇ ಜಗತ್ತಿನಲ್ಲಿ ನಾನು ಮತ್ತು ನನ್ನ ಮನಸ್ಸು ರಾಜನಂತೆ ಬದುಕುತ್ತಿದ್ದೆವು. ಒಂದೇ ನೋಟ, ಅಪರೂಪಕ್ಕೆ ಬರುವ ಅತಿಥಿಯಂತೆ ಬಂದ ಒಂದೇ ಭಾವನೆ, ನನ್ನ ಮನಸ್ಸನ್ನೆಲ್ಲ ಎಂದೂ ಸರಿದೂಗಿಸಲಾಗದ ವಿಕಲಾಂಗಚೇತನಕ್ಕೊಳಪಡಿಸಿಬಿಟ್ಟಿತ್ತು. ಈ ಪ್ರೀತಿಯೆಂಬ ಚಕ್ರವ್ಯೂಹಕ್ಕೆ ಸಿಲುಕಿ ಜೀವನ, ಜಗತ್ತು ಎಲ್ಲವೂ ಅಸಹ್ಯವೆನಿಸತೊಡಗಿತು

ಅವಳ ಪಾತ್ರವೇನು ?
ಏನೂ ಇಲ್ಲ .. ಎಲ್ಲವೂ ನನ್ನದೇ ಕಲ್ಪನೆ, ನನ್ನದೇ ಮಾತುಗಳು, ನನ್ನದೇ ಭಾವನೆಗಳು, ಮನಸ್ಸಿನ ಭಾವನೆಗಳಿಗೆ ಗರಿಬಿಚ್ಚುತ್ತಾ ಹೋದಂತೆ ಭ್ರಮಾಲೋಕದಲ್ಲಿ ಎತ್ತರದ ಪರಿವೆಯೇ ಇಲ್ಲದೇ ಹಾರಡುತ್ತಿದ್ದೆ, ಈಗ ರೆಕ್ಕೆಗಳೆಲ್ಲ ಉದುರಿಬಿದ್ದಿವೆ, ಮನಸ್ಸು ಘಾಸಿಗೊಳಗಾಗಿದೆ. ನೆಮ್ಮದಿಯ ವಿಷಯವೇಂದರೆ ಅದು ತೀರ ವಾಸಿಯಾಗದಷ್ಟು ಘಾಸಿಯಾಗಿಲ್ಲ.

ಮುಂದೆ ?
"ಈಸಬೇಕು ಇದ್ದು ಜೈಸಬೇಕು", ಬಹುಷಃ ನನ್ನ ಗೆಳೆಯರು ಇನ್ಮುಂದೆ "ಪ್ರೀತಿಸುವ ಹೃದಯಗಳ ಭಾವನೆಗಳು ನಿನಗೆ ಅರ್ಥವಾಗುವುದಿಲ್ಲ" ಎನ್ನುವ ವಾಕ್ಯದಿಂದ ಮುಕ್ತನಾಗುತ್ತೇನೆ. ಏಕೆಂದರೆ ನನಗೀಗ ಪ್ರೀತಿಯ ವ್ಯಾಕ್ಯರಣವೂ ಗೊತ್ತು, ವ್ಯಾಕುಲತೆಯೂ ಗೊತ್ತು.

ಸಂಗಾತಿಯ ಆಯ್ಕೆಯಾಗುವುದಾದರೆ ಪ್ರೀತಿಯಿಂದಲೇ ಎನ್ನುವಷ್ಟು ಅತಿರೇಕದ ಪರಮಾವಧಿಗೆ ನಾನಿನ್ನು ಹೋಗಿಲ್ಲ, ಮನಸ್ಸು ಸಂಪೂರ್ಣವಾಗಿ ನನ್ನ ಸ್ಥಿಮಿತಕ್ಕೇ ಬಂದಿದೆ, ವಯಸ್ಸಿನ ಅನುಪಾತಕ್ಕನುಗುಣವಾಗಿ ಬಂಧುಗಳು, ಹಿತೈಷಿಗಳು ನನ್ನ ಬಗ್ಗೆ ಓಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತ ಬಂದಿದ್ದಾರೆ, ಸೋ.. ಮದುವೆಯ ನಿರ್ಧಾರ ಕೂಡ ಓವರ್ ಟು ದೆಮ್ಮ್
ದೇಹದಂಡನೆಯಾಗಿದ್ದರೆ ಬೇಗ ವಾಸಿಯಾಗುತ್ತಿತೇನೋ ಆದರೆ ಮನಸ್ಸಿಗೆ ಘಾಸಿಯಾಗಿದೆ ಗಾಯ ವಾಸಿಯಾಗಲು ಸ್ವಲ್ಪ ಸಮಯಬೇಕು.

ಮಾನಸವಾಣಿಯಿಂದ,
-ಚಂದ್ರು

Tuesday, November 3, 2009

ಉಳುವಾ ನೇಗಿಲಯೋಗಿಯ ಬಾಳು, ಕೊನೆಕಾಣದ ಗೋಳು....


ಉಳುವಾ ನೇಗಿಲಯೋಗಿಯ ಬಾಳು, ಕೊನೆಕಾಣದ ಗೋಳು....


ಆತ್ಮಿಯ ಬಾಂಧವರೇ,
ನಿಮಗೆಲ್ಲಾ ಗೊತ್ತಿರುವಂತೆ ಉತ್ತರ ಕರ್ನಾಟಕವಿಂದು ನಾವೆಂದೂ ಕಾಣದ/ಊಹಿಸದ/ಬಯಸದ ಪ್ರಕೃತಿ ಮಾತೆಯ ಮುನಿಸಿಗೆ ತುತ್ತಾಗಿ ತತ್ತರಿಸಿ ಹೋಗಿದೆ.
ತನ್ನೆಲ್ಲ ಮುನಿಸಿಗೂ ತಾನು ಬಯಸುವ ಬಲಿ ಅಮಾಯಕರು ಮತ್ತು ಬಡವರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ ಆ ಪ್ರಕೃತಿ ಮಾತೆ. ಅವರ ಯಾತನೆ, ರೋದನೆಗಳೇ ಅವಳಿಗೆ ಅಪ್ಯಾಯಮಾನವೆನಿಸಿವೆನೋ ಯಾರು ಬಲ್ಲರು? ಅಮಾಯಕರ ಬಾಳನ್ನು ಮೂರಾಬಟ್ಟೆ ಮಾಡಿ ಗಹ ಗಹಿಸಿ ನಗುವುದೇ ಅವಳ ಒಂದಂಶದ ಕಾರ್ಯವಾಗಿದೆ. ಸಂಪತ್ತನ್ನೆಲ್ಲ ಲೂಟೆ ಹೊಡೆಯುವ ಕಳ್ಳ ಖದೀಮರೆಲ್ಲ ಅವಳ ಗಮನಕ್ಕೇ ಬರುವುದಿಲ್ಲ.

ಅದೆಲ್ಲ ಇರಲಿ, ಅತಿವೃಷ್ಟಿಯೆಂಬ ಪ್ರಕೃತಿ ವಿಕೋಪದ ಬ್ರಹ್ಮ-ರಾಕ್ಷಸನ ಕೆಂಗಣ್ಣಿಗೆ ಗುರಿಯಾಗಿ, ದೇಶದ ಬೆನ್ನುಲುಬಾಗಿರುವ ರೈತನ ಬೆನ್ನುಲುಬು ಮುರಿದು ಹೋಗಿದೆ, ಸಾಲು ಸಾಲು ಕಷ್ಟಗಳ ಸುಳಿಗೆ ಸಿಲುಕಿ ನಾಳೆಗಳ ಬಗೆಗಿನ ನಂಬಿಕೆಯೇ ಅವನಿಗೆ ಕಮರಿ ಹೋಗಿದೆ,

ಬನ್ನಿ ಅವನ ಒಡಲಾಳದಲ್ಲೊಂದು ಭರವೆಸೆಯೆಂಬ ಚೈತ್ರದ ಹಸಿರು ಟಿಸಿಲೊಡೆಯುವಂತೆ ಮಾಡೋಣ, ಬತ್ತಿದ ಮನಸ್ಸಿನ ಒಳಗೊಂದು ಆಸೆಯ ಬೀಜ ಬಿತ್ತೋಣ, ಮುದುಡಿದ ಹೂ ಅರಳಿಸೋಣ, ಎದೆಯೊಳಗೊಂದು ಆಶಾಕಿರಣದ ಕಳಶ ಗೋಪುರ ಕಟ್ಟೋಣ.

ಶತಮಾನಗಳಿಂದ ಭೂಲೋಕಕ್ಕೆಲ್ಲ ಅನ್ನಸಂತರ್ಪಣೆಗೈದು ಹಸಿವು ನೀಗಿಸಿದ ಆ ಭೂಮಿ-ಪುತ್ರನ ಕೈ ಹಿಡಿದು ಮೇಲೆಬ್ಬಿಸಿ, ಪ್ರಕೃತಿಗೂ ಎದೆ ಸೆಟೆದು ಸವಾಲೆಸೆಯುವಂತೆ ಮಾಡೋಣ. ನಕ್ಷತ್ರಗಾಹಿಯಾಗಿರುವ ಅವನ ತಕ್ಷಣದ ಬಯಕೆಗಳಿಗೆ ಸ್ಪಂದಿಸೋಣ. ಒಂದು ಕಾಲದ ನಮ್ಮೆಲ್ಲರ ಸೂರು ಮತ್ತು ಬೇರಾಗಿದ್ದ ಕೃಷಿಯನ್ನು ಪೊರೆದು ಪೋಷಿಸುತ್ತಿರುವ ರೈತನ ಬಾಳನ್ನು ಮತ್ತೆ ಕಟ್ಟಿಕೊಡಲು ಶಕ್ತಿಮೀರಿ ಪ್ರಯತ್ನಿಸೋಣ

ಹಾಗಾದರೆ ನಾವು ಏನು ಮಾಡಬೇಕು ?

