Tuesday, November 3, 2009

ಉಳುವಾ ನೇಗಿಲಯೋಗಿಯ ಬಾಳು, ಕೊನೆಕಾಣದ ಗೋಳು....


ಉಳುವಾ ನೇಗಿಲಯೋಗಿಯ ಬಾಳು, ಕೊನೆಕಾಣದ ಗೋಳು....


ಆತ್ಮಿಯ ಬಾಂಧವರೇ,
ನಿಮಗೆಲ್ಲಾ ಗೊತ್ತಿರುವಂತೆ ಉತ್ತರ ಕರ್ನಾಟಕವಿಂದು ನಾವೆಂದೂ ಕಾಣದ/ಊಹಿಸದ/ಬಯಸದ ಪ್ರಕೃತಿ ಮಾತೆಯ ಮುನಿಸಿಗೆ ತುತ್ತಾಗಿ ತತ್ತರಿಸಿ ಹೋಗಿದೆ.
ತನ್ನೆಲ್ಲ ಮುನಿಸಿಗೂ ತಾನು ಬಯಸುವ ಬಲಿ ಅಮಾಯಕರು ಮತ್ತು ಬಡವರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ ಆ ಪ್ರಕೃತಿ ಮಾತೆ. ಅವರ ಯಾತನೆ, ರೋದನೆಗಳೇ ಅವಳಿಗೆ ಅಪ್ಯಾಯಮಾನವೆನಿಸಿವೆನೋ ಯಾರು ಬಲ್ಲರು? ಅಮಾಯಕರ ಬಾಳನ್ನು ಮೂರಾಬಟ್ಟೆ ಮಾಡಿ ಗಹ ಗಹಿಸಿ ನಗುವುದೇ ಅವಳ ಒಂದಂಶದ ಕಾರ್ಯವಾಗಿದೆ. ಸಂಪತ್ತನ್ನೆಲ್ಲ ಲೂಟೆ ಹೊಡೆಯುವ ಕಳ್ಳ ಖದೀಮರೆಲ್ಲ ಅವಳ ಗಮನಕ್ಕೇ ಬರುವುದಿಲ್ಲ.

ಅದೆಲ್ಲ ಇರಲಿ, ಅತಿವೃಷ್ಟಿಯೆಂಬ ಪ್ರಕೃತಿ ವಿಕೋಪದ ಬ್ರಹ್ಮ-ರಾಕ್ಷಸನ ಕೆಂಗಣ್ಣಿಗೆ ಗುರಿಯಾಗಿ, ದೇಶದ ಬೆನ್ನುಲುಬಾಗಿರುವ ರೈತನ ಬೆನ್ನುಲುಬು ಮುರಿದು ಹೋಗಿದೆ, ಸಾಲು ಸಾಲು ಕಷ್ಟಗಳ ಸುಳಿಗೆ ಸಿಲುಕಿ ನಾಳೆಗಳ ಬಗೆಗಿನ ನಂಬಿಕೆಯೇ ಅವನಿಗೆ ಕಮರಿ ಹೋಗಿದೆ,

ಬನ್ನಿ ಅವನ ಒಡಲಾಳದಲ್ಲೊಂದು ಭರವೆಸೆಯೆಂಬ ಚೈತ್ರದ ಹಸಿರು ಟಿಸಿಲೊಡೆಯುವಂತೆ ಮಾಡೋಣ, ಬತ್ತಿದ ಮನಸ್ಸಿನ ಒಳಗೊಂದು ಆಸೆಯ ಬೀಜ ಬಿತ್ತೋಣ, ಮುದುಡಿದ ಹೂ ಅರಳಿಸೋಣ, ಎದೆಯೊಳಗೊಂದು ಆಶಾಕಿರಣದ ಕಳಶ ಗೋಪುರ ಕಟ್ಟೋಣ.

ಶತಮಾನಗಳಿಂದ ಭೂಲೋಕಕ್ಕೆಲ್ಲ ಅನ್ನಸಂತರ್ಪಣೆಗೈದು ಹಸಿವು ನೀಗಿಸಿದ ಆ ಭೂಮಿ-ಪುತ್ರನ ಕೈ ಹಿಡಿದು ಮೇಲೆಬ್ಬಿಸಿ, ಪ್ರಕೃತಿಗೂ ಎದೆ ಸೆಟೆದು ಸವಾಲೆಸೆಯುವಂತೆ ಮಾಡೋಣ. ನಕ್ಷತ್ರಗಾಹಿಯಾಗಿರುವ ಅವನ ತಕ್ಷಣದ ಬಯಕೆಗಳಿಗೆ ಸ್ಪಂದಿಸೋಣ. ಒಂದು ಕಾಲದ ನಮ್ಮೆಲ್ಲರ ಸೂರು ಮತ್ತು ಬೇರಾಗಿದ್ದ ಕೃಷಿಯನ್ನು ಪೊರೆದು ಪೋಷಿಸುತ್ತಿರುವ ರೈತನ ಬಾಳನ್ನು ಮತ್ತೆ ಕಟ್ಟಿಕೊಡಲು ಶಕ್ತಿಮೀರಿ ಪ್ರಯತ್ನಿಸೋಣ

ಹಾಗಾದರೆ ನಾವು ಏನು ಮಾಡಬೇಕು ?

೧) ಬೇಡುವ ಕೈಗಳು ಸ್ವಚ್ಚವಾಗಿದ್ದರೆ ಕೊಡುವ ಕೈಗಳಿಗೆ ಎಂದೂ ಬರವಿಲ್ಲ. ನಿಮ್ಮ ಸ್ನೇಹಿತರ ಗುಂಪುಕಟ್ಟಿಕೊಂಡು ಅವರಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಕೊಟ್ಟು ಸಾಧ್ಯವಾದಷ್ಟು ಹಣವನ್ನು ತಕ್ಷಣವೇ ಜಮೆ ಮಾಡಲು ಹೇಳಿ,ನಂತರ ನೀವು ಹಣವನ್ನು ಸಮೀಪದ ಸಂತ್ರಸ್ತರೊಡನೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ, ಅಥವಾ ಮಠ ಮಾನ್ಯಗಳಿಗೆ ಕೊಡಿ

೨) ನಿಮ್ಮ ಆಫೀಸಿನ ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ ಅಥವಾ ಸಂಬಂಧಪಟ್ಟವರಿಗೆ ಹೇಳಿ ಆಫೀಸಿನ ಎಲ್ಲ ಸಹೋದ್ಯೊಗಿಗಳಿಗೂ ಸಹಾಯ ಕೇಳಿಕೊಂಡು ಮೇಲ್ ಕಳಿಸಲು ಹೇಳಿ ಅಥವಾ ಸಹೋದ್ಯೋಗಿಗಳ ಮಾಸಿಕ ವೇತನದ ಸ್ವಲ್ಪ ಭಾಗವನ್ನು ಅವರೇ ತೆಗೆದುಕೊಂಡು ಸಂತ್ರಸ್ತರಿಗೆ ಕೊಡಲು ಹೇಳಿ ಇಂತಹ ಸಂದರ್ಭಗಳಲ್ಲಿ ಯಾರೂ ಅದಕ್ಕೆ ವಿರೋಧಿಸುವುದಿಲ್ಲ

೩) ನಿಮಗೆ ಸದ್ಯಕ್ಕೆ ಆಫೀಸಿನಲ್ಲಿ ಯಾವುದೇ ಕೆಲಸದ ಒತ್ತಡವಿಲ್ಲದಿದ್ದರೆ, ನಾಲ್ಕಾರು ದಿನದ ಮಟ್ಟಿಗೆ ಹೋಗಿ ಸಂತ್ರಸ್ತರಿಗೆ ಸೂರು ಕಟ್ಟಿಕೊಡಲು ನೆರವಾಗಿ

೪) ನಿಮಗೆ ಯಾವುದೇ ತರನಾದ ಸಹಾಯ/ನೆರವು ಮಾಡಬೇಕೆನಿಸಿದರೂ ಉದಾಸೀನ ಬೇಡ ದಯವಿಟ್ಟು ತಕ್ಷಣವೇ ಮಾಡಿ

ಮಾನವೀಯ ಅಂತಃಕರಣವಿರುವ ಯಾರೂ ಇದನ್ನು ಹಗುರವಾಗಿ ಭಾವಿಸುವುದಿಲ್ಲವೆಂಬುದು ನಮ್ಮ ನಂಬಿಕೆ ಮತ್ತು ಸಾಧ್ಯವಾದಷ್ಟು ನಿಮ್ಮ ಮಿತ್ರರಿಗೂ ಇದನ್ನು ತಿಳಿಸಿಹೇಳಬೇಕೆಂಬುದು ನಮ್ಮೆಲ್ಲರ ಬಯಕೆ.

ನೆನಪಿರಲಿ : ನಿಮ್ಮ ಅಳಿಲು ಗಾತ್ರದ ಸೇವೆಯೂ ಕೂಡ, ನೆರೆಯ ಆರ್ಭಟಕ್ಕೆ ಬಳಲಿ ಬೆಂಡಾಗಿರುವ ಸಂತ್ರಸ್ತರಿಗೆ ಸಂಜೀವಿನಿ ಮಾತ್ರೆ ಯಾಗಬಹುದು. ನಮ್ಮೆಲ್ಲರ ಉಳುವಿಗಾಗಿ ದಿನವೆಲ್ಲ ದಣಿವಿಲ್ಲದೇ ದುಡಿಯುವ ಕೈ ಗಳಿಗೆ ಸಹಾಯ ಮಾಡಲು ಸಿಕ್ಕ ಸುವರ್ಣ ಅವಕಾಶವನ್ನು ದಯವಿಟ್ಟು ಹಾಳುಮಾಡಿಕೊಳ್ಳಬೇಡಿ

ರೈತನೆದ್ದರೆ ದೇಶ ಎದ್ದಂತೆ....

ಮಾನಸವಾಣಿಯಿಂದ,
-ಚಂದ್ರು

Wednesday, August 19, 2009

-: ಮನದರಸಿ :-




"ಮನದರಸಿ"

ಬೆಚ್ಚನೆಯ ಕನಸೊಂದು
ಬಿಚ್ಚದೇ ಕೂತಿದೆ ಎದೆಯಾಂತರಾಳದಲಿ...
ನಿನ್ನೊಲುಮೆಯ ಕಾವು ಬಯಸಿ

ದುಗುಡದೀ ನಯನಗಳು
ನೋಡದೇ ಚಡ-ಪಡಿಸಿವೆ ನಿರಾಶೆಯಲಿ...
ನಿನ್ನ ಸ್ನಿಗ್ಧ ಸೌಂದರ್ಯವನರಸಿ

ಮೊಗ್ಗಿನ ಮನಸ್ಸೊಂದು
ಅರಳದೇ ಕಾದಿದೆ ಆಸೆಯಲಿ...
ನಿನ್ನ ಸೆರಗಿನಾ ಮೊನೆಯ ಸ್ಪರ್ಷವನರಸಿ

ಮನಸಿನಾ ಮಾತೊಂದು
ಹೊರಬರದೇ ತಡವರಿಸಿದೆ ತುಟಿಯಂಚಿನಲಿ...
ನಿನ್ನಂತರಂಗದ ಸಮ್ಮತಿಯನರಸಿ

ಬಿಸಿ ಬಯಕೆಗಳು
ಬಿಡದೇ ಸುಡುತಿವೆ ಬಿರುಸಿನಲಿ...
ನಿನ್ನ ಪ್ರೀತಿಯೆಂಬ ಕಡು ತಂಪನರಸಿ

ನೀನಿಲ್ಲದ ನಾನು ನೀರಿಲ್ಲದಾ ಮೀನು
ತಡವೇಕೆ ನಾರಿ ಒಲಿಯುವೆಯಾ ಕನಿಕರ ತೋರಿ ?

ಮಾನಸವಾಣಿಯಿಂದ,
-ಚಂದ್ರು

Thursday, August 6, 2009

-:ಆಗುಂತಕನ ಕಾಣದ ಇನ್ನೊಂದು ಮುಖ :-

ಮುನ್ನುಡಿ:
ನಾವೆಷ್ಟೇ ಬಲವಾಗಿ ವಿರೋಧಿಸಿದರೂ ಅದೊಂದು ಪಾತ್ರ ನಮ್ಮಲ್ಲಿ ಹುಟ್ಟಿಸಿದ ಕಂಪನ ಮಾತ್ರ ಜೋರಾಗಿಯೇ ಸದ್ದು ಮಾಡಿದೆ. "ಆಗುಂತಕನ ಆಡದ ಮಾತುಗಳು" ಅಂಕಣದಲ್ಲಿ ಆ "ಸಾಫ್ಟ್ ವೇರ್ ಇಂಜಿನಿಯರ್" ಪಾತ್ರದ ಒಂದು ಮುಖದ ಬಗ್ಗೆ ಮಾತ್ರ ಬರೆದಾಗ, ಮನಸ್ಸಿನಲ್ಲಿ ನಾನೆಲ್ಲೋ ಕೆಲವೊಂದು ವಿಚಾರಗಳನ್ನು ಉದ್ದೇಶಪೂರ್ವಕವಾಗಿಯೇ ಬದಿಗಿರಿಸಿ ಏಕ-ಮುಖವಾಗಿ ಬರೆಯುತ್ತಿದ್ದೇನೆ ಎನಿಸುತ್ತಿತ್ತು, ಈ ಲೇಖನವನ್ನು ಬರೆಯುವ ಮೂಲಕ ಆ ಪಾಪ-ಪ್ರಜ್ನೆ ನನ್ನಲ್ಲಿ ದೂರವಾಯಿತು. ಆ ಪಾತ್ರದ ಉದ್ದೇಶ ಎಷ್ಟೇ ದುರಾದೃಷ್ಟಿಯಿಂದ ಕೂಡಿದ್ದರೂ ಕೆಲವೊಂದು ಸಮಾಜಮುಖಿ ಕ್ರಾಂತಿಗಳಾಗಿವೆ, ಅವುಗಳನ್ನು ನಾನು ಪ್ರಸ್ತಾಪಿಸದಿದ್ದರೆ ನಾನು ಬರವಣಿಗೆಗೂ ಮತ್ತು ಒದುಗರಿಗೂ ಮೋಸಮಾಡಿದಂತಾಗುತ್ತದೆ. ಹೆಣ್ಣನ್ನು ಹಡೆಯುವುದೇ ಪಾಪ ಎಂದು ತಿಳಿದುಕೊಂಡಿದ್ದರು, ಯಾವ ಶಾಲೆಯ ಶಿಕ್ಷಣವಾಗಲಿ, ಜಾಗೃತಿ ಆಂದೋಲನಗಳಾಗಲಿ, ದೃಶ್ಯ/ಶ್ರವಣ/ಬರಹ ಮಾಧ್ಯಮಗಳಾಗಲೀ ಏನೂ ಪ್ರಭಾವ ಬೀರಿರಲಿಲ್ಲ. ಜಾಗತೀಕರಣದಿಂದ ಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿಗೆ ಈಗ ಎಲ್ಲವನ್ನೂ ದೂರ ಮಾಡಿದೆ. ಎನೊ ಸ್ವಲ್ಪ ಕಲಿಸಿದರೆ ಅವಳ ಜೀವನ ಅವಳು ನೋಡಿಕೊಳ್ಳುತ್ತಾಳೆ ಎನ್ನುವ ಬಲವಾದ ನಂಬಿಕೆ ಅವಳ ಹೆತ್ತವರಿಗೆ ಬಂದುಬಿಟ್ಟೀದೆ. ಮಗ ಅಪಾ-ಪೋಲಿಯಾಗಿ ತಿರುಗಾಡುವಾಗ ತಂದೆಗೆ ಎಲ್ಲಿಲ್ಲದ ಯೋಚನೆಯಿರುತ್ತಿತ್ತು, ಆದರೆ ಈಗ ಒಂದು ಕೆಲಸ ಸಿಕ್ಕ ತಕ್ಷಣ ನಿರುಮ್ಮುಳವಾಗಿದ್ದಾನೆ.