೧) ಬೇಡುವ ಕೈಗಳು ಸ್ವಚ್ಚವಾಗಿದ್ದರೆ ಕೊಡುವ ಕೈಗಳಿಗೆ ಎಂದೂ ಬರವಿಲ್ಲ. ನಿಮ್ಮ ಸ್ನೇಹಿತರ ಗುಂಪುಕಟ್ಟಿಕೊಂಡು ಅವರಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಕೊಟ್ಟು ಸಾಧ್ಯವಾದಷ್ಟು ಹಣವನ್ನು ತಕ್ಷಣವೇ ಜಮೆ ಮಾಡಲು ಹೇಳಿ,ನಂತರ ನೀವು ಹಣವನ್ನು ಸಮೀಪದ ಸಂತ್ರಸ್ತರೊಡನೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ, ಅಥವಾ ಮಠ ಮಾನ್ಯಗಳಿಗೆ ಕೊಡಿ

೨) ನಿಮ್ಮ ಆಫೀಸಿನ ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ ಅಥವಾ ಸಂಬಂಧಪಟ್ಟವರಿಗೆ ಹೇಳಿ ಆಫೀಸಿನ ಎಲ್ಲ ಸಹೋದ್ಯೊಗಿಗಳಿಗೂ ಸಹಾಯ ಕೇಳಿಕೊಂಡು ಮೇಲ್ ಕಳಿಸಲು ಹೇಳಿ ಅಥವಾ ಸಹೋದ್ಯೋಗಿಗಳ ಮಾಸಿಕ ವೇತನದ ಸ್ವಲ್ಪ ಭಾಗವನ್ನು ಅವರೇ ತೆಗೆದುಕೊಂಡು ಸಂತ್ರಸ್ತರಿಗೆ ಕೊಡಲು ಹೇಳಿ ಇಂತಹ ಸಂದರ್ಭಗಳಲ್ಲಿ ಯಾರೂ ಅದಕ್ಕೆ ವಿರೋಧಿಸುವುದಿಲ್ಲ

೩) ನಿಮಗೆ ಸದ್ಯಕ್ಕೆ ಆಫೀಸಿನಲ್ಲಿ ಯಾವುದೇ ಕೆಲಸದ ಒತ್ತಡವಿಲ್ಲದಿದ್ದರೆ, ನಾಲ್ಕಾರು ದಿನದ ಮಟ್ಟಿಗೆ ಹೋಗಿ ಸಂತ್ರಸ್ತರಿಗೆ ಸೂರು ಕಟ್ಟಿಕೊಡಲು ನೆರವಾಗಿ

೪) ನಿಮಗೆ ಯಾವುದೇ ತರನಾದ ಸಹಾಯ/ನೆರವು ಮಾಡಬೇಕೆನಿಸಿದರೂ ಉದಾಸೀನ ಬೇಡ ದಯವಿಟ್ಟು ತಕ್ಷಣವೇ ಮಾಡಿ

ಮಾನವೀಯ ಅಂತಃಕರಣವಿರುವ ಯಾರೂ ಇದನ್ನು ಹಗುರವಾಗಿ ಭಾವಿಸುವುದಿಲ್ಲವೆಂಬುದು ನಮ್ಮ ನಂಬಿಕೆ ಮತ್ತು ಸಾಧ್ಯವಾದಷ್ಟು ನಿಮ್ಮ ಮಿತ್ರರಿಗೂ ಇದನ್ನು ತಿಳಿಸಿಹೇಳಬೇಕೆಂಬುದು ನಮ್ಮೆಲ್ಲರ ಬಯಕೆ.

ನೆನಪಿರಲಿ : ನಿಮ್ಮ ಅಳಿಲು ಗಾತ್ರದ ಸೇವೆಯೂ ಕೂಡ, ನೆರೆಯ ಆರ್ಭಟಕ್ಕೆ ಬಳಲಿ ಬೆಂಡಾಗಿರುವ ಸಂತ್ರಸ್ತರಿಗೆ ಸಂಜೀವಿನಿ ಮಾತ್ರೆ ಯಾಗಬಹುದು. ನಮ್ಮೆಲ್ಲರ ಉಳುವಿಗಾಗಿ ದಿನವೆಲ್ಲ ದಣಿವಿಲ್ಲದೇ ದುಡಿಯುವ ಕೈ ಗಳಿಗೆ ಸಹಾಯ ಮಾಡಲು ಸಿಕ್ಕ ಸುವರ್ಣ ಅವಕಾಶವನ್ನು ದಯವಿಟ್ಟು ಹಾಳುಮಾಡಿಕೊಳ್ಳಬೇಡಿ

ರೈತನೆದ್ದರೆ ದೇಶ ಎದ್ದಂತೆ....

ಮಾನಸವಾಣಿಯಿಂದ,
-ಚಂದ್ರು

Wednesday, August 19, 2009

-: ಮನದರಸಿ :-




"ಮನದರಸಿ"

ಬೆಚ್ಚನೆಯ ಕನಸೊಂದು
ಬಿಚ್ಚದೇ ಕೂತಿದೆ ಎದೆಯಾಂತರಾಳದಲಿ...
ನಿನ್ನೊಲುಮೆಯ ಕಾವು ಬಯಸಿ

ದುಗುಡದೀ ನಯನಗಳು
ನೋಡದೇ ಚಡ-ಪಡಿಸಿವೆ ನಿರಾಶೆಯಲಿ...
ನಿನ್ನ ಸ್ನಿಗ್ಧ ಸೌಂದರ್ಯವನರಸಿ

ಮೊಗ್ಗಿನ ಮನಸ್ಸೊಂದು
ಅರಳದೇ ಕಾದಿದೆ ಆಸೆಯಲಿ...
ನಿನ್ನ ಸೆರಗಿನಾ ಮೊನೆಯ ಸ್ಪರ್ಷವನರಸಿ

ಮನಸಿನಾ ಮಾತೊಂದು
ಹೊರಬರದೇ ತಡವರಿಸಿದೆ ತುಟಿಯಂಚಿನಲಿ...
ನಿನ್ನಂತರಂಗದ ಸಮ್ಮತಿಯನರಸಿ

ಬಿಸಿ ಬಯಕೆಗಳು
ಬಿಡದೇ ಸುಡುತಿವೆ ಬಿರುಸಿನಲಿ...
ನಿನ್ನ ಪ್ರೀತಿಯೆಂಬ ಕಡು ತಂಪನರಸಿ

ನೀನಿಲ್ಲದ ನಾನು ನೀರಿಲ್ಲದಾ ಮೀನು
ತಡವೇಕೆ ನಾರಿ ಒಲಿಯುವೆಯಾ ಕನಿಕರ ತೋರಿ ?

ಮಾನಸವಾಣಿಯಿಂದ,
-ಚಂದ್ರು

Thursday, August 6, 2009

-:ಆಗುಂತಕನ ಕಾಣದ ಇನ್ನೊಂದು ಮುಖ :-

ಮುನ್ನುಡಿ:
ನಾವೆಷ್ಟೇ ಬಲವಾಗಿ ವಿರೋಧಿಸಿದರೂ ಅದೊಂದು ಪಾತ್ರ ನಮ್ಮಲ್ಲಿ ಹುಟ್ಟಿಸಿದ ಕಂಪನ ಮಾತ್ರ ಜೋರಾಗಿಯೇ ಸದ್ದು ಮಾಡಿದೆ. "ಆಗುಂತಕನ ಆಡದ ಮಾತುಗಳು" ಅಂಕಣದಲ್ಲಿ ಆ "ಸಾಫ್ಟ್ ವೇರ್ ಇಂಜಿನಿಯರ್" ಪಾತ್ರದ ಒಂದು ಮುಖದ ಬಗ್ಗೆ ಮಾತ್ರ ಬರೆದಾಗ, ಮನಸ್ಸಿನಲ್ಲಿ ನಾನೆಲ್ಲೋ ಕೆಲವೊಂದು ವಿಚಾರಗಳನ್ನು ಉದ್ದೇಶಪೂರ್ವಕವಾಗಿಯೇ ಬದಿಗಿರಿಸಿ ಏಕ-ಮುಖವಾಗಿ ಬರೆಯುತ್ತಿದ್ದೇನೆ ಎನಿಸುತ್ತಿತ್ತು, ಈ ಲೇಖನವನ್ನು ಬರೆಯುವ ಮೂಲಕ ಆ ಪಾಪ-ಪ್ರಜ್ನೆ ನನ್ನಲ್ಲಿ ದೂರವಾಯಿತು. ಆ ಪಾತ್ರದ ಉದ್ದೇಶ ಎಷ್ಟೇ ದುರಾದೃಷ್ಟಿಯಿಂದ ಕೂಡಿದ್ದರೂ ಕೆಲವೊಂದು ಸಮಾಜಮುಖಿ ಕ್ರಾಂತಿಗಳಾಗಿವೆ, ಅವುಗಳನ್ನು ನಾನು ಪ್ರಸ್ತಾಪಿಸದಿದ್ದರೆ ನಾನು ಬರವಣಿಗೆಗೂ ಮತ್ತು ಒದುಗರಿಗೂ ಮೋಸಮಾಡಿದಂತಾಗುತ್ತದೆ. ಹೆಣ್ಣನ್ನು ಹಡೆಯುವುದೇ ಪಾಪ ಎಂದು ತಿಳಿದುಕೊಂಡಿದ್ದರು, ಯಾವ ಶಾಲೆಯ ಶಿಕ್ಷಣವಾಗಲಿ, ಜಾಗೃತಿ ಆಂದೋಲನಗಳಾಗಲಿ, ದೃಶ್ಯ/ಶ್ರವಣ/ಬರಹ ಮಾಧ್ಯಮಗಳಾಗಲೀ ಏನೂ ಪ್ರಭಾವ ಬೀರಿರಲಿಲ್ಲ. ಜಾಗತೀಕರಣದಿಂದ ಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿಗೆ ಈಗ ಎಲ್ಲವನ್ನೂ ದೂರ ಮಾಡಿದೆ. ಎನೊ ಸ್ವಲ್ಪ ಕಲಿಸಿದರೆ ಅವಳ ಜೀವನ ಅವಳು ನೋಡಿಕೊಳ್ಳುತ್ತಾಳೆ ಎನ್ನುವ ಬಲವಾದ ನಂಬಿಕೆ ಅವಳ ಹೆತ್ತವರಿಗೆ ಬಂದುಬಿಟ್ಟೀದೆ. ಮಗ ಅಪಾ-ಪೋಲಿಯಾಗಿ ತಿರುಗಾಡುವಾಗ ತಂದೆಗೆ ಎಲ್ಲಿಲ್ಲದ ಯೋಚನೆಯಿರುತ್ತಿತ್ತು, ಆದರೆ ಈಗ ಒಂದು ಕೆಲಸ ಸಿಕ್ಕ ತಕ್ಷಣ ನಿರುಮ್ಮುಳವಾಗಿದ್ದಾನೆ.

ಇನ್ನು ಹದಿಹರೆಯದ ವಯಸ್ಸಿನಲ್ಲಿ ಕೈತುಂಬ ದುಡ್ಡು ಸಂಪಾದನೆ ಮಾಡುವಾಗ ಮನಸ್ಸು ಬೇರೆಡೆ ಹೊರಳುವುದು ಸಹಜ, ಅದಕ್ಕೆ ನಾವು ಬೇಲಿ ಹಾಕಬೇಕು. ಒಂದು ಮಾತಿದೆ ಹಣ ಮಾತನಾಡಲು ಶುರು ಮಾಡಿದರೆ ಸತ್ಯ ಸುಮ್ಮನಾಗುತ್ತದೆಯಂತೆ. ಅಲ್ಪನಿಗೆ ಐಷ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಬಹುಶಃ ಇಲ್ಲೂ ಅದೇ ಕಥೆಯಾಗಿರಬಹುದು. ಸರಿಯೋ/ತಪ್ಪೋ,ಒಳ್ಳೆಯದೋ/ಕೆಟ್ಟದ್ದೋ, ಬೇಕಿತ್ತೋ/ಬೇಡವಿತ್ತೋ ನಾವು ಜಾಗತೀಕರಣದ ನೌಕೆಯನ್ನು ಹತ್ತಿಯಾಗಿದೆ, ರಾತ್ರೋ ರಾತ್ರಿ ನಾವು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿಲ್ಲ ಇರುವುದರ ಜೊತೆಗೆ ಸಾಗಿ ಕಳೆದದ್ದನ್ನು ಪಡೆದುಕೊಳ್ಳುವುದು ಸೂಕ್ತ. ನನ್ನ ಉದ್ದೇಶ ಇಷ್ಟೆ ಬರೀ ಹೊರಗಿನ ಶಕ್ತಿಗಳು ಬಂದು ಹೀಗಾಯಿತು ಎಂದು ರೋದಿಸುವುದಕ್ಕಿಂತ, ಎಲ್ಲೊ ನಮ್ಮ ವ್ಯವಸ್ಥೆಯಲ್ಲೂ ತಪ್ಪಿದೆ ಅದನ್ನು ಸರಿಗಾಣಿಸುವ ಇಚ್ಚಾಶಕ್ತಿ ಕೊರತೆ ನಮ್ಮಲಿಯೂ ಇದೆ, ಅದನ್ನು ಅರಿತು ಮುನ್ನಡೆಯಬೇಕಾಗಿದೆ.

ಮರೆತ ಮಾತು:
ಬರವಣಿಗೆ ಮತ್ತು ಓದು ನನ್ನ ಪ್ರವೃತ್ತಿಗಳು ಎಂದು ತಿಳಿದು, ನನ್ನಲ್ಲಿರುವ ಬರಹಗಾರನನ್ನು ಹೊರತೆಗೆದು ನನಗೆ ಬರೆಯಲು ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಹಿರಿಯ ಸ್ನೇಹಿತ ಸುರೆಶ್ ನರಸಿಂಹರಿಗೆ ಈ ಹೊತ್ತಿನಲ್ಲಿ ವಿಶೇಷ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ. ನನ್ನಲ್ಲಿರುವ ಪುಸ್ತಕ ವ್ಯಾಮೋಹಕ್ಕೆ ನೀರೆರೆದು ಪೋಷಿಸಿದವರು ಅವರೇ. ನಿರಂತರ ಕೆಲಸದ ಒತ್ತಡದೆ ನಡುವೆಯೂ ಇಂತಹ ಲೆಖನಗಳು ಹೊರಬರಲು ಅವರೇ ಪರೊಕ್ಷ ಕಾರಣ.

-:ಆಗುಂತಕನ ಕಾಣದ ಇನ್ನೊಂದು ಮುಖ :-
ನಾನ್ಯಾರು ???
ಮತ್ತೆ ಮತ್ತೆ ಮನದ ಆಳದಲ್ಲಿ ತೂರಿಬರುತ್ತಿರುವ ಒಂದೇ ಪ್ರಶ್ನೆ, ಅಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಈ ಪ್ರಶ್ನೆ ಮೊದಲು ಮಾಡಿದ ನನ್ನ ಆಲೋಚನೆಗಳ ಬಗ್ಗೆ ನನಗೇ ಹಿಡಿದಿಟ್ಟುಕೊಳ್ಳಲಾರದ ಸಂಶಯದ ಬೀಜ ಮೊಳಕೆಯೊಡೆಯುವಂತೆ ಮಾಡಿತು. ಭಾವುಕರ ನಾಡಿನಲ್ಲಿ ಅನಾವಷ್ಯಕವಾಗಿ ನಾನು ಭಾವುಕನಾದೆ ಅನಿಸುತ್ತಿತ್ತು. ನನ್ನಷ್ಟಕ್ಕೆ ನಾನೇ ತುಲನಾತ್ಮಕವಾಗಿ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡಿದೆ.

ನಾನು ಬರುವುದಕ್ಕಿಂತ ಮುಂಚೆ ನಿಮ್ಮ ಸ್ಥಿತಿಯನ್ನು ಒಮ್ಮೆ ಆತ್ಮಾವಲೋಕನ ಮಾಡೊಕೊಳ್ಳೀ: ಶತಕೋಟಿಗಟ್ಟಲೇ ಜನಸಂಖ್ಯೆ, ಅದರಲ್ಲಿ ಕೊಟ್ಯಾನುಗಟ್ಟಲೇ ಬಿಸಿರಕ್ತದ ಪ್ರತಿಭಾವಂತ ಯುವಶಕ್ತಿ, ಕಾಡ್ಗಲ್ಲು ಕೊಟ್ಟರೆ ಮರುದಿನವೇ ಶಿಲೆ ಮಾಡಿ ನಿಲ್ಲಿಸುವ ಪಾಂಡಿತ್ಯ ಮತ್ತು ಅದಕ್ಕೇ ಜೀವಬರಿಸುವ ಉತ್ಸಾಹ .ಇಂತವರು ಬ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ರಾಜಕೀಯ ಶಕ್ತಿಗಳಿಂದಾಗಿ ಕೆಲಸವಿಲ್ಲದೇ ಬೀದಿ ಬೀದಿ ಅಲೆಯುತ್ತಿದ್ದರು. ವಿಶ್ವ ವಿದ್ಯಾನಿಲಯಗಳೆಂದರೆ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಿದ್ದಂತೆ ಎಂದು ಜನ ಆಡಿಕೊಳ್ಳುತ್ತಿದ್ದರು. ಶಿಕ್ಷಣದ ವ್ಯವಸ್ಥೆಯ ಮೇಲೆ ರ್‍ಒಸೆದ್ದು ಹೋಗಿ ನಂಬಿಕೆ ಕಳೆದು ಕೊಂಡಿದ್ದರು. ಇವರನ್ನಾಳುವ ಡೊಂಕು ಬಾಲದ ನಾಯಕರೋ ಇಂತಹ ಯಾರಿಗೂ ಕೈಗೆಟುಕದ ಮಾನವ ಸಂಪನ್ಮೂಲವನ್ನು ಇಟ್ಟುಕೊಂಡು ಜಗತ್ತಿಗೇ ಮಾದರಿಯಾಗುವ ದೇಶಕಟ್ಟಬಹುದಾಗಿತ್ತು. ನಮ್ಮಷ್ಟು ಹಪಾಹಪಿಯಿದ್ದಿದ್ದರೆ ನಮ್ಮನ್ನೂ ಸೇರಿದಂತೆ ಜಗತ್ತನ್ನೇ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬಹುದಾಗಿತ್ತು. ಆದರೆ ಇವರಿಗೇ ಜನಸಂಖ್ಯೆಯೇ ಸಮಸ್ಯೆಯಾಗಿದೆ. ಯಾವುದು ವರದಾನವಾಗಬೇಕಿತ್ತೋ ಅದು ಶಾಪವಾಗಿ ಮಾರ್ಪಟ್ಟಿತ್ತು. ಭಾರತ ದೇಶವೆಂದರೆ ಏಡಿಗಳ ಕಥೆಗೆ ಹೆಸರುವಾಸಿ ಈ ಕಥೆಯ ಮೂಲಕ ನಮ್ಮ ದೇಶದಲ್ಲಿ ಈಗಲೂ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ ಹಾಗೆಯೇ ಇನ್ನೊಂದು ನಿಮಗಿದ್ದ ಬಿರುದೆಂದರೆ ಅದು "ಹಾವಡಿಗರ ನಾಡು".

ಅಂದೊಂದು ಕಾಲವಿತ್ತು ನೀವು ಯಾವುದಾದರೂ ಊರಿಗೆ ಹೋಗುವಾಗ ಬಟ್ಟೆಗೆ ಇಸ್ತ್ರೀ ಮಾಡಿಸಿಕೊಳ್ಳಲು, ಮೂಗಿನ ಸಿಂಬಳ ಒರಿಸಿಕೊಳ್ಳಲು ಕರ್ಚೀಫು, ಎಲ್ಲದಕ್ಕೂ ಅಪ್ಪನ ಜೇಬಿನ ದುಡ್ಡೇ ನೆಚ್ಚಿಕೊಂಡಿರಬೇಕಾಗಿತ್ತು. ಸ್ವಾವಲಂಬನೆ ಯೆಂದರೆ ಏನು ಎನ್ನುವಷ್ಟರ ಮಟ್ಟಿಗೆ ಜಡವೆದ್ದು ಹೋಗಿದ್ದರು ಭಾರತ ಮಾತೆಯ ಒಡಲ ಪುತ್ರರು. ಇನ್ನು ಉದ್ಯೋಗಗಳೋ ಹಬ್ಬಕ್ಕೆ ಬರುವ ಅತಿಥಿ ಗಳಂತೆ ಇದ್ದವು ಈ ಸಾರಿಯ ನಾಗರ ಪಂಚಮಿಗೆ ಬಂದರೆ ಮುಂದೆ ದೀಪಾವಳಿಗೆ. ಜನಸಂಖ್ಯೆ ಮಾತ್ರ ಕ್ಷಣ ಕ್ಷಣಕ್ಕೂ ಸ್ಫೊಟಿಸುತ್ತಿತ್ತು. ಎಷ್ಟಾದರೂ ಮಳೆಯಿಲ್ಲದ ಬೆಳೆ ಅಲ್ಲವೇ ಅದಕ್ಕೇ ಜೋರಾಗೇ ಬೆಳೆ ತೆಗೀತಾಯಿದ್ದೀರಿ, ಮುಂದಾಲೋಚನೆ ಮಾತ್ರ ಶೂನ್ಯ. ಒಂದು ಕೆಲಸಕ್ಕೆ ಕರೆದರೆ ಚೆಲ್ಲಿದ ಸಕ್ಕರೆ ತುಣುಕಿಗೆ ಹಸಿದ ಇರುವೆಗಳು ಮುತ್ತಿಕೊಂಡ ಹಾಗೆ ಮುತ್ತಿಕೊಳ್ಳುತ್ತಿದ್ದಿರಿ, ಆದರೆ ಆಯ್ಕೆಗೆ ಮಾನದಂಡ ನಿಮಗೇ ಗೊತ್ತು. ನಿರುದ್ಯೋಗಿಯ ಬವಣೆಗಳನ್ನು ನೀವೂ ನೋಡಿದ್ದೀರಿ ನಿಮ್ಮ ಚಲನಚಿತ್ರಗಳೂ ಮನಮುಟ್ಟೂವಂತೆ ಇಂಚಿಂಚಾಗಿ ವಿವರಿಸಿವೆ ನಾನು ಮತ್ತೆ ಹೇಳಿ ನಿಮಗೆ ಅವಮಾನ ಮಾಡುವುದಿಲ್ಲ. ಯಾವತ್ತಾದರೂ ಒಂದು ದಿನ ಹೋಟೇಲಿಗೆ ಹೋಗಿ ಮಸಾಲೆ ದೋಸೆ ತಿಂದು ಬಂದರೆ ಎರಡು ದಿನ ಕೈ ತೊಳೆಯದೇ ರುಚಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದಿರಿ, ಇನ್ನೊಮ್ಮೆ ಹೋಗುವುದು ಅಪ್ಪನ ವಾರ್ಷಿಕ ಬೋನಸ್ ಬಂದಾಗ. ರೈತರ ಮಕ್ಕಳಿಗಂತೂ ಅದರ ರುಚಿ ಬ್ರಹ್ಮಾಂಡ ದಷ್ಟು ದೂರವಾಗಿತ್ತು.