ಇನ್ನು ಹದಿಹರೆಯದ ವಯಸ್ಸಿನಲ್ಲಿ ಕೈತುಂಬ ದುಡ್ಡು ಸಂಪಾದನೆ ಮಾಡುವಾಗ ಮನಸ್ಸು ಬೇರೆಡೆ ಹೊರಳುವುದು ಸಹಜ, ಅದಕ್ಕೆ ನಾವು ಬೇಲಿ ಹಾಕಬೇಕು. ಒಂದು ಮಾತಿದೆ ಹಣ ಮಾತನಾಡಲು ಶುರು ಮಾಡಿದರೆ ಸತ್ಯ ಸುಮ್ಮನಾಗುತ್ತದೆಯಂತೆ. ಅಲ್ಪನಿಗೆ ಐಷ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಬಹುಶಃ ಇಲ್ಲೂ ಅದೇ ಕಥೆಯಾಗಿರಬಹುದು. ಸರಿಯೋ/ತಪ್ಪೋ,ಒಳ್ಳೆಯದೋ/ಕೆಟ್ಟದ್ದೋ, ಬೇಕಿತ್ತೋ/ಬೇಡವಿತ್ತೋ ನಾವು ಜಾಗತೀಕರಣದ ನೌಕೆಯನ್ನು ಹತ್ತಿಯಾಗಿದೆ, ರಾತ್ರೋ ರಾತ್ರಿ ನಾವು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿಲ್ಲ ಇರುವುದರ ಜೊತೆಗೆ ಸಾಗಿ ಕಳೆದದ್ದನ್ನು ಪಡೆದುಕೊಳ್ಳುವುದು ಸೂಕ್ತ. ನನ್ನ ಉದ್ದೇಶ ಇಷ್ಟೆ ಬರೀ ಹೊರಗಿನ ಶಕ್ತಿಗಳು ಬಂದು ಹೀಗಾಯಿತು ಎಂದು ರೋದಿಸುವುದಕ್ಕಿಂತ, ಎಲ್ಲೊ ನಮ್ಮ ವ್ಯವಸ್ಥೆಯಲ್ಲೂ ತಪ್ಪಿದೆ ಅದನ್ನು ಸರಿಗಾಣಿಸುವ ಇಚ್ಚಾಶಕ್ತಿ ಕೊರತೆ ನಮ್ಮಲಿಯೂ ಇದೆ, ಅದನ್ನು ಅರಿತು ಮುನ್ನಡೆಯಬೇಕಾಗಿದೆ.

ಮರೆತ ಮಾತು:
ಬರವಣಿಗೆ ಮತ್ತು ಓದು ನನ್ನ ಪ್ರವೃತ್ತಿಗಳು ಎಂದು ತಿಳಿದು, ನನ್ನಲ್ಲಿರುವ ಬರಹಗಾರನನ್ನು ಹೊರತೆಗೆದು ನನಗೆ ಬರೆಯಲು ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಹಿರಿಯ ಸ್ನೇಹಿತ ಸುರೆಶ್ ನರಸಿಂಹರಿಗೆ ಈ ಹೊತ್ತಿನಲ್ಲಿ ವಿಶೇಷ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ. ನನ್ನಲ್ಲಿರುವ ಪುಸ್ತಕ ವ್ಯಾಮೋಹಕ್ಕೆ ನೀರೆರೆದು ಪೋಷಿಸಿದವರು ಅವರೇ. ನಿರಂತರ ಕೆಲಸದ ಒತ್ತಡದೆ ನಡುವೆಯೂ ಇಂತಹ ಲೆಖನಗಳು ಹೊರಬರಲು ಅವರೇ ಪರೊಕ್ಷ ಕಾರಣ.

-:ಆಗುಂತಕನ ಕಾಣದ ಇನ್ನೊಂದು ಮುಖ :-
ನಾನ್ಯಾರು ???
ಮತ್ತೆ ಮತ್ತೆ ಮನದ ಆಳದಲ್ಲಿ ತೂರಿಬರುತ್ತಿರುವ ಒಂದೇ ಪ್ರಶ್ನೆ, ಅಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಈ ಪ್ರಶ್ನೆ ಮೊದಲು ಮಾಡಿದ ನನ್ನ ಆಲೋಚನೆಗಳ ಬಗ್ಗೆ ನನಗೇ ಹಿಡಿದಿಟ್ಟುಕೊಳ್ಳಲಾರದ ಸಂಶಯದ ಬೀಜ ಮೊಳಕೆಯೊಡೆಯುವಂತೆ ಮಾಡಿತು. ಭಾವುಕರ ನಾಡಿನಲ್ಲಿ ಅನಾವಷ್ಯಕವಾಗಿ ನಾನು ಭಾವುಕನಾದೆ ಅನಿಸುತ್ತಿತ್ತು. ನನ್ನಷ್ಟಕ್ಕೆ ನಾನೇ ತುಲನಾತ್ಮಕವಾಗಿ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡಿದೆ.

ನಾನು ಬರುವುದಕ್ಕಿಂತ ಮುಂಚೆ ನಿಮ್ಮ ಸ್ಥಿತಿಯನ್ನು ಒಮ್ಮೆ ಆತ್ಮಾವಲೋಕನ ಮಾಡೊಕೊಳ್ಳೀ: ಶತಕೋಟಿಗಟ್ಟಲೇ ಜನಸಂಖ್ಯೆ, ಅದರಲ್ಲಿ ಕೊಟ್ಯಾನುಗಟ್ಟಲೇ ಬಿಸಿರಕ್ತದ ಪ್ರತಿಭಾವಂತ ಯುವಶಕ್ತಿ, ಕಾಡ್ಗಲ್ಲು ಕೊಟ್ಟರೆ ಮರುದಿನವೇ ಶಿಲೆ ಮಾಡಿ ನಿಲ್ಲಿಸುವ ಪಾಂಡಿತ್ಯ ಮತ್ತು ಅದಕ್ಕೇ ಜೀವಬರಿಸುವ ಉತ್ಸಾಹ .ಇಂತವರು ಬ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ರಾಜಕೀಯ ಶಕ್ತಿಗಳಿಂದಾಗಿ ಕೆಲಸವಿಲ್ಲದೇ ಬೀದಿ ಬೀದಿ ಅಲೆಯುತ್ತಿದ್ದರು. ವಿಶ್ವ ವಿದ್ಯಾನಿಲಯಗಳೆಂದರೆ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಿದ್ದಂತೆ ಎಂದು ಜನ ಆಡಿಕೊಳ್ಳುತ್ತಿದ್ದರು. ಶಿಕ್ಷಣದ ವ್ಯವಸ್ಥೆಯ ಮೇಲೆ ರ್‍ಒಸೆದ್ದು ಹೋಗಿ ನಂಬಿಕೆ ಕಳೆದು ಕೊಂಡಿದ್ದರು. ಇವರನ್ನಾಳುವ ಡೊಂಕು ಬಾಲದ ನಾಯಕರೋ ಇಂತಹ ಯಾರಿಗೂ ಕೈಗೆಟುಕದ ಮಾನವ ಸಂಪನ್ಮೂಲವನ್ನು ಇಟ್ಟುಕೊಂಡು ಜಗತ್ತಿಗೇ ಮಾದರಿಯಾಗುವ ದೇಶಕಟ್ಟಬಹುದಾಗಿತ್ತು. ನಮ್ಮಷ್ಟು ಹಪಾಹಪಿಯಿದ್ದಿದ್ದರೆ ನಮ್ಮನ್ನೂ ಸೇರಿದಂತೆ ಜಗತ್ತನ್ನೇ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬಹುದಾಗಿತ್ತು. ಆದರೆ ಇವರಿಗೇ ಜನಸಂಖ್ಯೆಯೇ ಸಮಸ್ಯೆಯಾಗಿದೆ. ಯಾವುದು ವರದಾನವಾಗಬೇಕಿತ್ತೋ ಅದು ಶಾಪವಾಗಿ ಮಾರ್ಪಟ್ಟಿತ್ತು. ಭಾರತ ದೇಶವೆಂದರೆ ಏಡಿಗಳ ಕಥೆಗೆ ಹೆಸರುವಾಸಿ ಈ ಕಥೆಯ ಮೂಲಕ ನಮ್ಮ ದೇಶದಲ್ಲಿ ಈಗಲೂ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ ಹಾಗೆಯೇ ಇನ್ನೊಂದು ನಿಮಗಿದ್ದ ಬಿರುದೆಂದರೆ ಅದು "ಹಾವಡಿಗರ ನಾಡು".

ಅಂದೊಂದು ಕಾಲವಿತ್ತು ನೀವು ಯಾವುದಾದರೂ ಊರಿಗೆ ಹೋಗುವಾಗ ಬಟ್ಟೆಗೆ ಇಸ್ತ್ರೀ ಮಾಡಿಸಿಕೊಳ್ಳಲು, ಮೂಗಿನ ಸಿಂಬಳ ಒರಿಸಿಕೊಳ್ಳಲು ಕರ್ಚೀಫು, ಎಲ್ಲದಕ್ಕೂ ಅಪ್ಪನ ಜೇಬಿನ ದುಡ್ಡೇ ನೆಚ್ಚಿಕೊಂಡಿರಬೇಕಾಗಿತ್ತು. ಸ್ವಾವಲಂಬನೆ ಯೆಂದರೆ ಏನು ಎನ್ನುವಷ್ಟರ ಮಟ್ಟಿಗೆ ಜಡವೆದ್ದು ಹೋಗಿದ್ದರು ಭಾರತ ಮಾತೆಯ ಒಡಲ ಪುತ್ರರು. ಇನ್ನು ಉದ್ಯೋಗಗಳೋ ಹಬ್ಬಕ್ಕೆ ಬರುವ ಅತಿಥಿ ಗಳಂತೆ ಇದ್ದವು ಈ ಸಾರಿಯ ನಾಗರ ಪಂಚಮಿಗೆ ಬಂದರೆ ಮುಂದೆ ದೀಪಾವಳಿಗೆ. ಜನಸಂಖ್ಯೆ ಮಾತ್ರ ಕ್ಷಣ ಕ್ಷಣಕ್ಕೂ ಸ್ಫೊಟಿಸುತ್ತಿತ್ತು. ಎಷ್ಟಾದರೂ ಮಳೆಯಿಲ್ಲದ ಬೆಳೆ ಅಲ್ಲವೇ ಅದಕ್ಕೇ ಜೋರಾಗೇ ಬೆಳೆ ತೆಗೀತಾಯಿದ್ದೀರಿ, ಮುಂದಾಲೋಚನೆ ಮಾತ್ರ ಶೂನ್ಯ. ಒಂದು ಕೆಲಸಕ್ಕೆ ಕರೆದರೆ ಚೆಲ್ಲಿದ ಸಕ್ಕರೆ ತುಣುಕಿಗೆ ಹಸಿದ ಇರುವೆಗಳು ಮುತ್ತಿಕೊಂಡ ಹಾಗೆ ಮುತ್ತಿಕೊಳ್ಳುತ್ತಿದ್ದಿರಿ, ಆದರೆ ಆಯ್ಕೆಗೆ ಮಾನದಂಡ ನಿಮಗೇ ಗೊತ್ತು. ನಿರುದ್ಯೋಗಿಯ ಬವಣೆಗಳನ್ನು ನೀವೂ ನೋಡಿದ್ದೀರಿ ನಿಮ್ಮ ಚಲನಚಿತ್ರಗಳೂ ಮನಮುಟ್ಟೂವಂತೆ ಇಂಚಿಂಚಾಗಿ ವಿವರಿಸಿವೆ ನಾನು ಮತ್ತೆ ಹೇಳಿ ನಿಮಗೆ ಅವಮಾನ ಮಾಡುವುದಿಲ್ಲ. ಯಾವತ್ತಾದರೂ ಒಂದು ದಿನ ಹೋಟೇಲಿಗೆ ಹೋಗಿ ಮಸಾಲೆ ದೋಸೆ ತಿಂದು ಬಂದರೆ ಎರಡು ದಿನ ಕೈ ತೊಳೆಯದೇ ರುಚಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದಿರಿ, ಇನ್ನೊಮ್ಮೆ ಹೋಗುವುದು ಅಪ್ಪನ ವಾರ್ಷಿಕ ಬೋನಸ್ ಬಂದಾಗ. ರೈತರ ಮಕ್ಕಳಿಗಂತೂ ಅದರ ರುಚಿ ಬ್ರಹ್ಮಾಂಡ ದಷ್ಟು ದೂರವಾಗಿತ್ತು.

ನನ್ನ ಆಗಮನದ ನಂತರ ನಿಮ್ಮ ಪರೀಸ್ಥಿತಿಯನ್ನು ಒಮ್ಮೆ ಮೆಲುಕುಹಾಕಿ: "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಇದು ನಮ್ಮ ದೇಶದ ಧ್ಯೇಯ ಇದನ್ನೇ ನಾನು ಬಂದ ಮೇಲೆ ಇಲ್ಲಿ ಬಿಟ್ಟೂ ಬಿಡದೇ ಸಾರುತ್ತಿದ್ದೇನೆ. ಜಾತಿವ್ಯವಸ್ಥೆಯೆಂಬ ನಿರಂತರ ಗಬ್ಬೆದ್ದಿರುವ ಕೆಸರಿನಲ್ಲಿ ಬಿದ್ದು ಹೊರಳಾಡಿ ನೀವು ಗಬ್ಬೆದ್ದು ಹೋಗಿದ್ದಿರಿ. ನಿಮಗೊಂದು ಸುವಾಸನೆಯ ಮಲ್ಲಿಗೆ ಪರಿಮಳ ಹೇಗಿರುತ್ತದೆ ಎಂದು ಪರಿಚಯಿಸಿದವನೇ ನಾನು. ಸಂಪ್ರದಾಯದ ಸೆರಗಿನಲ್ಲಿ ಸಿಕ್ಕು ಹೊಸತನಕ್ಕೆ ಹೊಂದಿಕೊಳ್ಳದೇ, ಹೊರಬರಲಾರದೇ ಉಸಿರುಗಟ್ಟಿದ್ದ ನಿಮ್ಮ ಮನಸ್ಸುಗಳಿಗೆ ಬದಲಾವಣೆಯ ಗಾಳಿ ಹರಿದುಬರುವಂತೆ ಮಾಡಿದ್ದೇ ನಾನು. ಜಿಡ್ಡುಗಟ್ಟಿದ್ದ ಅರ್ಥ ವ್ಯವಸ್ಥೆಗೆ ಹೊಸ ಆದಾಯದ ಮೂಲ ವನ್ನು ಹುಡುಕಿಕೊಟ್ಟು, ನಿಮ್ಮ ದೇಶಕ್ಕೆ ವಿಶ್ವದಲ್ಲಿ ಒಂದು ಗತ್ತು ತಂದು ಕೊಟ್ಟಿದ್ದೂ ನಾನೇ. ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ, ಜೀವನಕ್ಕೆ ಪ್ರತಿಭೆಯೊಂದೇ ಮಾನದಂಡ, ಹಣವಲ್ಲ ಎಂದುತೋರಿಸಿಕೊಟ್ಟವನೂ ನಾನೇ.. ಕೆಳ/ಮಧ್ಯಮವರ್ಗದ ಮನೆಗಳಲ್ಲಿ ಸರಿಯಾಗಿ ನೂರರ ನೋಟನ್ನೂ ನೋಡಿರಲಿಲ್ಲ ಅವರಿಗೆ ಡಾಲರ್ ನ ಮುಖ ತೋರಿಸಿದವನೂ ನಾನೇ. ಬಾನಂಗಳದಲ್ಲಿ ಲೋಹದ ಹಕ್ಕಿಯೊಂದು ಹಾರಾಡುತ್ತಿದ್ದರೆ ಗೋಣು ಉಳುಕುವವರೆಗೂ ಮೇಲೆ ನೋಡಿತ್ತಿದ್ದಿರಿ, ನೀವೂ ಹತ್ತುವ ಅವ್ಯಕ್ತ ಆಸೆಯನ್ನು ಮನದೊಳಗೆ ಹುದುಗಿಟ್ಟುಕೊಳ್ಳುತ್ತಿದ್ದಿರಿ, ನಿಮ್ಮ ಗಗನ ಕುಸುಮವಾಗಿದ್ದ ಆಸೆಯೊಂದು ಕೈಗೆಟುಕುವಂತೆ ಆಗಿದ್ದು ನನ್ನಿಂದಲೇ..

ಈಗ ನನ್ನ ಮೇಲಿರುವ ಆಪಾದನೆಗಳ ಬಗ್ಗೆ ನನ್ನ ಸ್ಪಷ್ಟೀಕರಣದತ್ತ ಗಮನ ಹರಿಸಿ:
ಅದೇನೋ ಪ್ರತಿಭಾ ಪಲಾಯನದ ಬಗ್ಗೆ ಹೆಳುತ್ತೀರ, ಮೊದಲಿಗೆ ನೀವೇನು ನಿರುಪದ್ರವಿಗಳು ಎಂದು ಬಿಟ್ಟಿದ್ದಿರೋ ಅವರನ್ನೇ ನಾನು ನನ್ನ ದೇಶಕ್ಕೆ ಕರೆದುಕೊಂಡು ಹೊಗಿದ್ದು. ನೀವು ಕೊರಡು ಎಂದು ತೆಗಳಿದವರನ್ನು ನಾವು ತೇಯ್ದು ಗಂಧವನ್ನಾಗಿ ಮಾಡಿದ್ದೇವೆ, ಆ ಮೂಲಕ ಜಗತ್ತಿಗೆ ಅವರ ಸೇವೆ ದೊರೆಯುವಂತೆ ಮಾಡಿದ್ದೇವೆ. ತದನಂತರ ನಮ್ಮ ಪ್ರತಿಭಾ ಪುರಸ್ಕಾರವನ್ನು ಮೆಚ್ಚಿ, ಹೆಚ್ಚು ಹೆಚ್ಚು ಪ್ರತಿಭೆಗಳು ಬರಲಾರಂಭಿಸಿದವು. ನಿಮ್ಮ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸದೇ ಈಗ ನಮ್ಮ ಮೇಲೆ ಗೂಬೆ ಕೂರಿಸುವುದು ಯಾವ ನ್ಯಾಯ ?. ಇನ್ನು ನಿಮ್ಮ ದೇಶದಲ್ಲಿ ನನ್ನ ಒಡಲ ಕುಡಿಗಳ ಬಗ್ಗೆ ಹೇಳಬೇಕೆಂದರೆ, ಅಲ್ಲ ಸ್ವಾಮಿ ನಾವೆನೂ ಪುಕ್ಕಟೆಯಾಗಿ ನಿಮ್ಮ ಪ್ರತಿಭೆಗಳನ್ನು ದುಡಿಸಿಕೊಳ್ಳುತ್ತಿಲ್ಲ, ಅವರವರ ಯೋಗ್ಯತೆಗೆ ತಕ್ಕ ಹಾಗೆ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ನಿಮ್ಮದೇ ವ್ಯವಹಾರ ಜ್ನಾನದಲ್ಲಿ ಹೇಳಬೇಕೆಂದರೆ ನಮ್ಮಲ್ಲಿ ಪ್ರತಿಭೆ ಕೊರತೆ ನಿಮ್ಮಿಂದ ಅದು ನೀಗಿದೆ, ನಿಮ್ಮಲ್ಲಿ ಹಣದ ಕೊರತೆ ಇದೆ ನಮ್ಮಿಂದ ಅದು ನೀಗಿದೆ. ನಿಮ್ಮ ದೇಶಕ್ಕೆ ನ್ಯಾಯವಾಗಿ ಎಷ್ಟು ಟ್ಯಾಕ್ಸ್ ಕಟ್ಟಬೇಕೋ ನಯಾಪೈಸೆ ಬಿಡದೇ ಚಾಚೂ ತಪ್ಪದೇ ಕಟ್ಟಿದ್ದೇವೆ. ಅದು ಸರಿಯಾಗಿ ಬಳಕೆ ಯಾಗದಿದ್ದರೆ ಅದು ನಿಮ್ಮ ಆಡಳಿತಾತ್ಮಕ ವ್ಯವಸ್ಥೆಯ ತಪ್ಪೇ ವಿನಹ ನಮ್ಮದಲ್ಲ.

ಇನ್ನು ಅದೇನೋ ನಮ್ಮನ್ನ ಬರಮಾಡಿಕೊಂಡು ತಾವೆನೋ ಕುಲಗೆಟ್ಟು ಹೋಗಿದ್ದೀರಂತೆ ...ನಿಮ್ಮ ಕುಲವೇಕೆ ಇಷ್ಟು ಕ(ಕೆ)ಡೆಯಾಯ್ತು ಕುಲಬಾಂಧವರೆ ?
ನಿಮ್ಮ ಕುಲದ ಗೌರವದ ಬಗ್ಗೆ ನಮಗೆ ಗೊತ್ತಿಲ್ಲವೇ ? ಶತ ಶತ ಮಾನಗಳಿಂದ ತುಳಿತಕ್ಕೊಳಗಾದವರನ್ನು ತುಳಿಯುತ್ತಲೇ ಬಂದವರು ನೀವು.
ಮಗು ಹುಟ್ಟಿದಾಗ ಪೂರ್ವಜರ ಕುಲ ಕಸುಬನ್ನು ಆಧರಿಸಿ ಬರುವ ಜಾತಿಯನ್ನೇ ಅವನ ಹಣೆ ಮೇಲೆ ಬರೆದು ಅದಕ್ಕೇ ಸೀಮಿತಗೊಳಿಸಿಬಿಟ್ಟಿದ್ದಿರಿ. ಹೊಲೆಯನ ಮಗ ಚಪ್ಪಲಿಯನ್ನೇ ಹೊಲಿಯಬೇಕು, ಮಾಲ್ಜಾತಿಯವರು ಮಾತ್ರ ಆಳಬೇಕು ಎಂದವರು ನೀವು. ನಾನು ಬಂದು ಮಾಡಿದ ಮೊದಲ ಕೆಲಸವೇ ಆ ಜಾತಿಯನ್ನು ಕಿತ್ತೊಗೆದಿದ್ದು ನನ್ನ ಹೆಸರಿನಲ್ಲಿ ದುಡಿಯುವ ಮಕ್ಕಳಲ್ಲಿ ಒಬ್ಬನನ್ನು ನಾನು ಕನಸಿನಲ್ಲೂ ನಿನ್ನ ಜಾತಿ ಯಾವುದೆಂದು ಕೇಳಿಲ್ಲ. ನೀವು ಮನೆಯಲ್ಲಿ ಅತ್ಯಂತ ಕ್ರೂರ ವಾಗಿ ಮಾತನಾಡಿದರೆ ಮನೆಯಲ್ಲಿ ಹಿರಿಯರು ಒಂದು ಮಾತು ಹೇಳುತ್ತಾರೆ, ಅದೇನೆಂದರೆ "ನಾಲಿಗೆ ಜಾತಿ(ಅಥವಾ ಕುಲ) ಹೇಳುತ್ತದೆ". ಬಾಯಿ ಬಿಗಿಹಿಡಿದು ಮಾತನಾಡು. ಅಂದರೆ ಕೆಟ್ಟದ್ದನ್ನು ಮಾತನಾಡುವವನು ಕೆಟ್ಟ ಕುಲದವನು ಎಂದಾಯ್ತು. ಜಾತಿ ಎನ್ನುವುದು ಕುಲ ಕಸುಬಿನಿಂದ ಬಂದಿದ್ದೇ ವಿನಹ, ದೇವರು ಮಾಡಿ ಕಲಿಸಿದ್ದಲ್ಲ. ನಿಮ್ಮ ಎಷ್ಟೋ ವಿದ್ಯಾವಂತ ಮನಸ್ಸುಗಳೆ ಇದನ್ನು ವಿರೋಧಿಸುತ್ತಿವೆ, ಆದರೆ ನಾನು ಯಾವುದಕ್ಕೂ ಸೊಪ್ಪು ಹಾಕಿಲ್ಲ,ನನದೊಂದೇ ಮಂತ್ರ.
ಅದು:
ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು,
ಸುಡುವಾಗ್ನಿಯೊಂದಿರುತಿರಲು ನಡುವೆ
ಕುಲಗೋತ್ರ ಎತ್ತಣದು ಸರ್ವಜ್ನ

ನನ್ನ ಮೇಲಿರುವ ಇನ್ನೊಂದು ದೊಡ್ಡ ಆಪಾದನೆ ನಾನು ಧರ್ಮಾವಶೇಷನೆಗೆ ಬಂದಿದ್ದೇನೆ ಎನ್ನುವುದು ಇದೊಂದು ಕಳಂಕ ಮಾತ್ರ ನನ್ನನ್ನು ತುಂಬಾ ಅಧೀರನ್ನನ್ನಾಗಿ ಮಾಡಿತು. ನಾನು ಬಂದ ಮೇಲೆ ನಿಮ್ಮ ದೇಶದ ಬೆಳವಣಿಗೆಗಳನ್ನೊಮ್ಮೆ ಗಮನಿಸಿ.
ಎರಡೂ ಮೂರು ಡಿಗ್ರೀ ತೆಗೆದುಕೊಂಡವರೂ ಒಂದು ಕೆಲಸಕ್ಕೆ ಅಲೆದೂ ಅಲೆದೂ ಮಂಡಿಯ ಚಿಪ್ಪುಗಳು ಸವೆದು ಹೋಗುತ್ತಿದ್ದವು, ನಾನು ಬಂದ ಮೇಲೆ ಅವರವರ ಪ್ರತಿಭೆಗನುಗುಣವಾಗಿ ಅವರಿದ್ದಲ್ಲಿಗೇ ಹೊಗಿ, ಕೆಲಸಕ್ಕೆ ಕರೆ ಕೊಟ್ಟು, ಕೈ ತುಂಬ ಸಂಬಳ ಕೊಡುವ ಭರವಸೆ ಕೊಟ್ಟು ಬಂದಿದ್ದೇನೆ.
ಒಂದು ಅಂದಾಜಿನ ಪ್ರಕಾರ ನನ್ನ ಕೆಲಸವನ್ನು ನೆಚ್ಚಿಕೊಂಡವರು ಸುಮಾರು ೧ ಕೋಟಿ ಜನ ಪ್ರತ್ಯಕ್ಷ ಫಲಾನುಭವಿಗಳು ಮತ್ತು ೧ ಕೋಟಿ ಪರೋಕ್ಷ ಫಲಾನುಭವಿಗಳಿದ್ದಾರೆ. ಹುಟ್ಟಿಸುವುದೊಂದೇ ಆಜನ್ಮ ಸಿದ್ದ ಹಕ್ಕು ಎಂದು ತಿಳಿದಿದ್ದಿರಿ ಅವರಿಗೆ ನನ್ನ ಕೈಲಾದ ಮಟ್ಟಿಗೆ ಸೂರು ಕೊಡುವದಕ್ಕೆ ನಾನು ಸಹಾಯ ಮಾಡಿದ್ದೇನೆ.
ಮಿಲಿಯನ್ ಗಟ್ಟಲೇ ವಾರ್ಷಿಕ ವರಮಾನ ಐ.ಟಿ ಯಿಂದಲೇ ನಿಮ್ಮ ದೇಶಕ್ಕೆ ಬರುತ್ತಿದೆ.