ನನ್ನ ಆಗಮನದ ನಂತರ ನಿಮ್ಮ ಪರೀಸ್ಥಿತಿಯನ್ನು ಒಮ್ಮೆ ಮೆಲುಕುಹಾಕಿ: "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಇದು ನಮ್ಮ ದೇಶದ ಧ್ಯೇಯ ಇದನ್ನೇ ನಾನು ಬಂದ ಮೇಲೆ ಇಲ್ಲಿ ಬಿಟ್ಟೂ ಬಿಡದೇ ಸಾರುತ್ತಿದ್ದೇನೆ. ಜಾತಿವ್ಯವಸ್ಥೆಯೆಂಬ ನಿರಂತರ ಗಬ್ಬೆದ್ದಿರುವ ಕೆಸರಿನಲ್ಲಿ ಬಿದ್ದು ಹೊರಳಾಡಿ ನೀವು ಗಬ್ಬೆದ್ದು ಹೋಗಿದ್ದಿರಿ. ನಿಮಗೊಂದು ಸುವಾಸನೆಯ ಮಲ್ಲಿಗೆ ಪರಿಮಳ ಹೇಗಿರುತ್ತದೆ ಎಂದು ಪರಿಚಯಿಸಿದವನೇ ನಾನು. ಸಂಪ್ರದಾಯದ ಸೆರಗಿನಲ್ಲಿ ಸಿಕ್ಕು ಹೊಸತನಕ್ಕೆ ಹೊಂದಿಕೊಳ್ಳದೇ, ಹೊರಬರಲಾರದೇ ಉಸಿರುಗಟ್ಟಿದ್ದ ನಿಮ್ಮ ಮನಸ್ಸುಗಳಿಗೆ ಬದಲಾವಣೆಯ ಗಾಳಿ ಹರಿದುಬರುವಂತೆ ಮಾಡಿದ್ದೇ ನಾನು. ಜಿಡ್ಡುಗಟ್ಟಿದ್ದ ಅರ್ಥ ವ್ಯವಸ್ಥೆಗೆ ಹೊಸ ಆದಾಯದ ಮೂಲ ವನ್ನು ಹುಡುಕಿಕೊಟ್ಟು, ನಿಮ್ಮ ದೇಶಕ್ಕೆ ವಿಶ್ವದಲ್ಲಿ ಒಂದು ಗತ್ತು ತಂದು ಕೊಟ್ಟಿದ್ದೂ ನಾನೇ. ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ, ಜೀವನಕ್ಕೆ ಪ್ರತಿಭೆಯೊಂದೇ ಮಾನದಂಡ, ಹಣವಲ್ಲ ಎಂದುತೋರಿಸಿಕೊಟ್ಟವನೂ ನಾನೇ.. ಕೆಳ/ಮಧ್ಯಮವರ್ಗದ ಮನೆಗಳಲ್ಲಿ ಸರಿಯಾಗಿ ನೂರರ ನೋಟನ್ನೂ ನೋಡಿರಲಿಲ್ಲ ಅವರಿಗೆ ಡಾಲರ್ ನ ಮುಖ ತೋರಿಸಿದವನೂ ನಾನೇ. ಬಾನಂಗಳದಲ್ಲಿ ಲೋಹದ ಹಕ್ಕಿಯೊಂದು ಹಾರಾಡುತ್ತಿದ್ದರೆ ಗೋಣು ಉಳುಕುವವರೆಗೂ ಮೇಲೆ ನೋಡಿತ್ತಿದ್ದಿರಿ, ನೀವೂ ಹತ್ತುವ ಅವ್ಯಕ್ತ ಆಸೆಯನ್ನು ಮನದೊಳಗೆ ಹುದುಗಿಟ್ಟುಕೊಳ್ಳುತ್ತಿದ್ದಿರಿ, ನಿಮ್ಮ ಗಗನ ಕುಸುಮವಾಗಿದ್ದ ಆಸೆಯೊಂದು ಕೈಗೆಟುಕುವಂತೆ ಆಗಿದ್ದು ನನ್ನಿಂದಲೇ..

ಈಗ ನನ್ನ ಮೇಲಿರುವ ಆಪಾದನೆಗಳ ಬಗ್ಗೆ ನನ್ನ ಸ್ಪಷ್ಟೀಕರಣದತ್ತ ಗಮನ ಹರಿಸಿ:
ಅದೇನೋ ಪ್ರತಿಭಾ ಪಲಾಯನದ ಬಗ್ಗೆ ಹೆಳುತ್ತೀರ, ಮೊದಲಿಗೆ ನೀವೇನು ನಿರುಪದ್ರವಿಗಳು ಎಂದು ಬಿಟ್ಟಿದ್ದಿರೋ ಅವರನ್ನೇ ನಾನು ನನ್ನ ದೇಶಕ್ಕೆ ಕರೆದುಕೊಂಡು ಹೊಗಿದ್ದು. ನೀವು ಕೊರಡು ಎಂದು ತೆಗಳಿದವರನ್ನು ನಾವು ತೇಯ್ದು ಗಂಧವನ್ನಾಗಿ ಮಾಡಿದ್ದೇವೆ, ಆ ಮೂಲಕ ಜಗತ್ತಿಗೆ ಅವರ ಸೇವೆ ದೊರೆಯುವಂತೆ ಮಾಡಿದ್ದೇವೆ. ತದನಂತರ ನಮ್ಮ ಪ್ರತಿಭಾ ಪುರಸ್ಕಾರವನ್ನು ಮೆಚ್ಚಿ, ಹೆಚ್ಚು ಹೆಚ್ಚು ಪ್ರತಿಭೆಗಳು ಬರಲಾರಂಭಿಸಿದವು. ನಿಮ್ಮ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸದೇ ಈಗ ನಮ್ಮ ಮೇಲೆ ಗೂಬೆ ಕೂರಿಸುವುದು ಯಾವ ನ್ಯಾಯ ?. ಇನ್ನು ನಿಮ್ಮ ದೇಶದಲ್ಲಿ ನನ್ನ ಒಡಲ ಕುಡಿಗಳ ಬಗ್ಗೆ ಹೇಳಬೇಕೆಂದರೆ, ಅಲ್ಲ ಸ್ವಾಮಿ ನಾವೆನೂ ಪುಕ್ಕಟೆಯಾಗಿ ನಿಮ್ಮ ಪ್ರತಿಭೆಗಳನ್ನು ದುಡಿಸಿಕೊಳ್ಳುತ್ತಿಲ್ಲ, ಅವರವರ ಯೋಗ್ಯತೆಗೆ ತಕ್ಕ ಹಾಗೆ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ನಿಮ್ಮದೇ ವ್ಯವಹಾರ ಜ್ನಾನದಲ್ಲಿ ಹೇಳಬೇಕೆಂದರೆ ನಮ್ಮಲ್ಲಿ ಪ್ರತಿಭೆ ಕೊರತೆ ನಿಮ್ಮಿಂದ ಅದು ನೀಗಿದೆ, ನಿಮ್ಮಲ್ಲಿ ಹಣದ ಕೊರತೆ ಇದೆ ನಮ್ಮಿಂದ ಅದು ನೀಗಿದೆ. ನಿಮ್ಮ ದೇಶಕ್ಕೆ ನ್ಯಾಯವಾಗಿ ಎಷ್ಟು ಟ್ಯಾಕ್ಸ್ ಕಟ್ಟಬೇಕೋ ನಯಾಪೈಸೆ ಬಿಡದೇ ಚಾಚೂ ತಪ್ಪದೇ ಕಟ್ಟಿದ್ದೇವೆ. ಅದು ಸರಿಯಾಗಿ ಬಳಕೆ ಯಾಗದಿದ್ದರೆ ಅದು ನಿಮ್ಮ ಆಡಳಿತಾತ್ಮಕ ವ್ಯವಸ್ಥೆಯ ತಪ್ಪೇ ವಿನಹ ನಮ್ಮದಲ್ಲ.

ಇನ್ನು ಅದೇನೋ ನಮ್ಮನ್ನ ಬರಮಾಡಿಕೊಂಡು ತಾವೆನೋ ಕುಲಗೆಟ್ಟು ಹೋಗಿದ್ದೀರಂತೆ ...ನಿಮ್ಮ ಕುಲವೇಕೆ ಇಷ್ಟು ಕ(ಕೆ)ಡೆಯಾಯ್ತು ಕುಲಬಾಂಧವರೆ ?
ನಿಮ್ಮ ಕುಲದ ಗೌರವದ ಬಗ್ಗೆ ನಮಗೆ ಗೊತ್ತಿಲ್ಲವೇ ? ಶತ ಶತ ಮಾನಗಳಿಂದ ತುಳಿತಕ್ಕೊಳಗಾದವರನ್ನು ತುಳಿಯುತ್ತಲೇ ಬಂದವರು ನೀವು.
ಮಗು ಹುಟ್ಟಿದಾಗ ಪೂರ್ವಜರ ಕುಲ ಕಸುಬನ್ನು ಆಧರಿಸಿ ಬರುವ ಜಾತಿಯನ್ನೇ ಅವನ ಹಣೆ ಮೇಲೆ ಬರೆದು ಅದಕ್ಕೇ ಸೀಮಿತಗೊಳಿಸಿಬಿಟ್ಟಿದ್ದಿರಿ. ಹೊಲೆಯನ ಮಗ ಚಪ್ಪಲಿಯನ್ನೇ ಹೊಲಿಯಬೇಕು, ಮಾಲ್ಜಾತಿಯವರು ಮಾತ್ರ ಆಳಬೇಕು ಎಂದವರು ನೀವು. ನಾನು ಬಂದು ಮಾಡಿದ ಮೊದಲ ಕೆಲಸವೇ ಆ ಜಾತಿಯನ್ನು ಕಿತ್ತೊಗೆದಿದ್ದು ನನ್ನ ಹೆಸರಿನಲ್ಲಿ ದುಡಿಯುವ ಮಕ್ಕಳಲ್ಲಿ ಒಬ್ಬನನ್ನು ನಾನು ಕನಸಿನಲ್ಲೂ ನಿನ್ನ ಜಾತಿ ಯಾವುದೆಂದು ಕೇಳಿಲ್ಲ. ನೀವು ಮನೆಯಲ್ಲಿ ಅತ್ಯಂತ ಕ್ರೂರ ವಾಗಿ ಮಾತನಾಡಿದರೆ ಮನೆಯಲ್ಲಿ ಹಿರಿಯರು ಒಂದು ಮಾತು ಹೇಳುತ್ತಾರೆ, ಅದೇನೆಂದರೆ "ನಾಲಿಗೆ ಜಾತಿ(ಅಥವಾ ಕುಲ) ಹೇಳುತ್ತದೆ". ಬಾಯಿ ಬಿಗಿಹಿಡಿದು ಮಾತನಾಡು. ಅಂದರೆ ಕೆಟ್ಟದ್ದನ್ನು ಮಾತನಾಡುವವನು ಕೆಟ್ಟ ಕುಲದವನು ಎಂದಾಯ್ತು. ಜಾತಿ ಎನ್ನುವುದು ಕುಲ ಕಸುಬಿನಿಂದ ಬಂದಿದ್ದೇ ವಿನಹ, ದೇವರು ಮಾಡಿ ಕಲಿಸಿದ್ದಲ್ಲ. ನಿಮ್ಮ ಎಷ್ಟೋ ವಿದ್ಯಾವಂತ ಮನಸ್ಸುಗಳೆ ಇದನ್ನು ವಿರೋಧಿಸುತ್ತಿವೆ, ಆದರೆ ನಾನು ಯಾವುದಕ್ಕೂ ಸೊಪ್ಪು ಹಾಕಿಲ್ಲ,ನನದೊಂದೇ ಮಂತ್ರ.
ಅದು:
ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು,
ಸುಡುವಾಗ್ನಿಯೊಂದಿರುತಿರಲು ನಡುವೆ
ಕುಲಗೋತ್ರ ಎತ್ತಣದು ಸರ್ವಜ್ನ

ನನ್ನ ಮೇಲಿರುವ ಇನ್ನೊಂದು ದೊಡ್ಡ ಆಪಾದನೆ ನಾನು ಧರ್ಮಾವಶೇಷನೆಗೆ ಬಂದಿದ್ದೇನೆ ಎನ್ನುವುದು ಇದೊಂದು ಕಳಂಕ ಮಾತ್ರ ನನ್ನನ್ನು ತುಂಬಾ ಅಧೀರನ್ನನ್ನಾಗಿ ಮಾಡಿತು. ನಾನು ಬಂದ ಮೇಲೆ ನಿಮ್ಮ ದೇಶದ ಬೆಳವಣಿಗೆಗಳನ್ನೊಮ್ಮೆ ಗಮನಿಸಿ.
ಎರಡೂ ಮೂರು ಡಿಗ್ರೀ ತೆಗೆದುಕೊಂಡವರೂ ಒಂದು ಕೆಲಸಕ್ಕೆ ಅಲೆದೂ ಅಲೆದೂ ಮಂಡಿಯ ಚಿಪ್ಪುಗಳು ಸವೆದು ಹೋಗುತ್ತಿದ್ದವು, ನಾನು ಬಂದ ಮೇಲೆ ಅವರವರ ಪ್ರತಿಭೆಗನುಗುಣವಾಗಿ ಅವರಿದ್ದಲ್ಲಿಗೇ ಹೊಗಿ, ಕೆಲಸಕ್ಕೆ ಕರೆ ಕೊಟ್ಟು, ಕೈ ತುಂಬ ಸಂಬಳ ಕೊಡುವ ಭರವಸೆ ಕೊಟ್ಟು ಬಂದಿದ್ದೇನೆ.
ಒಂದು ಅಂದಾಜಿನ ಪ್ರಕಾರ ನನ್ನ ಕೆಲಸವನ್ನು ನೆಚ್ಚಿಕೊಂಡವರು ಸುಮಾರು ೧ ಕೋಟಿ ಜನ ಪ್ರತ್ಯಕ್ಷ ಫಲಾನುಭವಿಗಳು ಮತ್ತು ೧ ಕೋಟಿ ಪರೋಕ್ಷ ಫಲಾನುಭವಿಗಳಿದ್ದಾರೆ. ಹುಟ್ಟಿಸುವುದೊಂದೇ ಆಜನ್ಮ ಸಿದ್ದ ಹಕ್ಕು ಎಂದು ತಿಳಿದಿದ್ದಿರಿ ಅವರಿಗೆ ನನ್ನ ಕೈಲಾದ ಮಟ್ಟಿಗೆ ಸೂರು ಕೊಡುವದಕ್ಕೆ ನಾನು ಸಹಾಯ ಮಾಡಿದ್ದೇನೆ.
ಮಿಲಿಯನ್ ಗಟ್ಟಲೇ ವಾರ್ಷಿಕ ವರಮಾನ ಐ.ಟಿ ಯಿಂದಲೇ ನಿಮ್ಮ ದೇಶಕ್ಕೆ ಬರುತ್ತಿದೆ.

ನನ್ನ ಪ್ರಕಾರ ಮನುಷ್ಯನು ಬದುಕಬೇಕೆಂದರೆ ಹಸಿದಾಗ ಹೊಟ್ಟೆಗೆ ಅನ್ನ, ಬಾಯಾರಿದಾಗ ಕುಡಿಯಲು ನೀರು, ಬದುಕು ಸಾಕೆನಿಸಿದಾಗ ನಾಲ್ಕು ಸಾಂತ್ವನದ ನುಡಿಗಳು ಬೇಕು, ನೀವು ಬಹುವಾಗಿ ಮೆಚ್ಚುವ ಯಾವ ಧರ್ಮ ನೀವು ಹಸಿದಾಗ ನಿಮಗೆ ಅನ್ನ ನೀರು ಕೊಟ್ಟಿತು ?
ನಾನು ನಮ್ಮವರ ಕೆಲಸವನ್ನು ಪುರಸ್ಕರಿಸುತ್ತಿಲ್ಲ ಆದರೆ ನಿಮ್ಮವರ ಧರ್ಮದ ಬಗ್ಗೆ ಇರುವ ಬೇಜಾವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದ್ದೇನೆ.
ಹೆಜ್ಜೆ ಹೆಜ್ಜೆಗೂ ಮಠ ಮಾನ್ಯಗಳು, ಅಷ್ಟೊಂದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ ಯಾರಾದರೂ ಒಬ್ಬರು, ಒಬ್ಬ ಬಡ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಕೊಡುವ ಔದಾರ್ಯ ತೋರುತ್ತಿವೆಯೇ ? ಅಲ್ಲಿಯೂ ಸಹ ನಾವು ವಿದ್ಯೆಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬೇಕಾಗಿದೆ.
ನಿಮ್ಮ ಯಾವ ಮಠ, ಮಾನ್ಯ, ಮಂದಿರ, ಆಶ್ರಮ ಗಳು ಇಂದು ನಿಮ್ಮ ಧರ್ಮದ ಪ್ರಚಾರಕ್ಕಾಗಿ/ತಿಳುವಳಿಕೆಗಾಗಿ/ಉಳಿವಿಗಾಗಿ ಹೋರಾಡುತ್ತಿವೆ
ಒಂದು ಧರ್ಮದ ಮೇಲಿನ ಅನಾದರವೇ ಇನ್ನೊಂದು ಧರ್ಮದೆ ಬಗ್ಗೆ ಆಸಕ್ತಿ ಹುಟ್ಟಿಸುತ್ತದೆ.ಅವರು ನಿಮ್ಮ ಧರ್ಮದ ಮೇಲೆ ಆಸಕ್ತಿ ಕಳೆದುಕೊಳ್ಳುವ ಹಾಗೆ ನೀವು ನಡೆದುಕೊಂದಿದ್ದೀರಿ ಎಂದಾಯಿತಲ್ಲವೇ ? ಕಾಲಾತೀತ ವ್ಯಕ್ತಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೇ ತಮ್ಮ ಕೊನೆಯ ದಿನಗಳಲ್ಲಿ ಬೇರೆಡೆಗೆ ಸೆಳೆತಕ್ಕೊಳಗಾದರು ಎಂದರೆ ಏನು ಕಾರಣ ? ಆಗೆಲ್ಲಿ ನನ್ನ ಸೊಲ್ಲಿತ್ತು ?
ಬೇಡವೆನಿಸಿದರೂ ನಿಮಗೊಂದು ನಗ್ನ ಸತ್ಯ ಹೇಳುತ್ತೇನೆ ತುಳಿತಕ್ಕೊಳಗಾದವರನ್ನು, ದೀನರು, ದಲಿತರನ್ನು ನೀವು ಎಂದಾದರೂ ಸಮಾನ ದೃಷ್ಟಿಯಿಂದ ನೊಡಿದ್ದರೆ ಈ ಪ್ರಸಂಗವೇ ಉದಯಿಸುತ್ತಿರಲಿಲ್ಲ, ಎಲ್ಲಿಯವರೆಗೂ ನೀವು ಅವರನ್ನು ಸಮಾನರಂತೆ ಕಾಣುವುದಿಲ್ಲವೋ ಅಲ್ಲಿಯವರೆಗೂ ನಿಮಗೆ ಈ ಪಿಡುಗು ತಪ್ಪಿದ್ದಲ್ಲ, ಮತ್ತು ಇದಕ್ಕೆ ನಾನೇ ಬರಬೇಕೇಂದೇನಿಲ್ಲ.

ಪ್ರತಿಯೊಂದು ವ್ಯವಸ್ಥೆಗೂ ತನ್ನದೇ ಆದ ಒಳ್ಳೆಯ/ಕೆಟ್ಟ ಮಗ್ಗಲುಗಳಿರುತ್ತವೆ, ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿರಲು ಪ್ರಯತ್ನಿಸಬೇಕು. ಒಂದು ಆನೆ ನಮಗೆ ದಕ್ಕುತ್ತದೆ ಎನ್ನುವುದಾದರೆ, ದಾರಿಯಲ್ಲಿ ಬರುವಾಗ ಒಂದು ಇರುವೆ ಸತ್ತರೆ ನಾವದನ್ನು ಸಹಿಸಿಕೊಳ್ಳಬೇಕು. ಇಲ್ಲವಾದರೆ ನಮಗೆ ಆನೆಯ ಕೆಲಸದ ಉಪಯೋಗ ಸಿಗುವುದಿಲ್ಲ. ಆನೆ ಹೊರುವ ಭಾರವೇ ಬೇರೆ ಇರುವೆ ಹೊರುವ ಭಾರವೇ ಬೇರೆ.

ಮಾತು ಮಾತಿಗೆ ಅಷ್ಟೊಂದು ಆಳವಾದ ಬೇರುಗಳಿನ್ನೊಟ್ಟುಕೊಂಡಿದ್ದೇವೆ ಎನ್ನುವವರು, ನನ್ನ ಒಂದು ಆಗಮನಕ್ಕೆ ಇಷ್ಟೊಂದು ರೋದಿಸುತ್ತಿರುವುದು ಹಸ್ಯಾಸ್ಪದವೆನಿಸುತ್ತಿದೆ.ಹೊಸತನಕ್ಕೆ ಹೊಂದಿಕೊಳ್ಳದಿರುವ ಕುಬ್ಜ ಮನಸುಗಳು ಮಾಡುವ ಹೇಯ ಆಪಾದನೆಗಳಿವು.