ನನ್ನ ಪ್ರಕಾರ ಮನುಷ್ಯನು ಬದುಕಬೇಕೆಂದರೆ ಹಸಿದಾಗ ಹೊಟ್ಟೆಗೆ ಅನ್ನ, ಬಾಯಾರಿದಾಗ ಕುಡಿಯಲು ನೀರು, ಬದುಕು ಸಾಕೆನಿಸಿದಾಗ ನಾಲ್ಕು ಸಾಂತ್ವನದ ನುಡಿಗಳು ಬೇಕು, ನೀವು ಬಹುವಾಗಿ ಮೆಚ್ಚುವ ಯಾವ ಧರ್ಮ ನೀವು ಹಸಿದಾಗ ನಿಮಗೆ ಅನ್ನ ನೀರು ಕೊಟ್ಟಿತು ?
ನಾನು ನಮ್ಮವರ ಕೆಲಸವನ್ನು ಪುರಸ್ಕರಿಸುತ್ತಿಲ್ಲ ಆದರೆ ನಿಮ್ಮವರ ಧರ್ಮದ ಬಗ್ಗೆ ಇರುವ ಬೇಜಾವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದ್ದೇನೆ.
ಹೆಜ್ಜೆ ಹೆಜ್ಜೆಗೂ ಮಠ ಮಾನ್ಯಗಳು, ಅಷ್ಟೊಂದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ ಯಾರಾದರೂ ಒಬ್ಬರು, ಒಬ್ಬ ಬಡ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಕೊಡುವ ಔದಾರ್ಯ ತೋರುತ್ತಿವೆಯೇ ? ಅಲ್ಲಿಯೂ ಸಹ ನಾವು ವಿದ್ಯೆಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬೇಕಾಗಿದೆ.
ನಿಮ್ಮ ಯಾವ ಮಠ, ಮಾನ್ಯ, ಮಂದಿರ, ಆಶ್ರಮ ಗಳು ಇಂದು ನಿಮ್ಮ ಧರ್ಮದ ಪ್ರಚಾರಕ್ಕಾಗಿ/ತಿಳುವಳಿಕೆಗಾಗಿ/ಉಳಿವಿಗಾಗಿ ಹೋರಾಡುತ್ತಿವೆ
ಒಂದು ಧರ್ಮದ ಮೇಲಿನ ಅನಾದರವೇ ಇನ್ನೊಂದು ಧರ್ಮದೆ ಬಗ್ಗೆ ಆಸಕ್ತಿ ಹುಟ್ಟಿಸುತ್ತದೆ.ಅವರು ನಿಮ್ಮ ಧರ್ಮದ ಮೇಲೆ ಆಸಕ್ತಿ ಕಳೆದುಕೊಳ್ಳುವ ಹಾಗೆ ನೀವು ನಡೆದುಕೊಂದಿದ್ದೀರಿ ಎಂದಾಯಿತಲ್ಲವೇ ? ಕಾಲಾತೀತ ವ್ಯಕ್ತಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೇ ತಮ್ಮ ಕೊನೆಯ ದಿನಗಳಲ್ಲಿ ಬೇರೆಡೆಗೆ ಸೆಳೆತಕ್ಕೊಳಗಾದರು ಎಂದರೆ ಏನು ಕಾರಣ ? ಆಗೆಲ್ಲಿ ನನ್ನ ಸೊಲ್ಲಿತ್ತು ?
ಬೇಡವೆನಿಸಿದರೂ ನಿಮಗೊಂದು ನಗ್ನ ಸತ್ಯ ಹೇಳುತ್ತೇನೆ ತುಳಿತಕ್ಕೊಳಗಾದವರನ್ನು, ದೀನರು, ದಲಿತರನ್ನು ನೀವು ಎಂದಾದರೂ ಸಮಾನ ದೃಷ್ಟಿಯಿಂದ ನೊಡಿದ್ದರೆ ಈ ಪ್ರಸಂಗವೇ ಉದಯಿಸುತ್ತಿರಲಿಲ್ಲ, ಎಲ್ಲಿಯವರೆಗೂ ನೀವು ಅವರನ್ನು ಸಮಾನರಂತೆ ಕಾಣುವುದಿಲ್ಲವೋ ಅಲ್ಲಿಯವರೆಗೂ ನಿಮಗೆ ಈ ಪಿಡುಗು ತಪ್ಪಿದ್ದಲ್ಲ, ಮತ್ತು ಇದಕ್ಕೆ ನಾನೇ ಬರಬೇಕೇಂದೇನಿಲ್ಲ.

ಪ್ರತಿಯೊಂದು ವ್ಯವಸ್ಥೆಗೂ ತನ್ನದೇ ಆದ ಒಳ್ಳೆಯ/ಕೆಟ್ಟ ಮಗ್ಗಲುಗಳಿರುತ್ತವೆ, ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿರಲು ಪ್ರಯತ್ನಿಸಬೇಕು. ಒಂದು ಆನೆ ನಮಗೆ ದಕ್ಕುತ್ತದೆ ಎನ್ನುವುದಾದರೆ, ದಾರಿಯಲ್ಲಿ ಬರುವಾಗ ಒಂದು ಇರುವೆ ಸತ್ತರೆ ನಾವದನ್ನು ಸಹಿಸಿಕೊಳ್ಳಬೇಕು. ಇಲ್ಲವಾದರೆ ನಮಗೆ ಆನೆಯ ಕೆಲಸದ ಉಪಯೋಗ ಸಿಗುವುದಿಲ್ಲ. ಆನೆ ಹೊರುವ ಭಾರವೇ ಬೇರೆ ಇರುವೆ ಹೊರುವ ಭಾರವೇ ಬೇರೆ.

ಮಾತು ಮಾತಿಗೆ ಅಷ್ಟೊಂದು ಆಳವಾದ ಬೇರುಗಳಿನ್ನೊಟ್ಟುಕೊಂಡಿದ್ದೇವೆ ಎನ್ನುವವರು, ನನ್ನ ಒಂದು ಆಗಮನಕ್ಕೆ ಇಷ್ಟೊಂದು ರೋದಿಸುತ್ತಿರುವುದು ಹಸ್ಯಾಸ್ಪದವೆನಿಸುತ್ತಿದೆ.ಹೊಸತನಕ್ಕೆ ಹೊಂದಿಕೊಳ್ಳದಿರುವ ಕುಬ್ಜ ಮನಸುಗಳು ಮಾಡುವ ಹೇಯ ಆಪಾದನೆಗಳಿವು.

ಮತ್ತು ನನ್ನ ಸದ್ಯದ ಹೆಸರು: "ಸಾಫ್ಟ್ ವೇರ್ ಇಂಜಿನಿಯರ್"
ನನ್ನ ದೇಶ: ಅಮೇರಿಕ

ಮಾನಸವಾಣಿಯಿಂದ,
-ಚಂದ್ರು







Monday, August 3, 2009

ಧರ್ಮಾವಲೋಕನ

ಧರ್ಮಾವಲೋಕನ
ಧರ್ಮ ಎಂದರೇನು ?
ಮನುಷ್ಯನನ್ನು ಒಂದು ರಚನಾತ್ಮಕವಾದ ಕಟ್ಟಳೆಗೊಳಪಡಿಸಿ ಒಂದು ಸ್ವಾಸ್ಥ್ಯ, ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ನಡೆಸುವುದು, ಮತ್ತು ಅದಕ್ಕೆಂದೇ ನಾವು ಕೆಲವೊಂದು ರೀತಿ, ನೀತಿ ಗಳೆಂಬ ಲಕ್ಷ್ಮಣ ರೇಖೆ ಗಳನ್ನು ಹಾಕಿಕೊಳ್ಳುವುದು. ಆದರೆ ಇಂದಿನ ಯುವ ಜನಾಂಗ ಸ್ವಾತಂತ್ರ್ಯದ ಹೆಸರಿನಲ್ಲಿ ಆ ಕಟ್ಟಳೆಗಳನ್ನು ಗೌಣವಾಗಿಸಿದೆ, ದುರಂತವೆಂದರೆ ನಮ್ಮೆಲ್ಲರನ್ನು ಕಾಪಾಡಬೇಕಿದ್ದ ಧರ್ಮವೇ ತನ್ನ ಅಸ್ತಿತ್ವಕ್ಕಾಗಿ ಪ್ರಯತ್ನಿಸುತ್ತಿದೆ, ಹೆಣಗಾಡುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ ಧರ್ಮದ ಸ್ಥಿತಿ, ನೀರ ಸುಳಿಯಲ್ಲಿ ಸಿಕ್ಕು ಜೀವನ್ಮರಣದ ನಡುವೆ ಹೋರಾಡಿ, ವ್ಯರ್ಥವಾಗಿ ಮರಣಶಯ್ಯೆಯನ್ನು ನೆನೆದು ರೋದಿಸುತ್ತಾ ಚಡಪಡಿಸುತ್ತಿರುವ ಮನುಷ್ಯನ ಅವಸ್ಥೆಯಂತಾಗಿವೆ.

ನಮ್ಮ ಸನಾತನ ಧರ್ಮದ ಬಗ್ಗೆ ನಾವು ಕಿಂಚಿತ್ತಾದರೂ ಮುಂದಿನ ಪೀಳಿಗೆಗೆ ತಿಳಿಯಪಡಿಸಿದ್ದೇ ಆದರೆ, ಧರ್ಮಕ್ಕೆ ಇಂದು ಎದುರಾಗಿರುವ ಪರೀಸ್ಥಿತಿಯನ್ನು ಎದುರಿಸಬಹುದಿತ್ತು.ಧರ್ಮದ ಮೇಲಾಗುತ್ತಿರುವ ನಿರಂತರ ಅತ್ಯಾಚಾರವನ್ನು ತಡೆಯಬಹುದಿತ್ತು.

ಈ ಹೊತ್ತಿನಲ್ಲಿ ನಿಮಗೊಂದು ಪ್ರಾತ್ಯಕ್ಷಿಕೆ ಕೊಡಬೆಕೆಂದೆನಿಸುತ್ತಿದೆ :
ಈ ಕೆಳಗಿನ ರೀತಿಯ ಪಾಠಗಳನ್ನು ನಮ್ಮ ಘನ ಸರಕಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇಟ್ಟಿದೆ

ಡೆವಿಡ್ ಸ್ಟ್ಯಾನ್ಲಿ ಪೇಟೆಗೆ ಹೊಗುವಾಗ ದಾರಿಯಲ್ಲಿ ಅವನಿಗೆ ಪೀಟರ್ ಕ್ರಿಸ್ಟೊಫರ್ ಎಂಬ ತನ್ನ ಹಳೆಯ ಕಾಲದ ಮಿತ್ರ ಸಿಗುತ್ತಾನೆ... ಹೀಗೆ ಕಥೆ ಮುಂದುವರಿಯುತ್ತದೆ
ಕೊನೆಗೆ ಒಂದು ಪ್ರಶ್ನೆ : ಡೆವಿಡ್ ಪೇಟೆಗೆ ಹೋಗುವಾಗ ದಾರಿಯಲ್ಲಿ ಯಾರು ಸಿಗುತ್ತಾರೆ ?

ಇದೇ ಕಥೆಯನ್ನು :
ಲಕ್ಷ್ಮಣ ಪೇಟೆಗೆ ಹೊಗುವಾಗ ದಾರಿಯಲ್ಲಿ ಅವನಿಗೆ ಕೃಷ್ಣ ಎಂಬ ತನ್ನ ಹಳೆಯ ಕಾಲದ ಮಿತ್ರ ಸಿಗುತ್ತಾನೆ.. ಹೀಗೆ ಮುಂದುವರಿಸಿ
ಪ್ರಶ್ನೆ : ಲಕ್ಷ್ಮಣ ಹೋಗುವಾಗ ದಾರಿಯಲ್ಲಿ ಯಾರು ಸಿಗುತ್ತಾರೆ ?

ಎಂದು ಕೇಳಿದ್ದರೆ ಏನಾಗುತ್ತಿತ್ತು ? ಮಗುವಿನ ಕಲಿಕೆಗೂ ಇದು ಹತ್ತಿರವಿರುತ್ತಿತ್ತು. ಮೇಲ್ನೊಟಕ್ಕೆ ನಿಮಗೆ ಇದರಲ್ಲೇನಿದೆ ? ಎಂದು ಅನ್ನಿಸಬಹುದು ಆದರೆ ಎಲ್ಲ ಅಡಗಿರುವುದು ಈ ಹಂತದಿಂದಲೇ, ಇದೂ ಕೂಡ ಧರ್ಮದ ಮೇಲಿನ ಅತ್ಯಾಚರವೆಂಬ ವಿರಾಟ್ ರೂಪದ ಒಡಲ ಕುಡಿ, ವ್ಯವಸ್ಥಿತ ಸಂಚು, ಹೇಗೆಂದರೆ:

ಒಂದು ಮಗು ತನ್ನ ಪ್ರಾಥಮಿಕ ಹಂತವನ್ನು ಮೇಲಿನಂತೆ ಪೂರ್ಣಗೊಳಿಸುತ್ತದೆ, ಈ ಘಟ್ಟದಲ್ಲಿ ಮಗುವಿನ ಮನಸ್ಸು ಬಿಳಿ ಹಾಳೆಯಿದ್ದ ಹಾಗೆ ಅದರಲ್ಲಿ ನಾವು ಏನು ಬರೆಯುತ್ತೇವೆಯೋ ಅದೇ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮಾಧ್ಯಮಿಕ ಹಂತದ ವೇಳೆಗೆ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ,ಕೆಲಸದ ಒತ್ತಡ ದಲ್ಲಿ ಮಗುವಿನ ಓದಿಗೆ ಸಹಾಯ ಮಾಡಲು ಸಮಯ ಸಿಗುವುದಿಲ್ಲ ಎಂದು ಹುಸಿ ನೆಪ ಹೇಳಿ ಯಾವುದಾದರೂ ಬೋರ್ಡಿಂಗ್ ಶಾಲೆಗೆ ಸೇರಿಸುತ್ತೇವೆ, ಇನ್ನು ಕಾಲೇಜ್ ಮುಗಿದ ಮೇಲೆ ಜಾಗತಿಕರಣದ ಕಬಂಧ ಬಾಹುಗಳು ಅವನನ್ನು ಸೆಳೆದು ತನ್ನ ಕಪಿಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದು ಕೊಳ್ಳುತ್ತದೆ, ಮೆಟ್ರೊಪೊಲಿಟನ್ ಸಿಟಿ ಗಳಲ್ಲಿ ಜೀವನ ಪ್ರಾರಂಭ. ಇವನೇ ಮುಂದೆ ಧರ್ಮನಿರಪೇಕ್ಷರಿಗಳು ಎಂಬ ಮಹಾಸಂಸ್ಥಾನದ ಅಧಿಪತಿಯಾಗುತ್ತಾನೆ. ಸಲಿಂಗ ರತಿ ಯಂತಹ "ಸಂಕಟ" ಹರಿಯುವ ವ್ಯಾಧಿಗಳನ್ನು, ವಿಕೃತಿಗಳನ್ನು "ಸಂತೋಷ" ಕೊಡುವ ಆಯ್ಕೆಗಳೆಂದು ವಾದಿಸುತ್ತಾನೆ. ಸ್ವ್ಯಾತಂತ್ರಕ್ಕೂ ಸ್ವೆಚ್ಚೆಗೂ ವ್ಯತ್ಯಾಸ ಗೊತ್ತಿರದೇ ಮನುಷ್ಯ ಮೃಗದಂತಾಗುತ್ತಾನೆ.


ಇವೆಲ್ಲ ಅನಾರೋಗ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಶುರುವಾಗುತ್ತವೆ ಎಂದಾಯಿತು ಹಾಗಾದರೆ ಶಿಕ್ಷಣ ಎಂದರೇನು ?
ಜೀವನದಲ್ಲಿ ಅಂಧಕಾರವನ್ನು ಹೊಡೆದೋಡಿಸಿ ಜಾಗೃತಿಯ ಬೆಳಕನ್ನು ಹೊತ್ತಿಸುವುದು. ಅಂದರೆ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದು(ತಮಸೋಮ ಜ್ಯೋತಿರ್ಗಮಯ). ಸಮಾಜಕ್ಕೆ ಜಾವಾಬ್ದಾರಿಯುತ ವ್ಯಕ್ತಿಯನ್ನು ಕೊಡುವ ಜಾವಾಬ್ದಾರಿಯುತ ಕೆಲಸ. ಇಂತಹ ಅಮೃತವುಣಿಸುವ ಕೆಲಸವೇ ಇಂದು ನಮ್ಮನ್ನಾಳುವ ಕೋಡಗಗಳ ಒಣ ಪಿತೂರಿಗಳಲ್ಲಿ ಸಿಕ್ಕಿ ಸಮಾಜಮುಖಿಯಾಗಿರದೇ ಬರೀ ಡಿಗ್ರೀ ತೆಗೆದುಕೊಳ್ಳುವ ಒಂದು ಅರ್ಥಹೀನ ವ್ಯವಸ್ಥೆಯಾಗಿ ಗಬ್ಬೆದ್ದು ಹೋಗಿಬಿಟ್ಟಿದೆ. ಪುಸ್ತಕದಲ್ಲಿ ಒಂದು ದೇವರ/ವ್ಯಕ್ತಿಯ ಹೆಸರನ್ನು ಇಟ್ಟರೂ ಅನುಮಾನದಿಂದ ನೋಡಬೇಕಾಗಿದೆ. ಒಂದೊಂದು ಸರಕಾರ ಬಂದಾಗಲೂ ಪಠ್ಯ ಪುಸ್ತಕ ಪರಿಷ್ಕರಣೆಯಾಗುತ್ತಿರುತ್ತದೆ, ನೈಜ ಉದ್ದೇಶವೇ ಮರೆಯಾಗಿ ಒಳಸಂಚು ಆವರಿಸಿಕೊಂಡಿದೆ. ಶಿಸ್ತಿನ ಹೆಸರಿನಲ್ಲಿ ತಲೆಗೆ ಹೂಗಳನ್ನೂ, ಕೈಗೆ ಬಳೆಗಳನ್ನೂ, ಹಣೆಗೆ ಕುಂಕುಮವನ್ನೂ ಕೆಲವೊಂದು "ಶಾಂತಿಪ್ರಿಯ" ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ನಿಷೇಧಗೊಂಡಿವೆ. ಎಂದಿನಂತೆ ಸರಕಾರದ ನಡೆ ಮಾತ್ರ ಜಾಣ ಕುರುಡು, ಸೊಲ್ಲೆತ್ತಿದರೆ ನೀವು ಕೋಮುವಾದಿ. ಇಂದಿನ ಶಿಕ್ಷಣದಲ್ಲಿ ನಮ್ಮ ಶಾಲಾ ಜೀವನದ ಇಷ್ಟು ದಿನಗಳಿಂದ ಹಿಡಿದು ಇಂದಿನವರೆಗೆ ಯಾರಾದರೂ ಶಿಕ್ಷಣದ ಉದ್ದೆಶದ ಬಗ್ಗೆ ಯೋಚನೆ ಮಾಡಿದ್ದೆವೆಯೇ? ಇಲ್ಲ ಯಾಕೆಂದರೆ ಅದು ನಮ್ಮನ್ನು ಯೊಚನೆಗೊಳಪಡಿಸುವಷ್ಟು ಶಕ್ತಿಶಾಲಿ ಯಾಗಿ ಇರಲೇ ಇಲ್ಲ.

ಒಬ್ಬೊಬ್ಬ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಒಬ್ಬೊಬ್ಬ ದೇವರನ್ನು/ವ್ಯಕ್ತಿಯನ್ನು ರತ್ನಗಂಬಳಿ ಹಾಸಿ ಬರಮಾಡಿಕೊಳ್ಳುತ್ತವೆ, ಮತ್ತು ಆಯಾ ದೇವರ (ಧರ್ಮದ) ಪ್ರತಿಷ್ಠಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ ಯಾಕೆಂದರೆ ಹಾಗೆ ಮಾಡುವುದರಿಂದ ಅವರಿಗೆ ಹೇರಳ ವಾದ "ಪ್ರಸಾದ" ಪ್ರಾಪ್ತಿಯಾಗುತ್ತಿರುತ್ತದೆ. ಈ ಪ್ರಸಾದದ ಫಲವೇ ಪಠ್ಯ ಪುಸ್ತಕಗಳ ತಿರುಚುವಿಕೆ. ಅವುಗಳ ಫಲವಾಗಿಯೇ ದೆಶಭಕ್ತ ವೀರ್ ಸಾವರ್ಕರ್ ಕೆಲವರಿಗೆ ಭಯೋತ್ಪಾದಕನಾದ, ಸುಭಾಷ್ ಚಂದ್ರ ಬೋಸ್ ಹೇಡಿ ಎಂದು "ಎಡ"ತಳ್ಳಲ್ಪಟ್ಟರೆ, ಟಿಪ್ಪು ದೇಶಭಕ್ತನಲ್ಲ ಎಂದು ಕೆಲವರಿಂದ "ಬಲ"ತಳ್ಳಲ್ಪಟ್ಟ. ಎಸ್. ಎಲ್. ಬೈರಪ್ಪ ರಂತಹ ವಸ್ತುನಿಷ್ಠ ಕಾದಂಬರಿಕಾರರು ಕೋಮುವಾದಿಗಳಂತೆ ಕಂಡು ಅವಕೃಪೆಗೊಳಗಾದರು, ಮುಂದಿನ ದಿನಗಳಲ್ಲಿ ಇದು ವಿಪರೀತಕ್ಕೆ ಹೋದರೂ ಅಚ್ಚರಿಪಡಬೇಕಿಲ್ಲ.

ಹಾಗಾದರೆ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿರುವ ಆ ದೆವರು ಎಲ್ಲಿದ್ದಾನೆ ??
ಮಂದಿರ ? ಮಸೀದಿ ? ಮಠ ? ಚರ್ಚ್ ? ತೀರ್ಥಕ್ಷೆತ್ರ ? ಬೆಟ್ಟ ? ಬಯಲು ? ಎಲ್ಲೂ ಇಲ್ಲ. ಹೋಗಿ ನೋಡಿ ಬಡವರ ಗುಡಿಸಲಲ್ಲಿದ್ದಾನೆ, ದೀನರ ದಲಿತರ ಹೃದಯದಲ್ಲಿದಾನೆ, ದುಃಖಿತರ ಆರ್ತಧ್ವನಿಯಲ್ಲಿದ್ದಾನೆ, ಬೇರೆಯವರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ/ಕನಿಕರಪಡುವವರ ಕರುಳಲ್ಲಿದ್ದಾನೆ. ಇಂದಿನ ಯಾವ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಪ್ರಾಮಾಣಿಕ ಕಳಕಳಿಯಿಂದ ಹೇಳಿಕೊಟ್ಟಿದ್ದಾರೆ ? ಎಲ್ಲೂ ಇಲ್ಲ. ಮಾನವನ ಬದುಕಿನ ಬಹುದೊಡ್ಡ ದುರಂತವೇನು ಗೊತ್ತೆ ? ಅವನು ಚಂದ್ರಲೋಕಕ್ಕೆ ಹೋಗಿಬಂದಿದ್ದಾನೆ, ಆದರೆ ಅಕ್ಕ-ಪಕ್ಕದ ಮನೆಯವರನ್ನು ಅರಿಯಲು ಮರೆತಿದ್ದಾನೆ, ನೆರೆ ಹೊರೆಯವರ ಬದುಕಿಗೆ ಸ್ಪಂದಿಸುವುದನ್ನೇ ಮರೆತಿದ್ದಾನೆ ..

ಸರಿರಾತ್ರಿಯವರೆಗೂ ಪಬ್ ಗಳಿಗೆ ಅನುಮತಿ ಕೊಡಿ ಎಂದೂ, ಸಲಿಂಗ ರತಿಯನ್ನು ಕಾನೂನಿಕರಣ ಗೊಳಿಸಿ ಎಂದೂ ಘನಾಂದಾರಿ ಹೋರಾಟ ಮಾಡುತ್ತಿರುವ ಮುಕುಟಮಣಿಗಳನ್ನು ಬೇಕಾದರೆ ಹೋಗಿಕೇಳಿ, ಅವರಲ್ಲಿ ಒಬ್ಬ ಬಾಜೀರಾಯ(ಯ್ತಿ) ನಾದರೂ ತುಂಬಿದ ಮನೆಯಲ್ಲಿ ಬೆಳೆದು ಬಂದಿದ್ದಾರೆಯೇ ಎಂದು,ಅವರಪ್ಪನಾಣೆಗೂ ಯಾರೂ ಇರುವುದಿಲ್ಲ, ಎಲ್ಲರೂ ಸಮಯ ಕಳೆಯಲಿಕ್ಕೆ ತಮ್ಮ ನಾಯಿಗಳು, ಟೆಡ್ಡಿ ಬೆರ್ ಗಳನ್ನು ನೆಚ್ಚಿಕೊಂಡವರೆ. ಅದಕ್ಕೇ ಅವರಿಗೆ "ಸಮಯ" ಕಳೆಯಲಿಕ್ಕೆ ಯಾರಾದರೇನು ಎಂಬ ವಿಕೃತ ವಿಚಾರ ಎಲ್ಲಿಂದಲೋ (ತಲೆಯಿಂದಂತೂ ಬರಲು ಸಾಧ್ಯವಿಲ್ಲ ಬಿಡಿ) ಬಂದು ಬಿಟ್ಟಿದೆ. ಊಹುಂ .. ಅವರಿಗೆ ಅನುಕರಣೆಗೆ ಪಾಶ್ಚಾತ್ಯರೇ ಆಗಬೇಕು, ನಮಗೆ ದೇವರ ವಿಗ್ರಹ ತೊಳೆದ ನೀರು ಮತ್ತು ಕಲ್ಪವೃಕ್ಷ ತೆಂಗಿನ ನೀರು ತೀರ್ಥವಾದರೆ, ಅವರಿಗೆ ಪಾಶ್ಚ್ಯಾತ್ಯರ ಮೂತ್ರವೇ ತೀರ್ಥವೆನ್ನುವಷ್ಟರ ಮಟ್ಟಿಗೆ ಅವರು ಪಾಶ್ಚ್ಯಾತ್ಯರನ್ನು ಅನುಕರಿಸುತ್ತಾರೆ.ಎಲ್ಲರೂ ಧರ್ಮ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದೇ ತಿಳಿದಿದ್ದಾರೆ, ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಧರ್ಮವೆಂಬ ವಿಶಾಲ ಆಲದ ಮರದ ಬೇರುಗಳನ್ನು ನಾವೆಷ್ಟು ಸಡಿಲಿಸುತ್ತಿದ್ದೇವೆ, ತನ್ಮೂಲಕ ಎಂತಹ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ ಎಂದು ವಿಚಾರಿಸುವ ವ್ಯವಧಾನ ಮಾತ್ರ ಯಾರಿಗೂ ಇಲ್ಲ(ನೆನಪಿರಲಿ: ನೀವು ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಿಮ್ಮನ್ನು ರಕ್ಷಿಸುತ್ತದೆ).

ಜನ್ಮದಿನದಂದು, ಗೆಳೆಯರ ದಿನದಂದು ಹಾಗು ಮುಂತಾದ ದಿನಗಳಂದು ಹಾರೈಕೆಗೆಂದು ಪುಟಗಟ್ಟಲೇ ಮೆಸ್ಸೆಜ್ ಗಳನ್ನೂ, ಆರ್ಕುಟ್ ನಲ್ಲಿ ಸ್ಕ್ರ್ಯಾಪ್ ಗಳನ್ನೂ, ಮೇಲ್ ಗಳನ್ನೂ ಕಳಿಸುವ ನಾವು, ಎದುರಿಗೆ ಸಿಕ್ಕಾಗ ಒಂದು ಪ್ರೀತಿ ತುಂಬಿದ ನಗುವನ್ನೂ, ವಾತ್ಸಲ್ಯದ ಮಾತನ್ನೂ ಆಡದೇ ಜನ್ಮಾಂತರದ ಶತ್ರುಗಳಿದ್ದಂತೆ ಇರುತ್ತೇವೆ. ಅಷ್ಟರಮಟ್ಟಿಗೆ ಯಾಂತ್ರಿಕವಾಗಿ ಬಿಟ್ಟಿದ್ದೇವೆ ನಾವು. ಊಟದ ಹೊತ್ತಿನಲ್ಲಿ ಪರಸ್ಥಳದ ಅನಾಮಿಕನೊಬ್ಬ ಎದುರಾದರೆ ಕುಶಲ ಸಮಾಚಾರ ವಿಚಾರಿಸಿ ಕೈಲಿದ್ದ ತಟ್ಟೆಯನ್ನು ಅತಿಥಿ ಗಳಿಗೆ ಸತ್ಕರಿಸಿ ಉಪಚರಿಸುವ ಸಂಸ್ಕೃತಿ ನಮ್ಮದು. ಅವರ ಸಂತೃಪ್ತಿಯಲ್ಲೇ ನಮ್ಮ ಸಮಾಧಾನ. ನಮ್ಮ ಹಿರಿಯರ ಈ ಆಚರಣೆಗಳೇ ಅವರನ್ನು ಅಷ್ಟೊಂದು ಪ್ರಭುದ್ಧರನ್ನಾಗಿ ಮಾಡಿರುವುದು ಮತ್ತು ಆರೋಗ್ಯಕರ ವಿಚಾರಗಳಿಂದಲೇ ಅಷ್ಟೊಂದು ದೀರ್ಘಾಯುಷಿ ಗಳಾಗಿರುವುದು.

ಹಿಡಿಮುಷ್ಠಿಯಷ್ಟಿರುವ ಹೃದಯದಲ್ಲಿ ಸಾಸಿವೆಯಷ್ಟಾದರೂ ನಮಗೆ ನಮ್ಮ ಸಂಸ್ಕ್ರುತಿಯ ಬಗ್ಗೆ ಗೌರವ ವಿರಬಾರದೆ ?? ಭವ್ಯ ಭಾರತದಲ್ಲಿಯ ಭವಿಷ್ಯದ ಪೀಳಿಗೆಯನ್ನು ನೆನೆದರೆ ನಿಜಕ್ಕೂ ಕಣ್ಣು ಕತ್ತಲು ಗುಡಿಸದಂತಾಗುತ್ತದೆ. ಪರೀಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯ ಅದೇ ಪಠ್ಯ ಪುಸ್ತಕದಲ್ಲಿ ಒಂದು ಪ್ರಶ್ನೆ ಯಿರುತ್ತದೆ,
ಭಾರತದಲ್ಲಿ ಇತ್ತೀಚೆಗೆ ನಾಮಾವಶೇಶ ಗೊಂಡ ಧರ್ಮ ಯಾವುದು ??

ಉತ್ತರಿಸಲು ನಾವಿರುವುದಿಲ್ಲ ನಿಜ, ಆದರೆ ಆ ಪ್ರಶ್ನೆಗೆ ಕಾರಣೀಭೂತರು ಮಾತ್ರ ನಾವೆ...

ನಾನು ಉಲ್ಲೇಖಿಸಿರುವ ಕೆಲವೊಂದು ಮಾತುಗಳು ನಿಮಗೆ ಅಪ್ರಭುದ್ಧವೆಂದೂ, ಸಿನಿಕತನವೆಂದೂ ಗೋಚರಿಸಬಹುದು, ಗೋಚರಿಸುತ್ತವೆ ಕೂಡ ಯಾಕೆಂದರೆ ನಮ್ಮದೂ ಯುವ-ಪೀಳಿಗೆಯೇ ಅಲ್ಲವೇ ?? ವರ್ತಮಾನದ ಹಂಗಿನಲ್ಲಿ ಮಾತ್ರ ಹಾರಬಯಸುವ ಹಕ್ಕಿಗಳು ನಾವು...ಭವಿಷ್ಯವನ್ನು ಪಾಪಪ್ರಜ್ನೆಗೆ ಮೀಸಲಿಡೋಣ ಬಿಡಿ.