ಮತ್ತು ನನ್ನ ಸದ್ಯದ ಹೆಸರು: "ಸಾಫ್ಟ್ ವೇರ್ ಇಂಜಿನಿಯರ್"
ನನ್ನ ದೇಶ: ಅಮೇರಿಕ

ಮಾನಸವಾಣಿಯಿಂದ,
-ಚಂದ್ರು







Monday, August 3, 2009

ಧರ್ಮಾವಲೋಕನ

ಧರ್ಮಾವಲೋಕನ
ಧರ್ಮ ಎಂದರೇನು ?
ಮನುಷ್ಯನನ್ನು ಒಂದು ರಚನಾತ್ಮಕವಾದ ಕಟ್ಟಳೆಗೊಳಪಡಿಸಿ ಒಂದು ಸ್ವಾಸ್ಥ್ಯ, ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ನಡೆಸುವುದು, ಮತ್ತು ಅದಕ್ಕೆಂದೇ ನಾವು ಕೆಲವೊಂದು ರೀತಿ, ನೀತಿ ಗಳೆಂಬ ಲಕ್ಷ್ಮಣ ರೇಖೆ ಗಳನ್ನು ಹಾಕಿಕೊಳ್ಳುವುದು. ಆದರೆ ಇಂದಿನ ಯುವ ಜನಾಂಗ ಸ್ವಾತಂತ್ರ್ಯದ ಹೆಸರಿನಲ್ಲಿ ಆ ಕಟ್ಟಳೆಗಳನ್ನು ಗೌಣವಾಗಿಸಿದೆ, ದುರಂತವೆಂದರೆ ನಮ್ಮೆಲ್ಲರನ್ನು ಕಾಪಾಡಬೇಕಿದ್ದ ಧರ್ಮವೇ ತನ್ನ ಅಸ್ತಿತ್ವಕ್ಕಾಗಿ ಪ್ರಯತ್ನಿಸುತ್ತಿದೆ, ಹೆಣಗಾಡುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ ಧರ್ಮದ ಸ್ಥಿತಿ, ನೀರ ಸುಳಿಯಲ್ಲಿ ಸಿಕ್ಕು ಜೀವನ್ಮರಣದ ನಡುವೆ ಹೋರಾಡಿ, ವ್ಯರ್ಥವಾಗಿ ಮರಣಶಯ್ಯೆಯನ್ನು ನೆನೆದು ರೋದಿಸುತ್ತಾ ಚಡಪಡಿಸುತ್ತಿರುವ ಮನುಷ್ಯನ ಅವಸ್ಥೆಯಂತಾಗಿವೆ.

ನಮ್ಮ ಸನಾತನ ಧರ್ಮದ ಬಗ್ಗೆ ನಾವು ಕಿಂಚಿತ್ತಾದರೂ ಮುಂದಿನ ಪೀಳಿಗೆಗೆ ತಿಳಿಯಪಡಿಸಿದ್ದೇ ಆದರೆ, ಧರ್ಮಕ್ಕೆ ಇಂದು ಎದುರಾಗಿರುವ ಪರೀಸ್ಥಿತಿಯನ್ನು ಎದುರಿಸಬಹುದಿತ್ತು.ಧರ್ಮದ ಮೇಲಾಗುತ್ತಿರುವ ನಿರಂತರ ಅತ್ಯಾಚಾರವನ್ನು ತಡೆಯಬಹುದಿತ್ತು.

ಈ ಹೊತ್ತಿನಲ್ಲಿ ನಿಮಗೊಂದು ಪ್ರಾತ್ಯಕ್ಷಿಕೆ ಕೊಡಬೆಕೆಂದೆನಿಸುತ್ತಿದೆ :
ಈ ಕೆಳಗಿನ ರೀತಿಯ ಪಾಠಗಳನ್ನು ನಮ್ಮ ಘನ ಸರಕಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇಟ್ಟಿದೆ

ಡೆವಿಡ್ ಸ್ಟ್ಯಾನ್ಲಿ ಪೇಟೆಗೆ ಹೊಗುವಾಗ ದಾರಿಯಲ್ಲಿ ಅವನಿಗೆ ಪೀಟರ್ ಕ್ರಿಸ್ಟೊಫರ್ ಎಂಬ ತನ್ನ ಹಳೆಯ ಕಾಲದ ಮಿತ್ರ ಸಿಗುತ್ತಾನೆ... ಹೀಗೆ ಕಥೆ ಮುಂದುವರಿಯುತ್ತದೆ
ಕೊನೆಗೆ ಒಂದು ಪ್ರಶ್ನೆ : ಡೆವಿಡ್ ಪೇಟೆಗೆ ಹೋಗುವಾಗ ದಾರಿಯಲ್ಲಿ ಯಾರು ಸಿಗುತ್ತಾರೆ ?

ಇದೇ ಕಥೆಯನ್ನು :
ಲಕ್ಷ್ಮಣ ಪೇಟೆಗೆ ಹೊಗುವಾಗ ದಾರಿಯಲ್ಲಿ ಅವನಿಗೆ ಕೃಷ್ಣ ಎಂಬ ತನ್ನ ಹಳೆಯ ಕಾಲದ ಮಿತ್ರ ಸಿಗುತ್ತಾನೆ.. ಹೀಗೆ ಮುಂದುವರಿಸಿ
ಪ್ರಶ್ನೆ : ಲಕ್ಷ್ಮಣ ಹೋಗುವಾಗ ದಾರಿಯಲ್ಲಿ ಯಾರು ಸಿಗುತ್ತಾರೆ ?

ಎಂದು ಕೇಳಿದ್ದರೆ ಏನಾಗುತ್ತಿತ್ತು ? ಮಗುವಿನ ಕಲಿಕೆಗೂ ಇದು ಹತ್ತಿರವಿರುತ್ತಿತ್ತು. ಮೇಲ್ನೊಟಕ್ಕೆ ನಿಮಗೆ ಇದರಲ್ಲೇನಿದೆ ? ಎಂದು ಅನ್ನಿಸಬಹುದು ಆದರೆ ಎಲ್ಲ ಅಡಗಿರುವುದು ಈ ಹಂತದಿಂದಲೇ, ಇದೂ ಕೂಡ ಧರ್ಮದ ಮೇಲಿನ ಅತ್ಯಾಚರವೆಂಬ ವಿರಾಟ್ ರೂಪದ ಒಡಲ ಕುಡಿ, ವ್ಯವಸ್ಥಿತ ಸಂಚು, ಹೇಗೆಂದರೆ:

ಒಂದು ಮಗು ತನ್ನ ಪ್ರಾಥಮಿಕ ಹಂತವನ್ನು ಮೇಲಿನಂತೆ ಪೂರ್ಣಗೊಳಿಸುತ್ತದೆ, ಈ ಘಟ್ಟದಲ್ಲಿ ಮಗುವಿನ ಮನಸ್ಸು ಬಿಳಿ ಹಾಳೆಯಿದ್ದ ಹಾಗೆ ಅದರಲ್ಲಿ ನಾವು ಏನು ಬರೆಯುತ್ತೇವೆಯೋ ಅದೇ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮಾಧ್ಯಮಿಕ ಹಂತದ ವೇಳೆಗೆ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ,ಕೆಲಸದ ಒತ್ತಡ ದಲ್ಲಿ ಮಗುವಿನ ಓದಿಗೆ ಸಹಾಯ ಮಾಡಲು ಸಮಯ ಸಿಗುವುದಿಲ್ಲ ಎಂದು ಹುಸಿ ನೆಪ ಹೇಳಿ ಯಾವುದಾದರೂ ಬೋರ್ಡಿಂಗ್ ಶಾಲೆಗೆ ಸೇರಿಸುತ್ತೇವೆ, ಇನ್ನು ಕಾಲೇಜ್ ಮುಗಿದ ಮೇಲೆ ಜಾಗತಿಕರಣದ ಕಬಂಧ ಬಾಹುಗಳು ಅವನನ್ನು ಸೆಳೆದು ತನ್ನ ಕಪಿಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದು ಕೊಳ್ಳುತ್ತದೆ, ಮೆಟ್ರೊಪೊಲಿಟನ್ ಸಿಟಿ ಗಳಲ್ಲಿ ಜೀವನ ಪ್ರಾರಂಭ. ಇವನೇ ಮುಂದೆ ಧರ್ಮನಿರಪೇಕ್ಷರಿಗಳು ಎಂಬ ಮಹಾಸಂಸ್ಥಾನದ ಅಧಿಪತಿಯಾಗುತ್ತಾನೆ. ಸಲಿಂಗ ರತಿ ಯಂತಹ "ಸಂಕಟ" ಹರಿಯುವ ವ್ಯಾಧಿಗಳನ್ನು, ವಿಕೃತಿಗಳನ್ನು "ಸಂತೋಷ" ಕೊಡುವ ಆಯ್ಕೆಗಳೆಂದು ವಾದಿಸುತ್ತಾನೆ. ಸ್ವ್ಯಾತಂತ್ರಕ್ಕೂ ಸ್ವೆಚ್ಚೆಗೂ ವ್ಯತ್ಯಾಸ ಗೊತ್ತಿರದೇ ಮನುಷ್ಯ ಮೃಗದಂತಾಗುತ್ತಾನೆ.


ಇವೆಲ್ಲ ಅನಾರೋಗ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಶುರುವಾಗುತ್ತವೆ ಎಂದಾಯಿತು ಹಾಗಾದರೆ ಶಿಕ್ಷಣ ಎಂದರೇನು ?
ಜೀವನದಲ್ಲಿ ಅಂಧಕಾರವನ್ನು ಹೊಡೆದೋಡಿಸಿ ಜಾಗೃತಿಯ ಬೆಳಕನ್ನು ಹೊತ್ತಿಸುವುದು. ಅಂದರೆ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದು(ತಮಸೋಮ ಜ್ಯೋತಿರ್ಗಮಯ). ಸಮಾಜಕ್ಕೆ ಜಾವಾಬ್ದಾರಿಯುತ ವ್ಯಕ್ತಿಯನ್ನು ಕೊಡುವ ಜಾವಾಬ್ದಾರಿಯುತ ಕೆಲಸ. ಇಂತಹ ಅಮೃತವುಣಿಸುವ ಕೆಲಸವೇ ಇಂದು ನಮ್ಮನ್ನಾಳುವ ಕೋಡಗಗಳ ಒಣ ಪಿತೂರಿಗಳಲ್ಲಿ ಸಿಕ್ಕಿ ಸಮಾಜಮುಖಿಯಾಗಿರದೇ ಬರೀ ಡಿಗ್ರೀ ತೆಗೆದುಕೊಳ್ಳುವ ಒಂದು ಅರ್ಥಹೀನ ವ್ಯವಸ್ಥೆಯಾಗಿ ಗಬ್ಬೆದ್ದು ಹೋಗಿಬಿಟ್ಟಿದೆ. ಪುಸ್ತಕದಲ್ಲಿ ಒಂದು ದೇವರ/ವ್ಯಕ್ತಿಯ ಹೆಸರನ್ನು ಇಟ್ಟರೂ ಅನುಮಾನದಿಂದ ನೋಡಬೇಕಾಗಿದೆ. ಒಂದೊಂದು ಸರಕಾರ ಬಂದಾಗಲೂ ಪಠ್ಯ ಪುಸ್ತಕ ಪರಿಷ್ಕರಣೆಯಾಗುತ್ತಿರುತ್ತದೆ, ನೈಜ ಉದ್ದೇಶವೇ ಮರೆಯಾಗಿ ಒಳಸಂಚು ಆವರಿಸಿಕೊಂಡಿದೆ. ಶಿಸ್ತಿನ ಹೆಸರಿನಲ್ಲಿ ತಲೆಗೆ ಹೂಗಳನ್ನೂ, ಕೈಗೆ ಬಳೆಗಳನ್ನೂ, ಹಣೆಗೆ ಕುಂಕುಮವನ್ನೂ ಕೆಲವೊಂದು "ಶಾಂತಿಪ್ರಿಯ" ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ನಿಷೇಧಗೊಂಡಿವೆ. ಎಂದಿನಂತೆ ಸರಕಾರದ ನಡೆ ಮಾತ್ರ ಜಾಣ ಕುರುಡು, ಸೊಲ್ಲೆತ್ತಿದರೆ ನೀವು ಕೋಮುವಾದಿ. ಇಂದಿನ ಶಿಕ್ಷಣದಲ್ಲಿ ನಮ್ಮ ಶಾಲಾ ಜೀವನದ ಇಷ್ಟು ದಿನಗಳಿಂದ ಹಿಡಿದು ಇಂದಿನವರೆಗೆ ಯಾರಾದರೂ ಶಿಕ್ಷಣದ ಉದ್ದೆಶದ ಬಗ್ಗೆ ಯೋಚನೆ ಮಾಡಿದ್ದೆವೆಯೇ? ಇಲ್ಲ ಯಾಕೆಂದರೆ ಅದು ನಮ್ಮನ್ನು ಯೊಚನೆಗೊಳಪಡಿಸುವಷ್ಟು ಶಕ್ತಿಶಾಲಿ ಯಾಗಿ ಇರಲೇ ಇಲ್ಲ.