ಮಾನಸವಾಣಿಯಿಂದ
-ಚಂದ್ರು
csbyadgi@gmail.com

"ಪಂಚಮ"ವೇದಿನಿ

          ಬೆಳ್ಳಕ್ಕಿ ಕೂಡ ಬೆರಗಾಗಿ ನೋಡುವ ಬೆಳ್ಳನೆಯ ಚೆಲುವೆಯೊಬ್ಬಳು, ಸರಿರಾತ್ರಿಯಲಿ ತಿಳಿಮೋಡದೊಳಗಿನ ಮಿನುಗು ನಕ್ಷತ್ರದಾ "ನಗು"ವ ಕಣ್ತುಂಬಿಸಿ, ಸವಿ"ಮಾತಿ"ನಾ ಲಹರಿಯನು ಮನದೊಳಗೆ ನುಡಿಸಿ, ಲಘು "ಸ್ಪರ್ಶ"ದಾ ಮೋಡಿಯಲಿ ನವಿರೇಳಿಸಿ, ಹೂ "ಮುತ್ತಿ"ನಾ ಜೋಮಿನಲಿ ತೇಲಿಸಿ, ಬಾಣದ "ನೋಟ"ವನು ಎದೆಗೆರಚಿ, ಯುವಕರಿಗೆಲ್ಲ ಕಿಡಿ ಹಚ್ಚಿ ಹೊತ್ತಿಸುವ ಪಂಚಮೃತಗಳನ್ನು ನಾ ಕಂಡಂತೆ ವರ್ಣಿಸಿದಾಗ...       

       "ಪಂಚಮ"ವೇದಿನಿ      
ಒಂದು ನಗು:
            ಬೆಳದಿಂಗಳೇ ಬಾಡಿ ಕಳೆಗುಂದಿದಂತಾಯ್ತು
            ಕ್ಷೀರಸಾಗರವದು ಧುಮ್ಮಿಕ್ಕಿ ಹರಿದಂತಾಯ್ತು
            ಮಲ್ಲಿಗೆಯ ರಾಶಿಯನು ಧರೆಗೆರಚಿದಂತಾಯ್ತು
            ನಿನಗಿಂತ ಸುಂದರಿ, ನಿನ್ನ ನಗುಮುಖದ ಕಿನ್ನರಿ
            ನನಗಂತೂ ನೋಟವದು ಚಿರನೂತನವೇ ಸರಿ   
            ಹೊರಬಂದು ನಕ್ಕೀಯೆ ಇರುಳು ಹೊತ್ತಿನಲಿ  
            ನೇಸರನೆದ್ದುಬಿಟ್ಟಾನು ಬೆಳಗಾಯಿತೆಂಬ ಭ್ರಮೆಯಲಿ 

ಒಂದು ಮಾತು:
            ಸಿಹಿ ಸಂಜೆಯಲಿ ಇಂಪಾದ ಗಾನಮ್ರುತ ಪಠಣ
            ಶಾಂತ ಸರೋವರದಲಿ ತಂಪಾದ ಪಯಣ   
            ಹಿತವಾದ ಮನಸ್ಸಿಗೆ ಸಿಹಿಯಾದ ಸುಕ್ಷಣ 
            ಮುಂಜಾನೆ ಮಂಜಲಿ ಹಸಿರಾದ ಹಾಸಲಿ 
            ಚಂಚಲಿಸಿ ನರ್ತಿಸಿತು ಮನಸೆಂಬ ನವಿಲು       
            ಸುಖ ನುಡಿವ ಶಕುನದ ಹಕ್ಕಿ, ಇಣುಕಾಡಿ 
            ಆಲಿಸಿತು ನಿನ್ನೀ ಮಧುರ ಕಂಠದ ಉಯಿಲು   

ಒಂದು ಸ್ಪರ್ಶ:
            ಸಂಜೀವಿನಿ ಮಾತ್ರೆ ಬಳಲಿದಾ ಭಾವನೆಗಳಿಗೆ    
            ಚೈತನ್ಯದಾ ಚಿಲುಮೆ ಸೊರಗಿದಾ ಮನಸಿಗೆ 
            ಮಾತೆಲ್ಲ ಮರೆಯಾಯ್ತು, ಮನಸೆಲ್ಲ ಸೆರೆಯಾಯ್ತು
            ನೀಳುಸಿರು ಒಳಹೊಗಿ ನರವೆಲ್ಲಾ ಬಿಗಿಯಾಯ್ತು 
            ಆಂತರ್ಯದಾಳದಲಿ ಸಂಭ್ರಮದ ಹಕ್ಕಿ ಗರಿಬಿಚ್ಚಿ ಹರ್ಷಿಸಿತು   
            ಭಾವನೆಗಳ ಮಹಾಪೂರ ಕಟ್ಟೆಯೊಡೆದು ಹೊರಚೆಲ್ಲಿತು 

ಒಂದು ಮುತ್ತು: 
            ರೋಮಾಂಚನದ ಪರೀಧಿ ಎಲ್ಲೆ ಮೀರಿ ಹರಿದಾಡಿತು
            ಸುವಾಸನೆಯ ಸೊಡರು ಘಮಘಮಿಸಿ ಮತ್ತೇರಿಸಿತು     
            ಚೆಲುವೆಲ್ಲ ಬಸಿದ ಸಿಹಿಜೇನ ಸವಿದು
            ಅಧರ್ರಾಮೃತವು ಕಂಪಿಸಿತು ಸವಿತುಟಿಯ ಮೇಲೆ 
            ನರ ನಾಡಿ ಬಿಸಿಯುಕ್ಕಿ, ಧಮನಿಗಳು ರಭಸವಿಕ್ಕಿ
            ನಶೆಯೇರಿದಾ ಮನಸಿನಾ ತುಂಬೆಲ್ಲ ಅಮಲೇ    

ಒಂದು ನೋಟ:
           ವೈರಾಗಿಯೂ ಕವಿಯಾಗಿ ಪ್ರೇಮ ಕವನ ಬರೆದಾನು
           ನೊಟದಾ ಮೋಡಿಗೆ ಮರುಳಾಗಿ ಮೊರೆಯಿಟ್ಟಾನು 
           ನೆಟ್ಟನೆಯ ನೋಟಕೆ ಶಿಲೆಯಲ್ಲಾ ಜೀವತಳೆಯಿತು
           ಕಾನನದ ಗಿಡವೆಲ್ಲ, ಹಸಿರಿಂದ ಚಿಗುರೊಡೆಯಿತು
           ತಪಗೈವ ಯೋಗಿ ತಪಭೋಗ ತ್ಯಜಿಸಿ
           ಚೆಲುವಯನರಿಸುತ ಹೊರಟ ನಿನ್ನ ಪೂಜಿಸಿ    


ಮಾನಸವಾಣಿಯಿಂದ,
-ಚಂದ್ರು
csbyadgi@gmail.com

Thursday, July 9, 2009

"ದಿವ್ಯ" ತರಂಗಿಣಿ

  "ದಿವ್ಯ" ತರಂಗಿಣಿ 

ಹುಣ್ಣಿಮೆಯ ಚಂದ್ರನ ನೊಡಿ 
ಸಾಗರದ ಅಲೆಗಳ ತಲ್ಲಣ 
ಒಲವಿನ ಚೆಲುವೆಯ ಕುಡಿ ನೋಟಕೆ
ಮನಸಿನ ಭಾವನೆಗಳ ತಲ್ಲಣ

ಕೋಗಿಲೆಯ ಗಾನದ ಇಂಪಿಗೆ
ಚೈತ್ರದ ಹಸಿರೇ ಸ್ಪೂರ್ತಿ
ನನ್ನ ಸುಂದರ ನಾಳೆಗಳ ಕಲ್ಪನೆಗೆ 
ನಿನ್ನ ನೆನಪುಗಳೇ ಸ್ಪೂರ್ತಿ 

ಇಬ್ಬನಿಯಲಿ ಮಿಂದಿರುವ ಎಲೆಗೆ  
ಮುಂಜಾನೆ ಸೂರ್ಯನ ಕಿರಣವೇ ಮುಕ್ತಿ  
ಪ್ರೀತಿ ನಶೆಯಲಿ ತೇಲಾಡುವ ನನಗೆ
ನಿನ್ನ ಪ್ರೀತಿಯ ಸಮ್ಮತಿಯೇ ಮುಕ್ತಿ 

ಬಳಲಿದ ಮುಸ್ಸಂಜೆ ಸೂರ್ಯನಿಗೆ  
ತಾಯಿ ಮಡಿಲಲಿ ಐಕ್ಯದ ಬಯಕೆ 
ಇರುಳು ಬೆಳಕಲೂ ನಿನ್ನ ಚೆಲುವ 
ಕಾಂತಿಯನು ಮನಕೆ ನೋಡುವ ಬಯಕೆ

ಮಾನಸವಾಣಿಯಿಂದ,
-ಚಂದ್ರು 
csbyadgi@gmail.com








Tuesday, July 7, 2009

ಚಂದನದ ಗೊಂಬೆ

ಹೊಸದಾಗಿ ಆಫೀಸಿಗೆ ಬೊಗಸೆ ಕಣ್ಣಿನ, ಚೆಲುವೆಯೊಬ್ಬಳು ಹಂಸನಡಿಗೆಯನ್ನೂ ನಾಚಿಸುವಂತೆ, ಹಾಲುಗಲ್ಲದ, ಗುಳಿಕೆನ್ನೆಯ ನಗುವಿನಿಂದ, ನಾಗರ ಜಡೆಯಲಿ ಮಲ್ಲಿಗೆಯ ಹೂಮುಡಿದು , ಮಿಂಚಿನ ಬಳ್ಳಿಯಂತೆ, ಕೋಲ್ಮಿಂಚಿನ ನೋಟದಿಂದ ಒಳಬಂದಾಗ ನಮ್ಮ ನಿಮ್ಮೆಲ್ಲರ ಮನಸ್ಸಿನ ಮಾತುಗಳು, ತಳಮಳಗಳು, ಬಯಕೆಗಳು ಏನಿರಬಹುದು ????


"ಚಂದನದ ಗೊಂಬೆ"

ಯಾವ ಬತ್ತಿದ ಮನದ ಚಿಗುರಿಗೆ ನೀರೆರೆದು,
ಯಾರ ಸವಿಗನಸು ಈಡೆರಿಸುವ ಆಸೆಯಲಿ ಬಂದೆ ?

ಯಾವ ಸಹ್ಯಾದ್ರಿ ಮಲೆಯ ಚಂದನದ ಚೆಲುವ ತಳೆದು,
ಯಾರ ಬಾಳಪುಟದಲ್ಲಿ ಸುವಾಸನೆಯ ಕಂಪು ಸೂಸಲು ಬಂದೆ ?

ಯಾವ ಮಲೆನಾಡ ಹೆಣ್ಣ ಮೈಬಣ್ಣ ಹೊದ್ದು,
ಯಾರ ಕಣ್ಣ ಬಿಂಬ ತುಂಬಿ ನಿದ್ದೆಗೆಡಿಸಲು ಬಂದೆ ?

ಯಾವ ಶಿಲಾ ಬಾಲಕೆಯ ಚೆಲುವ ಮೈದಳೆದು,
ಯಾರ ಹರೆಯದ ಪ್ರಾಯಕೆ ಕಿಡಿ ಹೊತ್ತಿಸಲು ಬಂದೆ ?

ಯಾವ ಕವಿಗೆ ಕಾವ್ಯ ರಚಿಸುವ ಸ್ಪೂರ್ತಿ ಸೆಲೆಯಾಗಿ,
ಯಾರ ಕಿವಿಗೆ ಇಂಪನಿಡುವ ಮಾಧುರ್ಯದ ನುಡಿ ಸೂಸಲು ಬಂದೆ ?

ಯಾವ ಬಾಳದಾರಿಯಲಿ ಹಿತವಾಗಿ ಜೊತೆನಡೆದು,
ಯಾರ ಸವಿಬದುಕಲಿ ಸಂಗಾತಿಯಾಗುವ ಬಯಕೆ ಮೂಡಿಸಲು ಬಂದೆ ?

ಮಾನಸವಾಣಿಯಿಂದ:
-ಚಂದ್ರು
csbyadgi@gmail.com

Tuesday, June 30, 2009

--:ಆಗುಂತಕನ ಆಡದ ಮಾತುಗಳು:--

ಮುನ್ನುಡಿ
ದೇಶ ಎಷ್ಟೇ ವೇಗವಾಗಿ ಬೆಳೆಯಲಿ, ಆಧುನಿಕತೆಯ ಆಕರ್ಷಣೆ ನಮ್ಮ ಮೆಲೆ ಎಷ್ಟೇ ಪ್ರಭಾವ ಬೀರಲಿ, ನಮ್ಮೆಲ್ಲರ ಆತ್ಮ/ಬೇರು ಇರುವುದು ಹಳ್ಳಿಗಳಲ್ಲಿ.ಅಲ್ಲಿ ಆಳವಾಗಿ ಬೇರೊರಿರುವ ಆಚರಣೆ, ನಂಬಿಕೆ, ಉತ್ಸವ, ಜಾತ್ರೆ, ಸುಗ್ಗಿ, ಹಬ್ಬಗಳಲ್ಲಿ. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಇವುಗಳ ಆಚರಣೆ ಕೇವಲ ಯಾಂತ್ರಿಕವಾಗಿದೆ.ನಿಜಕ್ಕೂ ಇದು ಆತಂಕಕಾರಿ ಹಾಗೂ ಅಷ್ಟೇ ಆಘಾತಕಾರಿ, ಜೊತೆಗೆ ಅನಿವಾರ್ಯ ಕೂಡ. ನಗರೀಕರಣದ ಪ್ರಭಾವದಿಂದ ಜೀವನದ ಸಂಧ್ಯಾಕಾಲದಲ್ಲಿ ಹಿರಿಯರ ಜೊತೆ ಇದ್ದು ಅವರ ಸೇವೆ ಭಾಗ್ಯವಿರದಂತಾಗಿದೆ, ಜೀವನಪೂರ್ತಿ ಗಾಣದ ಎತ್ತಿನಂತೆ ದುಡಿದು ಹೈರಾಣಾಗಿರುವ ಅವರಿಗೆ ಈಗ ಬೇಕಾಗಿರುವುದು ನಮ್ಮ ಪ್ರೀತಿಯ ಆಸರೆ. ಇದನ್ನು ನಾನು ಹಿಂದೆ ಬ್ರಿಟೀಷರ ಒಡೆದು ಆಳುವ ನೀತಿಗೆ ಹೊಲಿಸುತ್ತೇನೆ, ನಮ್ಮ ಬೇರುಗಳನ್ನು ಕಿತ್ತೊಗೆಯಲು ಈ ಅಗಲಿಕೆಯೂ ಒಂದು ಸಂಚೇ ??? ಹಳ್ಳಿಯ ಪ್ರತಿಯೊಂದು ಮನೆಗಳ ಬೆಳವಣಿಗೆಗೂ/ ಆತಂಕಕ್ಕೂ ದೊಡ್ಡಣ್ಣ ಅಮೇರಿಕ, ಪ್ರತ್ಯಕ್ಷ್ಯ/ ಪರೋಕ್ಷವಾಗಿ ಸಾಕಷ್ಟು ಪ್ರಭಾವ ಬೀರಿದೆ.

ಒಬ್ಬ ಡಾಕ್ಟರ್ ರೊಗಿಗಳನ್ನು ಗುಣಪಡಿಸುತ್ತಾನೆ, ಒಬ್ಬ ಶಿಕ್ಷಕ ಜಗತ್ತಿಗೆ ವಿದ್ಯದಾನ ಮಾಡುತಾನೆ, ಹಾಗಾದರೆ ಸಮಾಜದಲ್ಲಿ ನನ್ನ ಕಾರ್ಯಕ್ಷೆತ್ರವೇನು ? ಬೇರೆ ಕೆಲಸಗಳಿಗೆ ಇರುವ ಒಂದು ನಿರ್ದಿಷ್ಟ ವ್ಯಾಸ, ಪರೀಧಿ ನನಗೆಕೆ ಇಲ್ಲಾ ? ಪ್ರತಿಯೊಂದು ಕ್ಷೇತ್ರದ ಹುಟ್ಟಿಗೂ ಕಾರಣವಿರುವಾಗ, ನಾನೇನು ದಿಢೀರನೆ ಹುಟ್ಟಿ ಬಂದ ಉದ್ಭವ ಮೂರ್ತಿಯೆ ? ಈ ದೇಶದಲ್ಲಿ ನನ್ನ ಆಯುಷ್ಯ ಎಷ್ಟು ದಿನ ? ಬೆಲೆ ಇರುವ ವರೆಗೂ ಅಷ್ಟೇ ಈ ಕೆಲಸ ಎನ್ನುತ್ತಾರೆ, ಹಾಗಾದರೆ ನನ್ನದೇನು ವ್ಯಭಿಚಾರವೇ ?

ಎಂದು ತನ್ನ ಹುಟ್ಟನ್ನು ಮತ್ತು ಜನನದ ಮೂಲ ಉದ್ದೆಶವನ್ನು ತಿಳಿಯುವ ಒಂದು ನಿರ್ಜೀವ ಪಾತ್ರದ ತೊಳಲಾಟವನ್ನು ಈ ಕೆಳಗಿನಂತೆ ವಿವರಿಸಿದ್ದೇನೆ.


--:ಆಗುಂತಕನ ಆಡದ ಮಾತುಗಳು:--
ನಾನ್ಯಾರು ???? ನಾನೇಕೆ ಇಲ್ಲಿಗೆ ಬಂದೆ ?????
ತುಂಬಾ ದಿನಗಳಿಂದ ಇಂತಹದ್ದೊಂದು ಪ್ರಶ್ನೆ ಮನದಲ್ಲಿ ಮಿಡಿಯುತ್ತಿತ್ತು, ಕೆಲವೊಂದು ಪ್ರಶ್ನೆಗಳೇ ಹಾಗೆ ಬಿಟ್ಟೇನೆಂದರೂ ಬಿಡದೇ ಕಾಡುತ್ತವೆ, ಬೇಡವೆಂದರೂ ನಾಲಿಗೆ ಮತ್ತೆ ಮತ್ತೆ ನೋಯುವ ಹಲ್ಲಿಗೇ ಮುತ್ತಿಕುತ್ತದಲ್ಲಾ ಹಾಗೆ. ಈ ನನ್ನ ಆಂತರ್ಯದ ಮಾರ್ದನಿ ಕೆಳಿಸಿಕೊಳ್ಳುವ ಕಿವಿಗಳಾಗಲೀ, ಅಥವಾ ವ್ಯವಧಾನವಾಗಲೀ ಯಾರಿಗೂ ಇರಲಿಲ್ಲವೆನಿಸುತ್ತದೆ.ಅಂದು ನಾನು ಏನೊ ಕೇಳಲು ಹೊರಟ ನನ್ನ ಪಾಡು ಅಕ್ಷರಶಃ ಮೂಕ ಪ್ರೇಕ್ಷಕನಾಗಿತ್ತು, ಬಲೆಗೆ ಸಿಕ್ಕಿ ಹೊರಬರಲು ನರಳಾಡುವ ಅಸಹಾಯಕ ಇಲಿಯಂತಾಗಿತ್ತು. ನನ್ನ ಒಂದೇ ಪ್ರಶ್ನೆ ಅಂದು ಎಲ್ಲರಿಗೂ ಅಪಥ್ಯವಾಗಿತ್ತು, ನನ್ನ ಸರಿಯಾದ ಚಿತ್ರಣವನ್ನು ನಾನು ತೆಗೆದುಕೊಳ್ಳಲು ಪ್ರಯತ್ನಿಸಿದ್ದು ತಪ್ಪೆ ?

ಸದ್ಯಕ್ಕೆ ನನ್ನನ್ನು ಜಾಗತೀಕರಣದ ಪರಿಣಾಮವಾಗಿ ಹುಟ್ಟಿದ ಕೂಸೆಂದೂ, ಉದಾರೀಕರಣ ನನ್ನ ತಂದೆ ಎಂದೂ, ಮುಕ್ತ ಮಾರುಕಟ್ಟೆಯಲ್ಲಿ ನನ್ನದೇ ಪ್ರಮುಖ ಪಾತ್ರವೆಂದೂ, ದೇಶದ ಆರ್ಥಿಕ ನೀತಿಯ ಕೊಡುಗೈದಾನಿಯೆಂದೂ ನನ್ನನ್ನು ಸುಮ್ಮನಿರಿಸಿದರು. ರಚ್ಚೆ ಹಿಡಿದ ಮಗುವಿಗೆ ಅಮ್ಮನ ಹುಸಿ ಸಾಂತ್ವನದಂತೆ.

ಅದಾದ ಕೆಲವೇ ದಿನದ ನಂತರ ನನ್ನ ಇನ್ನೊಂದು ಪ್ರಶ್ನೆ ನಾನೇಕೆ ಇಲ್ಲಿಗೆ ಬಂದೆ ???
ಈ ಅನಿರೀಕ್ಷಿತ ಪ್ರಶ್ನೆ ನನಗೇ ಅನಿರೀಕ್ಷಿತವಾಗಿತ್ತು, ವಿಶ್ವದ ಮೂಲೆ ಮೂಲೆಯನ್ನು ಆಕ್ರಮಿಸಿರುವ ನಾನು ಬೇರಾವ ದೇಶದಲ್ಲೂ ಎಂದೂ ಇಂತಹ ಪ್ರಶ್ನೆಯನ್ನು ಕೇಳಿಕೊಂಡಿರಲಿಲ್ಲ, ಮೊದಲ ಸಾರಿ ನನಗೆ ಇಂತಹ ಸನ್ನಿವೇಶ ಎದುರಾಗಿತ್ತು. ಮನಸು ತಪ್ಪು ಮಾಡಿದೆನೆ? ಎಂಬ ಪಾಪಪ್ರಜ್ನೆಯಿಂದ ಬಳಲುತ್ತಿತ್ತು. ಮೊದಲಿನ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕಂಡು ಈ ಪ್ರಶ್ನೆಗಾದರೂ ಉತ್ತರ ಹುಡುಕುವಂತೆ ನನ್ನ ಅಂತರಂಗ ಕೂಡ ಸ್ವಲ್ಪ ಜೋರಾಗೇ ಗುಟುರು ಹಾಕಿತು.

ನಾನು ಭಾರತಕ್ಕೇ ಏಕೆ ಬರಬೇಕಾಯಿತು ??
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ, ಬಹುಜಾತೀಯ, ಬಹುಧರ್ಮ/ಪರಂಪರೆಗಳ ನೆಲೆ, ಸಂಸ್ಕ್ರುತಿಗಳ ಬೀಡು, ಮುಕ್ಕೋಟಿಗೂ ಅಧಿಕ ದೇವರುಗಳುಳ್ಳ, ದೇವರು/ಆಚಾರ/ವಿಚಾರಗಳಲ್ಲಿ ಅಪಾರ ನಂಬಿಕೆಯುಳ್ಳ, ಒಟ್ಟಿನಲ್ಲಿ "ವಿವಿಧತೆಯಲ್ಲಿ ಏಕತೆ" ಎಂಬ ಮಂತ್ರವನ್ನು ಕನಸಿನಲ್ಲೂ ಜಪಿಸುವ ವಿಶಾಲ ಹ್ರುದಯ. ಸಾಲು ಸಾಲು ಅವಿಭಕ್ತ ಕುಟುಂಬಗಳ ಆಗರ.

ಹಸಿವು ಮತ್ತು ಬಡತನವೆಂಬ ರುದ್ರತಾಂಡವವಾಡುವ ಎರಡು ಶತ್ರುಗಳನ್ನು ಬಗಲಲ್ಲೇ ಇಟ್ಟುಕೊಂಡಿದ್ದರೂ ಸ್ವಾಭಿಮಾನಿಗಳಾಗಿ, ಮಗ್ಗುಲಲ್ಲೇ ಬೆಂಕಿಯ ಭೂತವನ್ನು ಇಟ್ಟುಕೊಂಡಿದ್ದರೂ ಶಾಂತಿಪ್ರಿಯರಾಗಿ, ಇತರರಿಗೆ ಮಾದರಿಯಾಗಿದ್ದ ದೇಶವಿದು.ಸುಮಾರು ೮೦೦ ವರ್ಷಗಳ ಕಾಲ ಮುಸ್ಲೀಮರು, ೨೦೦ ವರ್ಷಗಳ ಕಾಲ ಬ್ರಿಟೀಷರ ಕಪಿಮುಷ್ಟಿಯಲ್ಲಿ ಸಿಕ್ಕಿ ನರಳಾಡಿದರೂ, ಇನ್ನೂ ತೇಜೋರೂಪಿಣಿಯಾಗಿ ಕಂಗೊಳುಸುತ್ತಿದ್ದಾಳೆ ನಿಮ್ಮ ಈ ಭಾರತ ಮಾತೆ, ಇದೂ ಕೂಡ ಒಂದು ವಿಸ್ಮಯವೇ ಸರಿ. ತನಗೆ ಕೇಡು ಬಗೆಯುವವರಿಗೂ ಒಳ್ಳೆಯದನ್ನು ಬಯಸುವ ರಾಷ್ಟ್ರವಿದು, ಎಂದು ನನ್ನ ದೇಶದಲ್ಲೂ ಭಾರತಕ್ಕೆ ಅದೇ ಮರ್ಯಾದೆ.

ಜಗತ್ತನ್ನೇ ನಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಡಬೇಕು ಎಂಬ ನನ್ನ ದೇಶದ ಒಂದು ವಿಲಕ್ಷಣ ಬಯಕೆ ಇದೆ, ಅದಕ್ಕಾಗಿ ನಾವು ಏನು ಮಾಡಲೂ ಸಿದ್ಧ ಎಂಬುದನ್ನು ಇಗಾಗಲೇ ನಿಮಗೆ ನಿರೂಪಿಸಿದ್ದೇವೆ, ಅಂದಿನ ಪ್ರಬಲ ರಷ್ಯಾಕ್ಕೆ ಬಿಸಿಮುಟ್ಟಿಸಲು ಬಿನ್ ಲ್ಯಾಡೆನ್ ನನ್ನು ಬೆಳೆಸಿದ್ದು, ನಿಮ್ಮ ಪಕ್ಕದ ದಾಯಾದಿ ತಮ್ಮನಿಗೆ ಪ್ರತಿ ವರ್ಷ ಭಯೊತ್ಪಾದನೆಗೆಂದೇ ಅಭಿವ್ರುದ್ಧಿಯ ನೆಪದಲ್ಲಿ ಆರ್ಥಿಕ ಪ್ಯಾಕೆಜ್ ಪ್ರಕಟಿಸುವುದು, ಅವುಗಳಲ್ಲಿ ಕೆಲವು. ಉಗ್ರವಾದ/ಭಯೋತ್ಪಾದದ ಹುಟ್ಟಿಗೆ ನಮ್ಮ ಕಾಣಿಕೆ ಅಪಾರ, ಆದರೂ ನಾವು ಶಾಂತಿ ಪ್ರಿಯ ಕ್ರಿಸ್ತ ನ ಅನುಯಾಯಿಗಳು ಎಂದೇ ಕರೆಸಿಕೊಳ್ಳಲು ಇಷ್ಟ ಪಡುತ್ತೇವೆ, ಮಗುವನ್ನು ಚಿವುಟುವುದು ನಾವೇ ಅದು ರಚ್ಚೆ ಹಿಡಿದಾಗ ತೊಟ್ಟಿಲು ತೂಗುವುದು ನಾವೇ. ಇದು ವಿಚಿತ್ರವಾದರೂ ಸತ್ಯ.