ಒಬ್ಬೊಬ್ಬ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಒಬ್ಬೊಬ್ಬ ದೇವರನ್ನು/ವ್ಯಕ್ತಿಯನ್ನು ರತ್ನಗಂಬಳಿ ಹಾಸಿ ಬರಮಾಡಿಕೊಳ್ಳುತ್ತವೆ, ಮತ್ತು ಆಯಾ ದೇವರ (ಧರ್ಮದ) ಪ್ರತಿಷ್ಠಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ ಯಾಕೆಂದರೆ ಹಾಗೆ ಮಾಡುವುದರಿಂದ ಅವರಿಗೆ ಹೇರಳ ವಾದ "ಪ್ರಸಾದ" ಪ್ರಾಪ್ತಿಯಾಗುತ್ತಿರುತ್ತದೆ. ಈ ಪ್ರಸಾದದ ಫಲವೇ ಪಠ್ಯ ಪುಸ್ತಕಗಳ ತಿರುಚುವಿಕೆ. ಅವುಗಳ ಫಲವಾಗಿಯೇ ದೆಶಭಕ್ತ ವೀರ್ ಸಾವರ್ಕರ್ ಕೆಲವರಿಗೆ ಭಯೋತ್ಪಾದಕನಾದ, ಸುಭಾಷ್ ಚಂದ್ರ ಬೋಸ್ ಹೇಡಿ ಎಂದು "ಎಡ"ತಳ್ಳಲ್ಪಟ್ಟರೆ, ಟಿಪ್ಪು ದೇಶಭಕ್ತನಲ್ಲ ಎಂದು ಕೆಲವರಿಂದ "ಬಲ"ತಳ್ಳಲ್ಪಟ್ಟ. ಎಸ್. ಎಲ್. ಬೈರಪ್ಪ ರಂತಹ ವಸ್ತುನಿಷ್ಠ ಕಾದಂಬರಿಕಾರರು ಕೋಮುವಾದಿಗಳಂತೆ ಕಂಡು ಅವಕೃಪೆಗೊಳಗಾದರು, ಮುಂದಿನ ದಿನಗಳಲ್ಲಿ ಇದು ವಿಪರೀತಕ್ಕೆ ಹೋದರೂ ಅಚ್ಚರಿಪಡಬೇಕಿಲ್ಲ.

ಹಾಗಾದರೆ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿರುವ ಆ ದೆವರು ಎಲ್ಲಿದ್ದಾನೆ ??
ಮಂದಿರ ? ಮಸೀದಿ ? ಮಠ ? ಚರ್ಚ್ ? ತೀರ್ಥಕ್ಷೆತ್ರ ? ಬೆಟ್ಟ ? ಬಯಲು ? ಎಲ್ಲೂ ಇಲ್ಲ. ಹೋಗಿ ನೋಡಿ ಬಡವರ ಗುಡಿಸಲಲ್ಲಿದ್ದಾನೆ, ದೀನರ ದಲಿತರ ಹೃದಯದಲ್ಲಿದಾನೆ, ದುಃಖಿತರ ಆರ್ತಧ್ವನಿಯಲ್ಲಿದ್ದಾನೆ, ಬೇರೆಯವರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ/ಕನಿಕರಪಡುವವರ ಕರುಳಲ್ಲಿದ್ದಾನೆ. ಇಂದಿನ ಯಾವ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಪ್ರಾಮಾಣಿಕ ಕಳಕಳಿಯಿಂದ ಹೇಳಿಕೊಟ್ಟಿದ್ದಾರೆ ? ಎಲ್ಲೂ ಇಲ್ಲ. ಮಾನವನ ಬದುಕಿನ ಬಹುದೊಡ್ಡ ದುರಂತವೇನು ಗೊತ್ತೆ ? ಅವನು ಚಂದ್ರಲೋಕಕ್ಕೆ ಹೋಗಿಬಂದಿದ್ದಾನೆ, ಆದರೆ ಅಕ್ಕ-ಪಕ್ಕದ ಮನೆಯವರನ್ನು ಅರಿಯಲು ಮರೆತಿದ್ದಾನೆ, ನೆರೆ ಹೊರೆಯವರ ಬದುಕಿಗೆ ಸ್ಪಂದಿಸುವುದನ್ನೇ ಮರೆತಿದ್ದಾನೆ ..

ಸರಿರಾತ್ರಿಯವರೆಗೂ ಪಬ್ ಗಳಿಗೆ ಅನುಮತಿ ಕೊಡಿ ಎಂದೂ, ಸಲಿಂಗ ರತಿಯನ್ನು ಕಾನೂನಿಕರಣ ಗೊಳಿಸಿ ಎಂದೂ ಘನಾಂದಾರಿ ಹೋರಾಟ ಮಾಡುತ್ತಿರುವ ಮುಕುಟಮಣಿಗಳನ್ನು ಬೇಕಾದರೆ ಹೋಗಿಕೇಳಿ, ಅವರಲ್ಲಿ ಒಬ್ಬ ಬಾಜೀರಾಯ(ಯ್ತಿ) ನಾದರೂ ತುಂಬಿದ ಮನೆಯಲ್ಲಿ ಬೆಳೆದು ಬಂದಿದ್ದಾರೆಯೇ ಎಂದು,ಅವರಪ್ಪನಾಣೆಗೂ ಯಾರೂ ಇರುವುದಿಲ್ಲ, ಎಲ್ಲರೂ ಸಮಯ ಕಳೆಯಲಿಕ್ಕೆ ತಮ್ಮ ನಾಯಿಗಳು, ಟೆಡ್ಡಿ ಬೆರ್ ಗಳನ್ನು ನೆಚ್ಚಿಕೊಂಡವರೆ. ಅದಕ್ಕೇ ಅವರಿಗೆ "ಸಮಯ" ಕಳೆಯಲಿಕ್ಕೆ ಯಾರಾದರೇನು ಎಂಬ ವಿಕೃತ ವಿಚಾರ ಎಲ್ಲಿಂದಲೋ (ತಲೆಯಿಂದಂತೂ ಬರಲು ಸಾಧ್ಯವಿಲ್ಲ ಬಿಡಿ) ಬಂದು ಬಿಟ್ಟಿದೆ. ಊಹುಂ .. ಅವರಿಗೆ ಅನುಕರಣೆಗೆ ಪಾಶ್ಚಾತ್ಯರೇ ಆಗಬೇಕು, ನಮಗೆ ದೇವರ ವಿಗ್ರಹ ತೊಳೆದ ನೀರು ಮತ್ತು ಕಲ್ಪವೃಕ್ಷ ತೆಂಗಿನ ನೀರು ತೀರ್ಥವಾದರೆ, ಅವರಿಗೆ ಪಾಶ್ಚ್ಯಾತ್ಯರ ಮೂತ್ರವೇ ತೀರ್ಥವೆನ್ನುವಷ್ಟರ ಮಟ್ಟಿಗೆ ಅವರು ಪಾಶ್ಚ್ಯಾತ್ಯರನ್ನು ಅನುಕರಿಸುತ್ತಾರೆ.ಎಲ್ಲರೂ ಧರ್ಮ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದೇ ತಿಳಿದಿದ್ದಾರೆ, ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಧರ್ಮವೆಂಬ ವಿಶಾಲ ಆಲದ ಮರದ ಬೇರುಗಳನ್ನು ನಾವೆಷ್ಟು ಸಡಿಲಿಸುತ್ತಿದ್ದೇವೆ, ತನ್ಮೂಲಕ ಎಂತಹ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ ಎಂದು ವಿಚಾರಿಸುವ ವ್ಯವಧಾನ ಮಾತ್ರ ಯಾರಿಗೂ ಇಲ್ಲ(ನೆನಪಿರಲಿ: ನೀವು ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಿಮ್ಮನ್ನು ರಕ್ಷಿಸುತ್ತದೆ).

ಜನ್ಮದಿನದಂದು, ಗೆಳೆಯರ ದಿನದಂದು ಹಾಗು ಮುಂತಾದ ದಿನಗಳಂದು ಹಾರೈಕೆಗೆಂದು ಪುಟಗಟ್ಟಲೇ ಮೆಸ್ಸೆಜ್ ಗಳನ್ನೂ, ಆರ್ಕುಟ್ ನಲ್ಲಿ ಸ್ಕ್ರ್ಯಾಪ್ ಗಳನ್ನೂ, ಮೇಲ್ ಗಳನ್ನೂ ಕಳಿಸುವ ನಾವು, ಎದುರಿಗೆ ಸಿಕ್ಕಾಗ ಒಂದು ಪ್ರೀತಿ ತುಂಬಿದ ನಗುವನ್ನೂ, ವಾತ್ಸಲ್ಯದ ಮಾತನ್ನೂ ಆಡದೇ ಜನ್ಮಾಂತರದ ಶತ್ರುಗಳಿದ್ದಂತೆ ಇರುತ್ತೇವೆ. ಅಷ್ಟರಮಟ್ಟಿಗೆ ಯಾಂತ್ರಿಕವಾಗಿ ಬಿಟ್ಟಿದ್ದೇವೆ ನಾವು. ಊಟದ ಹೊತ್ತಿನಲ್ಲಿ ಪರಸ್ಥಳದ ಅನಾಮಿಕನೊಬ್ಬ ಎದುರಾದರೆ ಕುಶಲ ಸಮಾಚಾರ ವಿಚಾರಿಸಿ ಕೈಲಿದ್ದ ತಟ್ಟೆಯನ್ನು ಅತಿಥಿ ಗಳಿಗೆ ಸತ್ಕರಿಸಿ ಉಪಚರಿಸುವ ಸಂಸ್ಕೃತಿ ನಮ್ಮದು. ಅವರ ಸಂತೃಪ್ತಿಯಲ್ಲೇ ನಮ್ಮ ಸಮಾಧಾನ. ನಮ್ಮ ಹಿರಿಯರ ಈ ಆಚರಣೆಗಳೇ ಅವರನ್ನು ಅಷ್ಟೊಂದು ಪ್ರಭುದ್ಧರನ್ನಾಗಿ ಮಾಡಿರುವುದು ಮತ್ತು ಆರೋಗ್ಯಕರ ವಿಚಾರಗಳಿಂದಲೇ ಅಷ್ಟೊಂದು ದೀರ್ಘಾಯುಷಿ ಗಳಾಗಿರುವುದು.

ಹಿಡಿಮುಷ್ಠಿಯಷ್ಟಿರುವ ಹೃದಯದಲ್ಲಿ ಸಾಸಿವೆಯಷ್ಟಾದರೂ ನಮಗೆ ನಮ್ಮ ಸಂಸ್ಕ್ರುತಿಯ ಬಗ್ಗೆ ಗೌರವ ವಿರಬಾರದೆ ?? ಭವ್ಯ ಭಾರತದಲ್ಲಿಯ ಭವಿಷ್ಯದ ಪೀಳಿಗೆಯನ್ನು ನೆನೆದರೆ ನಿಜಕ್ಕೂ ಕಣ್ಣು ಕತ್ತಲು ಗುಡಿಸದಂತಾಗುತ್ತದೆ. ಪರೀಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯ ಅದೇ ಪಠ್ಯ ಪುಸ್ತಕದಲ್ಲಿ ಒಂದು ಪ್ರಶ್ನೆ ಯಿರುತ್ತದೆ,
ಭಾರತದಲ್ಲಿ ಇತ್ತೀಚೆಗೆ ನಾಮಾವಶೇಶ ಗೊಂಡ ಧರ್ಮ ಯಾವುದು ??

ಉತ್ತರಿಸಲು ನಾವಿರುವುದಿಲ್ಲ ನಿಜ, ಆದರೆ ಆ ಪ್ರಶ್ನೆಗೆ ಕಾರಣೀಭೂತರು ಮಾತ್ರ ನಾವೆ...

ನಾನು ಉಲ್ಲೇಖಿಸಿರುವ ಕೆಲವೊಂದು ಮಾತುಗಳು ನಿಮಗೆ ಅಪ್ರಭುದ್ಧವೆಂದೂ, ಸಿನಿಕತನವೆಂದೂ ಗೋಚರಿಸಬಹುದು, ಗೋಚರಿಸುತ್ತವೆ ಕೂಡ ಯಾಕೆಂದರೆ ನಮ್ಮದೂ ಯುವ-ಪೀಳಿಗೆಯೇ ಅಲ್ಲವೇ ?? ವರ್ತಮಾನದ ಹಂಗಿನಲ್ಲಿ ಮಾತ್ರ ಹಾರಬಯಸುವ ಹಕ್ಕಿಗಳು ನಾವು...ಭವಿಷ್ಯವನ್ನು ಪಾಪಪ್ರಜ್ನೆಗೆ ಮೀಸಲಿಡೋಣ ಬಿಡಿ.

ಮಾನಸವಾಣಿಯಿಂದ
-ಚಂದ್ರು
csbyadgi@gmail.com

"ಪಂಚಮ"ವೇದಿನಿ

          ಬೆಳ್ಳಕ್ಕಿ ಕೂಡ ಬೆರಗಾಗಿ ನೋಡುವ ಬೆಳ್ಳನೆಯ ಚೆಲುವೆಯೊಬ್ಬಳು, ಸರಿರಾತ್ರಿಯಲಿ ತಿಳಿಮೋಡದೊಳಗಿನ ಮಿನುಗು ನಕ್ಷತ್ರದಾ "ನಗು"ವ ಕಣ್ತುಂಬಿಸಿ, ಸವಿ"ಮಾತಿ"ನಾ ಲಹರಿಯನು ಮನದೊಳಗೆ ನುಡಿಸಿ, ಲಘು "ಸ್ಪರ್ಶ"ದಾ ಮೋಡಿಯಲಿ ನವಿರೇಳಿಸಿ, ಹೂ "ಮುತ್ತಿ"ನಾ ಜೋಮಿನಲಿ ತೇಲಿಸಿ, ಬಾಣದ "ನೋಟ"ವನು ಎದೆಗೆರಚಿ, ಯುವಕರಿಗೆಲ್ಲ ಕಿಡಿ ಹಚ್ಚಿ ಹೊತ್ತಿಸುವ ಪಂಚಮೃತಗಳನ್ನು ನಾ ಕಂಡಂತೆ ವರ್ಣಿಸಿದಾಗ...       

       "ಪಂಚಮ"ವೇದಿನಿ      
ಒಂದು ನಗು:
            ಬೆಳದಿಂಗಳೇ ಬಾಡಿ ಕಳೆಗುಂದಿದಂತಾಯ್ತು
            ಕ್ಷೀರಸಾಗರವದು ಧುಮ್ಮಿಕ್ಕಿ ಹರಿದಂತಾಯ್ತು
            ಮಲ್ಲಿಗೆಯ ರಾಶಿಯನು ಧರೆಗೆರಚಿದಂತಾಯ್ತು
            ನಿನಗಿಂತ ಸುಂದರಿ, ನಿನ್ನ ನಗುಮುಖದ ಕಿನ್ನರಿ
            ನನಗಂತೂ ನೋಟವದು ಚಿರನೂತನವೇ ಸರಿ   
            ಹೊರಬಂದು ನಕ್ಕೀಯೆ ಇರುಳು ಹೊತ್ತಿನಲಿ  
            ನೇಸರನೆದ್ದುಬಿಟ್ಟಾನು ಬೆಳಗಾಯಿತೆಂಬ ಭ್ರಮೆಯಲಿ 

ಒಂದು ಮಾತು:
            ಸಿಹಿ ಸಂಜೆಯಲಿ ಇಂಪಾದ ಗಾನಮ್ರುತ ಪಠಣ
            ಶಾಂತ ಸರೋವರದಲಿ ತಂಪಾದ ಪಯಣ   
            ಹಿತವಾದ ಮನಸ್ಸಿಗೆ ಸಿಹಿಯಾದ ಸುಕ್ಷಣ 
            ಮುಂಜಾನೆ ಮಂಜಲಿ ಹಸಿರಾದ ಹಾಸಲಿ 
            ಚಂಚಲಿಸಿ ನರ್ತಿಸಿತು ಮನಸೆಂಬ ನವಿಲು       
            ಸುಖ ನುಡಿವ ಶಕುನದ ಹಕ್ಕಿ, ಇಣುಕಾಡಿ 
            ಆಲಿಸಿತು ನಿನ್ನೀ ಮಧುರ ಕಂಠದ ಉಯಿಲು   

ಒಂದು ಸ್ಪರ್ಶ:
            ಸಂಜೀವಿನಿ ಮಾತ್ರೆ ಬಳಲಿದಾ ಭಾವನೆಗಳಿಗೆ    
            ಚೈತನ್ಯದಾ ಚಿಲುಮೆ ಸೊರಗಿದಾ ಮನಸಿಗೆ 
            ಮಾತೆಲ್ಲ ಮರೆಯಾಯ್ತು, ಮನಸೆಲ್ಲ ಸೆರೆಯಾಯ್ತು
            ನೀಳುಸಿರು ಒಳಹೊಗಿ ನರವೆಲ್ಲಾ ಬಿಗಿಯಾಯ್ತು 
            ಆಂತರ್ಯದಾಳದಲಿ ಸಂಭ್ರಮದ ಹಕ್ಕಿ ಗರಿಬಿಚ್ಚಿ ಹರ್ಷಿಸಿತು   
            ಭಾವನೆಗಳ ಮಹಾಪೂರ ಕಟ್ಟೆಯೊಡೆದು ಹೊರಚೆಲ್ಲಿತು 

ಒಂದು ಮುತ್ತು: 
            ರೋಮಾಂಚನದ ಪರೀಧಿ ಎಲ್ಲೆ ಮೀರಿ ಹರಿದಾಡಿತು
            ಸುವಾಸನೆಯ ಸೊಡರು ಘಮಘಮಿಸಿ ಮತ್ತೇರಿಸಿತು     
            ಚೆಲುವೆಲ್ಲ ಬಸಿದ ಸಿಹಿಜೇನ ಸವಿದು
            ಅಧರ್ರಾಮೃತವು ಕಂಪಿಸಿತು ಸವಿತುಟಿಯ ಮೇಲೆ 
            ನರ ನಾಡಿ ಬಿಸಿಯುಕ್ಕಿ, ಧಮನಿಗಳು ರಭಸವಿಕ್ಕಿ
            ನಶೆಯೇರಿದಾ ಮನಸಿನಾ ತುಂಬೆಲ್ಲ ಅಮಲೇ    

ಒಂದು ನೋಟ:
           ವೈರಾಗಿಯೂ ಕವಿಯಾಗಿ ಪ್ರೇಮ ಕವನ ಬರೆದಾನು
           ನೊಟದಾ ಮೋಡಿಗೆ ಮರುಳಾಗಿ ಮೊರೆಯಿಟ್ಟಾನು 
           ನೆಟ್ಟನೆಯ ನೋಟಕೆ ಶಿಲೆಯಲ್ಲಾ ಜೀವತಳೆಯಿತು
           ಕಾನನದ ಗಿಡವೆಲ್ಲ, ಹಸಿರಿಂದ ಚಿಗುರೊಡೆಯಿತು
           ತಪಗೈವ ಯೋಗಿ ತಪಭೋಗ ತ್ಯಜಿಸಿ
           ಚೆಲುವಯನರಿಸುತ ಹೊರಟ ನಿನ್ನ ಪೂಜಿಸಿ    


ಮಾನಸವಾಣಿಯಿಂದ,
-ಚಂದ್ರು
csbyadgi@gmail.com

Thursday, July 9, 2009

"ದಿವ್ಯ" ತರಂಗಿಣಿ

  "ದಿವ್ಯ" ತರಂಗಿಣಿ 

ಹುಣ್ಣಿಮೆಯ ಚಂದ್ರನ ನೊಡಿ 
ಸಾಗರದ ಅಲೆಗಳ ತಲ್ಲಣ 
ಒಲವಿನ ಚೆಲುವೆಯ ಕುಡಿ ನೋಟಕೆ
ಮನಸಿನ ಭಾವನೆಗಳ ತಲ್ಲಣ

ಕೋಗಿಲೆಯ ಗಾನದ ಇಂಪಿಗೆ
ಚೈತ್ರದ ಹಸಿರೇ ಸ್ಪೂರ್ತಿ
ನನ್ನ ಸುಂದರ ನಾಳೆಗಳ ಕಲ್ಪನೆಗೆ 
ನಿನ್ನ ನೆನಪುಗಳೇ ಸ್ಪೂರ್ತಿ 

ಇಬ್ಬನಿಯಲಿ ಮಿಂದಿರುವ ಎಲೆಗೆ  
ಮುಂಜಾನೆ ಸೂರ್ಯನ ಕಿರಣವೇ ಮುಕ್ತಿ  
ಪ್ರೀತಿ ನಶೆಯಲಿ ತೇಲಾಡುವ ನನಗೆ
ನಿನ್ನ ಪ್ರೀತಿಯ ಸಮ್ಮತಿಯೇ ಮುಕ್ತಿ 

ಬಳಲಿದ ಮುಸ್ಸಂಜೆ ಸೂರ್ಯನಿಗೆ  
ತಾಯಿ ಮಡಿಲಲಿ ಐಕ್ಯದ ಬಯಕೆ 
ಇರುಳು ಬೆಳಕಲೂ ನಿನ್ನ ಚೆಲುವ 
ಕಾಂತಿಯನು ಮನಕೆ ನೋಡುವ ಬಯಕೆ

ಮಾನಸವಾಣಿಯಿಂದ,
-ಚಂದ್ರು 
csbyadgi@gmail.com








sooryasta

sooryasta

Followers