ನನ್ನ ಆತಂಕಕ್ಕೆ ಕಾರಣವಾಗಿದ್ದೇ ಈ ಮೇಲಿನ ಆಂಶಗಳು, ವ್ಯವಹಾರಿಕತೆಯ ಸೊಂಕು ಎಳ್ಳಷ್ಟೂ ಇರದೇ ಬರೀ ಪ್ರೀತಿ ವಿಶ್ವಾಸವೇ ಜೀವನ ಎಂದು ನಂಬಿರುವ ಭಾರತವೆಲ್ಲಿ, ಹೆಜ್ಜೆ ಹೆಜ್ಜೆಗೂ ಲಾಭದ ಲೆಕ್ಕ ಹಾಕುವ ನಾವೆಲ್ಲಿ.ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಇರಾಕ್ ಮೆಲೆ ದಾಳಿ, ಸೌಥ್ ಆಫ಼್ರಿಕಾದ ಗಣಿ ನಿಕ್ಷೇಪಗಳನ್ನು ಪತ್ತೆ ಹಚ್ಚಿ ಹಣದ ಆಮೀಷ ತೋರಿಸಿ ಅವರದೇ ದೇಶದ ಬಾಲ ಕಾರ್ಮಿಕರ ಸಹಾಯದಿಂದ ಅವರ ದೆಶವನ್ನೇ ಕೊಳ್ಳೆ ಹೊಡೆದ (ಕು)ಖ್ಯಾತಿ ನಮ್ಮದು. ಅಷ್ಟೆಲ್ಲಾ ಬಿಡಿ "ಒಂದು ಪ್ರೀತಿಯ ಸ್ಪರ್ಶದಿಂದ ಎಂತಹ ನೋವನ್ನೂ ಮರೆಸಬಹುದು" ಎಂದ ಮದರ್ ತೆರೆಸಾ ನನ್ನೆ ನಾವು ನಮ್ಮ ಕಾರ್ಯ ಸಾಧನೆಗೆ ಬಳಸಿಕೊಂಡೆವು, ಮಲ ಮೂತ್ರದಲ್ಲೂ ಲಾಭ ಹುಡುಕುವ ಇವರು, ನನ್ನನ್ನು ಪಟ್ಟದರಸನ್ನನ್ನಾಗಿ ಮಾಡಿ ಭಾರತಕ್ಕೆ ಏಕೆ ಕಳಿಸುತ್ತಿದ್ದಾರೆ ಎಂಬುದೇ ನನಗೆ ಆಗ ಯಕ್ಷ ಪ್ರಶ್ನೆಯಾಗಿತ್ತು. ಅಂತಹದೊಂದು ಅಂಜಿಕೆಯಿಂದಲೇ ನಾನು ಇಲ್ಲಿಗೆ ಬಂದೆ.
ಒಂದು ದೇಶದ ಮೇಲೆ ಇಷ್ಟೊಂದು ಆಕ್ರಮಣಗಳಾಗಿಯೂ, ಸಂಪನ್ಮೂಲಗಳ ಕೊಳ್ಳೆ ಹೊಡೆದರೂ, ಇಷ್ಟೊದು ಬಡವರಿದ್ದರೂ ಇನ್ನೂ ಈ ದೇಶದಲ್ಲಿ ಆಮಿಶಗಳಿಗೆ ತಡೆಯೊಡ್ಡೂತ್ತಿರುವ ಶಕ್ತಿ ಯಾವುದು ? ಅದುವೇ ಧರ್ಮ, ಸಂಸ್ಕ್ರುತಿ, ಆಚಾರ, ವಿಚಾರಗಳು. ಯುವಜನಾಂಗ ಇವೆಲ್ಲವುಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ, ಭದ್ರವಾಗಿರುವ ಧಾರ್ಮಿಕ ಬೇರುಗಳನ್ನು ಸಡಿಲಿಸುವಂತೆ/ಕಿತ್ತೊಗುವಂತೆ ಮಾಡುವ ಮನೆಹಾಳು ಕೆಲಸದ ಪ್ರತಿನಿಧಿಯಾಗಿ ನನ್ನನ್ನು ಕಳಿಸಲಾಯಿತೇ ?

ನಾನಿಲ್ಲಿ ಬಂದದ್ದೇ ತಡ, ಇಲ್ಲಿನ ಯುವ ಜನಾಂಗ ಭೂತ ಭವಿಷ್ಯಗಳ ಹಂಗಿಲ್ಲದೇ ಬರೀ ವರ್ತಮಾನದಲ್ಲಿ ಬದುಕುತ್ತಿದ್ದಾರೆ, ನಾ ತಂದ ಮುಖವಾಡವನ್ನೇ ಹಾಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ, ಭಾವುಕತೆಯ ನೆರಳೂ ಕೂಡ ನೊಡದಂತೆ ವರ್ತಿಸುತ್ತಿದ್ದಾರೆ, ಹಿಂದಿನ ನಂಬಿಕೆಗಳು, ಮೌಲ್ಯಗಳು ಈಗ ಅಪ್ರಸ್ತುತ ವಾಗುತ್ತಿವೆ, ನನ್ನದೇ ಹೆಸರಿನಿಂದ ಉದ್ಯೋಗ, ಕೈ ತುಂಬಾ ಹಣ ಗಳಿಸುತ್ತಿದ್ದಾರೆ ಅದನ್ನು ನಮ್ಮ ದೇಶದವರಂತೆಯೇ ಚೆಲ್ಲು-ಚೆಲ್ಲಾಗಿ ಖರ್ಚುಮಾಡುತ್ತಿದ್ದಾರೆ, ಓದಿನಲ್ಲಿಯೂ ಮೊದಲಿನ ಶ್ರದ್ಧೆಯಾಗಲೀ ಆಸಕ್ತಿಯಾಗಲೀ ಇಲ್ಲ, ಅವಿಭಕ್ತ ಕುಟುಂಬದ ಕಲ್ಪನೆಯೇ ಮಾಯವಾಗುತ್ತಿದೆ. ಒಂದು ದೇಶ ಧರ್ಮಶೂನ್ಯವಾಗಲು, ಅಭಿಮಾನಶೂನ್ಯವಾಗಲೂ ಇಷ್ಟು ಸಾಕಲ್ಲವೇ ?

ಹೌದು, ನಿಜವೋ ಸುಳ್ಳೋ ಅಂತದ್ದೊಂದು ಸಂಶಯ ನನ್ನಲ್ಲಿ ಮೊಳಕೆಯೊಡೆಯತೊಡಗಿತು "ಒಂದು ದೇಶ ಆರ್ಥಿಕವಾಗಿ ದಿವಾಳಿಯಾದರೆ ಸರಿಮಾಡಬಹುದು ಆದರೆ ಅದರ ಸಂಸ್ಕ್ರುತಿ ದಿವಾಳಿಯಾದರೆ ? " ಅದು ಇನ್ನೊಂದು ಸಂಸ್ಕ್ರುತಿಗೆ ನಾಂದಿಯಾಗುತ್ತದೆ, ಹಾಗಾದರೆ ನಾನು ಇನ್ನೊಂದು ಸಂಸ್ಕ್ರುತಿಯನ್ನು ಪ್ರತಿಷ್ಠಾಪಿಸಲು ಬಂದಿರುವ ರಾಯಭಾರಿಯೆ ?
ಕೆಲವೇ ದಿನಗಳಲ್ಲಿ ವ್ಯವಸ್ಥಿತ ಹುನ್ನಾರದ ವಾಸನೆ ನನಗೆ ಬಡಿಯಲಾರಂಭಿಸಿತು, ಮನದ ಮೂಲೆಯಲ್ಲಿ ವಿಶಾದ ಗೀತೆ "ನಾನಾರೆಂಬುದು ನಾನಲ್ಲ" ನಾನು ಬೆರೊಂದು ಕೆಲಸ ಸಾಧನೆಗೆ ಉಪಯೊಗಿಸಿಕೊಳ್ಳುತ್ತಿರುವ ವಸ್ತು ಎಂದು ಮನಸ್ಸು ಒತ್ತಿಹೇಳುತ್ತಿತ್ತು. ಇದು ನಿಜವೇ ಆಗಿದ್ದಲ್ಲಿ ಇಂತಹದ್ದೊಂದು ಧಾರ್ಮಿಕ ವ್ಯಭಿಚಾರಕ್ಕೆ ನನ್ನ ಧಿಕ್ಕಾರವಿರಲಿ ಎಂದೂ ಮನಸ್ಸು ಕೂಗಿ ಹೆಳುವಂತಾಯ್ತು. ಆದರೆ ನನ್ನದೂ ಕೂಡ ಮೂಕ ಹಕ್ಕಿಯ ಮೌನ ರಾಗವೇ ಅಲ್ಲವೇ ???... ಪಕ್ಕದ ಏಸುವಿನ ಪ್ರತಿಮೆಯ ಮುಖದಲ್ಲಿ ಮಂದಹಾಸದ ನಗುವಿತ್ತು, ಶಿಲುಬೆ ಅಳುಗಾಡುತ್ತಾ ನಿಮ್ಮನ್ನೆಲ್ಲ ಆಹ್ವಾನಿಸಿದಂತಾಯ್ತು...

ಸದ್ಯದ ನನ್ನ ಹೆಸರು : ಸಾಫ಼್ಟವೇರ್ ಇಂಜಿನಿಯರ್
ನನ್ನ ದೇಶ: ಸ್ವಯಂಘೋಷಿತ ಭುಲೋಕದ ಸ್ವರ್ಗ "ಅಮೇರಿಕ"

ಮಾನಸವಾಣಿಯಿಂದ:
-ಚಂದ್ರು
csbyadgi@gmail.com

Monday, June 29, 2009

ನಾ ಬರೆದ ಕಾವ್ಯ...

ನಾ ಬರೆದ ಕಾವ್ಯ, (ಕಾವ್ಯವೇ... ಎಂಬ ಜಿಜ್ನಾಸೆ ನನ್ನಲ್ಲಿ ಇನ್ನೂ ಕಾಡುತ್ತಿದೆ)
ಎಂದೋ ಒದಿದ ಒಳ್ಳೆ ಕವಿತೆಗಳಿಂದ ಸ್ಪೂರ್ತಿಗೊಂಡು, ನನ್ನಲ್ಲೂ ಹುಟ್ಟಿದ ಮಾನವ ಸಹಜ
ಬಯಕೆಗೆ ನೀರೆರೆದು ಪೊಷಿಸಿದಾಗ ಹುಟ್ಟಿದ ಬ್ರೂಣಾವಸ್ಥೆಯ ಶಿಶು.

ನನ್ನ ಈ ಬಹುದಿನಗಳ "ಕಾವ್ಯಮಿಮಾಂಸೆಯ" ಪ್ರಸವ ವೇದನೆಯನ್ನು ಕೆಳಗಿನ ಕಾವ್ಯಗಳಿಂದ ಪೂರ್ಣಮಾಡಿಕೊಳ್ಳುತ್ತಿದ್ದೇನೆ, ಇದು ಗರ್ಭಪಾತವೊ..ಸರಳ ಹೆರಿಗೆಯೋ ಎಂಬ ತೀರ್ಪು ನಿಮ್ಮದು. ತುಂಬು ಹ್ರುದಯದಿಂದ ಸ್ವೀಕರಿಸುತ್ತೀರೆಂಬ ನಂಬಿಕೆ ಮಾತ್ರ ನನ್ನದು.

ಮನೆವರೆಗೆ ಬಂದವಳು ಮನೆಯೊಳಗೂ(ಮನದೊಳಗೂ ?) ಬಂದಳು ಎನ್ನುವಂತೆ..
ಮನದೊಳಗೆ ಮೂಡಿದ ದ್ರುಶ್ಯಕ್ಕೆ, ಕಾವ್ಯ ಸ್ಪರ್ಶ ಕೊಟ್ಟಿದ್ದೇನೆ.

ವಿಮರ್ಶೆಯು ವ್ಯಕ್ತಿಯ ಮೊದಲಿನ ತಪ್ಪಿನ ಪುನರಾವರ್ತನೆಯನ್ನು ತಪ್ಪಿಸುತ್ತದೆ, ಭವಿಷ್ಯದ ಕೆಲಸಗಳಿಗೆ ಎಚ್ಚರಿಸುತ್ತದೆ, ಮುಂದಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ,ಮತ್ತು ಸ್ರುಜನಶೀಲತೆ ಹಾಗೂ ಕ್ರಿಯಾಶೀಲತೆಗೆ ಉತ್ತೇಜಿಸುತ್ತದೆ.ಒಟ್ಟಿನಲ್ಲಿ ವ್ಯಕ್ತಿಯ ಏಳ್ಗೆಗೆ ವಿಮರ್ಶೆ ಸಹಕಾರಿ. ದಯವಿಟ್ಟು ಸಹಕರಿಸಿ.


ನೀನ್ಯಾರೆ ?

ನಿನ್ನದೊಂದು ನೆನಪು, ಮುಂಗಾರು ಮಳೆಯಲ್ಲಿ ಮಿಂದೆದ್ದ ಅನುಭವ
ನಿನ್ನದೊಂದು ಕನಸು, ಸಿಹಿ ಸಂಜೆಯಲಿ ತಂಗಾಳಿ ಸ್ಪರ್ಶಿಸಿದ ಕಲರವ

ಮಲೆನಾಡ ಸಿರಿಯೂ ಮರುಳಾಗಿ ನಿಂತಿದೆ ನಿನ್ನ ರೂಪ ರಾಶಿಗೆ
ಬರುಡಾದ ಮನಸು ಹಸಿರಾಗಿ ಮಾಗಿದೆ ಸೌಂದರ್ಯ ಸೊಬಗಿಗೆ

ಕಹಿ ಬೇವು ಕೂಡ ಸಿಹಿಯೆನಿಸಿದೆ, ನಿನ್ನ ನೆನೆದ ಆ ಕ್ಷಣ
ಕ್ಷಣ ಕೂಡ ಯುಗವಾಗಿ ವಿರಹಿಸಿದೆ, ನೀನಿಲ್ಲದ ಈ ಕ್ಷಣ

ನೀ ನಡೆವ ಹಾದಿಯಲಿ ಕನಸಲ್ಲೂ ಜೊತೆಯಿರುವೆ
ನೆರಳಂತೆ ಹಿಂಬರುವೆ ನೆರಳಾಗಿ ಹಿತಕೊಡುವೆ

ಬರಿದಾದ ಮನಸಲ್ಲಿ ಭಾವನೆ ತರಿಸಿದವಳೆ
ಮರುಭೂಮಿ ಬಿಸಿಲಲ್ಲೂ ತಂಪು ಸುರಿಸುವವಳೆ...

ಮಿಂಚಾಗಿ ಬಂದೆ, ಮಿಂಚಂತೆ ಹೋದೆ.... ನೀನ್ಯಾರೆ ?



"ಅಮ್ರುತಘಳಿಗೆ"

ನನ್ನವಳು ನನ್ನೆದುರು ನಸುನಗುತ ನಿಂತಾಗ...

ಮುದ್ದಾದ ಮುಖದಲ್ಲಿ ಮಂದಹಾಸ ತೇಲಿಬಂತು
ನಾಚಿಕೆಯು ಮೈದುಂಬಿ ಅಪ್ಸರೆಯ ನಾಚಿಸಿತು

ಕಣ್ಣು ನೋಟ ಬೀರಿತು, ರೆಕ್ಕೆ ಬಡಿದು ಸಮ್ಮತಿ ನೀಡಿತು
ಮುಂಗುರುಳು ಕೂಡ ಮುಂಚಾಚಿ ಶುಭಕೋರಿತು

ಧರೆ ಕೂಡ ತಂಪಾಗಿ ತಂಗಾಳಿ ತೇಲಿ ಬಂತು
ಬಾನಿಂದ ಮೊಡ ಕರಗಿ ಮಳೆಯಾಗಿ ಸಿಂಚಿಸಿತು

ಹಗಲಲ್ಲೂ ಶಶಿಗೆ ಸ್ಪರ್ಶಿಸುವ ಮನಸಾಯ್ತು
ಭಾಸ್ಕರನ ಬೇಗ ಬರುವಂತೆ ಭಿನ್ನವಿಸಿತು

ಮಣಭಾರ ಮನಸು ನವಿರಾಗಿ ತಿಳಿಯಾಯ್ತು
ಜೀವ ಕಾವ್ಯ ಬರೆಯಿತು, ಕಾವ್ಯ ನನ್ನವಳ ಕಣ್ಸೆಳೆಯಿತು

ಹುದುಗಿಟ್ಟ ಪ್ರೀತಿಯ ಮನಸು ತೆರೆದಿಟ್ಟಿತು
ಜೊಡಿ ಜೀವಗಳ ಜೀವನ ಶುರುವಾಯಿತು


ಮಾನಸವಾಣಿಯಿಂದ:
-ಚಂದ್ರು
csbyadgi@gmail.com









sooryasta

sooryasta

Followers